ಬಿರ್ಭೂಮ್ ಹಿಂಸಾಚಾರ: ಮೃತರ ಕುಟುಂಬಸ್ಥರಿಗೆ 5 ಲಕ್ಷ ನೆರವು ನೀಡಿದ ಮಮತಾ
ಕೋಲ್ಕತ್ತಾ ಮಾರ್ಚ್ 24: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ (ಮಾರ್ಚ್ 24) ರಾಮ್ಪುರಹತ್ನ ಬಗ್ತುಯಿ ಗ್ರಾಮವನ್ನು ತಲುಪಿ ಬಿರ್ಭೂಮ್ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಿದರು. ಬಿರ್ಭೂಮ್ನ ರಾಮ್ಪುರಹತ್ನಲ್ಲಿ ತೃಣಮೂಲ (ಟಿಎಂಸಿ) ನಾಯಕನ ಹತ್ಯೆಯ ನಂತರ ಗುಂಪೊಂದು ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಎಂಟು ಜನರು ಸಜೀವ ದಹನವಾಗಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಅವರು ಬಿರ್ಭೂಮ್ ಹಿಂಸಾಚಾರದ ಸಂತ್ರಸ್ತರ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ನ್ಯಾಯದ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ ಮಮತಾ ಬ್ಯಾನರ್ಜಿ, ''ಆಡಳಿತದ ಕಡೆಯಿಂದ ದೊಡ್ಡ ನಿರ್ಲಕ್ಷ್ಯ ನಡೆದಿದೆ. ಟಿಎಂಸಿ ಮುಖಂಡನ ಹತ್ಯೆಯ ನಂತರ ಪೊಲೀಸರು ಎಚ್ಚೆತ್ತುಕೊಳ್ಳಬೇಕಿತ್ತು ಆದರೆ ಆಗಲಿಲ್ಲ. ಇದರ ಹಿಂದೆ ಯಾರೇ ಇದ್ದರೂ ಅವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು'' ಎಂದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿರ್ಭೂಮ್ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ, ಮನೆ ಸುಟ್ಟುಹೋದವರಿಗೆ ಒಂದು ಲಕ್ಷ ರೂಪಾಯಿ ಮತ್ತು ಮನೆ ನಡೆಸಲು 10 ಜನರಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿದ್ದಾರೆ. ಜೊತೆಗೆ ನಿರ್ಲಕ್ಷ್ಯ ತೋರಿದ ಎಸ್ಡಿಪಿಒ ಮತ್ತು ಒಸಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದೊಂದು ದೊಡ್ಡ ಷಡ್ಯಂತ್ರ. ಪೊಲೀಸರು ನ್ಯಾಯಯುತ ತನಿಖೆ ನಡೆಸುತ್ತಾರೆ ಎಂದರು.
ತೃಣಮೂಲ (ಟಿಎಂಸಿ) ನಾಯಕ ಮತ್ತು ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು, "ಬಿರ್ಭೂಮ್ನಲ್ಲಿನ ರಾಮ್ಪುರಹತ್ ಘಟನೆಯನ್ನು ಗಮನದಲ್ಲಿಟ್ಟುಕೊಂಡು, ನಾವು ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ನಾವು ಗೃಹ ಸಚಿವರನ್ನು ಕೇಳಿದ್ದೇವೆ. ನಾವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನೀಡಿದ ಪತ್ರದ ಪ್ರತಿಯನ್ನು ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಲಾಗಿದೆ. ಡೆರೆಕ್ ಒ'ಬ್ರಿಯಾನ್, ಮಹುವಾ ಮೊಯಿತ್ರಾ, ಸುದೀಪ್ ಬಂಡೋಪಾಧ್ಯಾಯ ಮತ್ತು ಇತರ ನಾಯಕರು ನಿಯೋಗದಲ್ಲಿ ಇದ್ದಾರೆ.
#WATCH | West Bengal CM Mamata Banerjee meets the kin of those killed in #Birbhum violence. Visuals from Bagtui village, Rampurhat pic.twitter.com/iIhSQjLpu8
— ANI (@ANI) March 24, 2022
ಮಾರ್ಚ್ 23 ರಂದು ಕಲ್ಕತ್ತಾ ಹೈಕೋರ್ಟ್ನ ಆದೇಶದಂತೆ ಬಂಗಾಳ ಸರ್ಕಾರವು ಈ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸುತ್ತಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಹಿಂಸಾಚಾರ ಘಟನೆಯ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಈಗಾಗಲೇ ಘಟನೆಗೆ ಸಂನಬಂಧಿಸಿದಂತೆ ಸುಮಾರು 20 ಜನರನ್ನು ಬಂಧಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಕೇಂದ್ರ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿಯನ್ನು ವಜಾಗೊಳಿಸಬೇಕು ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಬಿರ್ಭೂಮ್ ಹಿಂಸಾಚಾರದಲ್ಲಿ ಏನಾಯಿತು ಗೊತ್ತಾ?
ಮಂಗಳವಾರ (ಮಾರ್ಚ್ 22) ರಾಮ್ಪುರಹತ್ ಪಟ್ಟಣದ ಬಳಿಯ ಬೊಗ್ಟುಯಿ ಗ್ರಾಮದಲ್ಲಿ ಮೂವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಎಂಟು ಜನರನ್ನು ಅವರ ಮನೆಗಳಲ್ಲಿ ಬಂಧಿಸಿ ಸಜೀವ ದಹನ ಮಾಡಲಾಗಿದೆ. ಒಂದು ದಿನದ ನಂತರ ಸುಟ್ಟ ದೇಹಗಳು ಪತ್ತೆಯಾಗಿ ಶವಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹತ್ಯೆಯನ್ನು "ಹೇಯ" ಕೃತ್ಯ ಎಂದು ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ ಇದಕ್ಕೆ ಕಾರಣರಾದವರನ್ನು ಕ್ಷಮಿಸಬಾರದು ಎಂದು ಹೇಳಿದ್ದರು. ಇಂದು ಮರಣೋತ್ತರ ಪರೀಕ್ಷಾ ವರದಿ ಹರಬಂದಿದ್ದು, ಮೃತರ ಮನೆಗೆ ಬೆಂಕಿ ಇಡುವ ಮುನ್ನ ತೀವ್ರವಾಗಿ ಥಳಿಸಲಾಗಿತ್ತು ಎಂದು ತಿಳಿದು ಬಂದಿದೆ. ಈ ಹತ್ಯೆ ಸೋಮವಾರ (ಮಾರ್ಚ್ 21) ಸಂಜೆ ಸ್ಥಳೀಯ ತೃಣಮೂಲ ಕಾಂಗ್ರೆಸ್ ನಾಯಕನ ಹತ್ಯೆಯಿಂದ ಪ್ರಚೋದಿಸಲ್ಪಟ್ಟಿದೆ ಎಂದು ಶಂಕಿಸಲಾಗಿದೆ.












Click it and Unblock the Notifications