ಪ.ಬಂಗಾಲದಲ್ಲಿ ಹಿಂಸಾಚಾರ; ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಕೆ
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಜೂನ್ 9: ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಶನಿವಾರ ನಡೆದ ಹೊಡೆದಾಟದಲ್ಲಿ ಬಿಜೆಪಿಯ ಇಬ್ಬರು ಹಾಗೂ ತೃಣಮೂಲ ಕಾಂಗ್ರೆಸ್ ನ ಒಬ್ಬ ಕಾರ್ಯಕರ್ತ ಮೃತಪಟ್ಟಿದ್ದಾರೆ. ಇನ್ನೊಬ್ಬರು ಕೂಡ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದ್ದು, ಐವರು ನಾಪತ್ತೆಯಾಗಿದ್ದಾರೆ.
ಈ ಹಿಂಸಾಚಾರದ ಬಗ್ಗೆ ವರದಿ ಕೇಳಿರುವ ಪಕ್ಷದ ರಾಷ್ಟ್ರಾಧ್ಯಕ್ಷರೂ ಆಗಿರುವ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಆಗಲು ಪಕ್ಷದ ನಾಯಕ ಮುಕುಲ್ ರಾಯ್ ಸೇರಿ ಇತರರ ನಿಯೋಗ ದೆಹಲಿಗೆ ತೆರಳಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪ.ಬಂಗಾಲದಲ್ಲಿ ಅದ್ಭುತವಾದ ಗೆಲುವು ಸಾಧಿಸಿದ ನಂತರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಜತೆಗಿನ ಹೊಡೆದಾಟ ಹೆಚ್ಚಾಗಿದೆ.
ಕಳೆದ ಹತ್ತು ದಿನದೊಳಗೆ ಮೂರು ಹೊಡೆದಾಟ ಘಟನೆಗಳು ವರದಿ ಆಗಿವೆ. ಬುರ್ದವಾನ್ ಜಿಲ್ಲೆಯಲ್ಲಿ ಮೇ ಮೂವತ್ತರಂದು ಬಿಜೆಪಿ ಕಾರ್ಯಕರ್ತರೊಬ್ಬರನ್ನು ಟಿಎಂಸಿ ಕಡೆಯವರು ಹತ್ಯೆ ಮಾಡಿದ್ದಾರೆಂದು ಆರೋಪಿಸಲಾಯಿತು. ಅದಾಗಿ ಎರಡು ದಿನಕ್ಕೆ ತೃಣಮೂಲ್ ಕಾಂಗ್ರೆಸ್ ಬೆಂಬಲಿಗನನ್ನು ಕೂಚ್ ಬೆಹರ್ ನಲ್ಲಿ ಕೊಲ್ಲಲಾಯಿತು. ಅದಕ್ಕೆ ಎರಡು ದಿನ ಮೊದಲು ಕೋಲ್ಕತ್ತಾದಲ್ಲಿ ಒಬ್ಬಾತನನ್ನು ಗುಂಡಿಟ್ಟು ಕೊಲ್ಲಲಾಗಿತ್ತು.

ಈ ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವರು ರಾಜ್ಯದಿಂದ ವರದಿ ಕೇಳಿದ್ದಾರೆ. ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿದೆ. ಜನರಲ್ಲಿ ಘಟನೆ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಹೇಳಿದ್ದಾರೆ.
ಟಿಎಂಸಿಯ ಕಾರ್ಯಕರ್ತರಿಂದ ಖಯೂಂ ಮೊಲ್ಲಾ ಹತ್ಯೆಗೀಡಾದರೆ, ಪ್ರದೀಪ್ ಮೊಂಡಲ್ ಮತ್ತು ಸುಕಾಂತ ಮೊಂಡಲ್ ಬಿಜೆಪಿ ಕಾರ್ಯಕರ್ತರಿಂದ ಹತ್ಯೆಗೆ ಈಡಾಗಿದ್ದಾರೆ. ಈ ಮಧ್ಯೆ ಸಿಪಿಎಂ ಪಕ್ಷದ ಕಾರ್ಯಕರ್ತನೊಬ್ಬನ ಹತ್ಯೆಯಾಗಿದ್ದು, ಅದರ ವಿರುದ್ಧ ಪಕ್ಷವು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.












Click it and Unblock the Notifications