ಕೊರೊನಾ: ಬೆಂಗಳೂರಿಗೆ ಹೋಗ್ತೀವಿ ಅಂದು ಬ್ಯಾಂಕಾಕ್ ಗೆ ಹೋಗ್ ಬಂದ್ರು; ಮನೇಲಿ ಮುಂದಾ!
ಕೋಲ್ಕತ್ತಾ, ಮಾರ್ಚ್ 31: ಈ ಕೊರೊನಾವೈರಸ್, ಈ ಲಾಕ್ ಡೌನ್ ಮುಗಿಯುವಷ್ಟರಲ್ಲಿ ಏನೇನು ಆಗಿರುತ್ತೋ ದೇವರೇ ಬಲ್ಲ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಹಾಸ್ಯಕಾರಿ ವಿದ್ಯಮಾನವೊಂದು ನಡೆದಿದೆ.
ಸಮಾಜದಲ್ಲಿ ಗಣ್ಯರಾದ ಇಬ್ಬರು ಮನೇಲಿ ಸುಳ್ಳು ಹೇಳಿ, ಈಗ ಫುಲ್ ಟೆನ್ಸನ್ ನಲ್ಲಿದ್ದಾರೆ. ಭಾರತೀಯ ಜನತಾ ಯುವ ಐಟಿ ಮೋರ್ಚಾದ ಅಭಿಜಿತ್ ಬಸಕ್ ಎನ್ನುವವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ಬರುತ್ತೇವೆ ಎಂದು ಇಬ್ಬರು ಬ್ಯಾಂಕಾಂಕ್ ಗೆ ಹೋಗಿ ಬಂದಿದ್ದಾರೆ. ಈ ವಿಚಾರದ ಬಗ್ಗೆ ಮನೇಲಿ ಯಾರ ಬಳಿಯೂ ಬಾಯಿ ಬಿಟ್ಟಿರಲಿಲ್ಲ.

ಆದರೆ, ವಿದೇಶ ಪ್ರವಾಸ ಮಾಡಿ ಬಂದವರನ್ನು ಕ್ವಾರಂಟೈನ್ ಗೆ ಒಳಪಡಿಸುತ್ತಿರುವುದರಿಂದ, ಈ ಇಬ್ಬರ ಟ್ರಾವೆಲ್ ಹಿಸ್ಟರಿಯನ್ನು ಪೊಲೀಸರು ಕೆದಕಿದ್ದಾರೆ. ಇದಾದ ನಂತರ, ಇಬ್ಬರ ಮನೆಯ ಗೇಟ್ ಮೇಲೆ ಕ್ವಾರಂಟೈನ್ ನೋಟಿಸ್ ಅಂಟಿಸಿದ್ದಾರೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಇಬ್ಬರು ಆ ನೋಟಿಸ್ ಅನ್ನು ಹರಿದು ಹಾಕಿದ್ದಾರೆ. ಅವರಿಗೆ ಹೆಂಡತಿಯರಿಂದಲೂ ಆ ವೇಳೆ ಸಪೋರ್ಟ್ ಸಿಕ್ಕಿದೆ. ಆಗ, ಪೋಲಿಸರು ಅವರ ಬ್ಯಾಂಕಾಕ್ ಹಿಸ್ಟರಿಯನ್ನು ವಿವರಿಸಿದ್ದಾರೆ.
ಜೊತೆಗೆ, ಕ್ವಾರಂಟೈನ್ ಗೆ ಒಳಪಡುವುದು ಎಷ್ಟು ಮುಖ್ಯ ಎನ್ನುವುದನ್ನು ಮನವರಿಕೆ ಮಾಡಿ, ಬೆಂಗಳೂರಿಗೆ ಹೋಗುತ್ತೇನೆಂದು ಸುಳ್ಳು ಹೇಳಿ, ಬ್ಯಾಂಕಾಕ್ ಹೋದ ಇಬ್ಬರನ್ನು ಕ್ವಾರಂಟೈನ್ ಗೆ ಒಳಪಡಿಸಿದ್ದಾರೆ. ಇಬ್ಬರ ಮನೆಯಲ್ಲಿ, ಮುಂದೇನಾಗಿರಬಹುದು, ಊಹಿಸುವುದು ಸುಲಭ.












Click it and Unblock the Notifications