ಪ್ರಧಾನಿ ಪಟ್ಟಕ್ಕೆ ರಾಹುಲ್, ಒಪ್ಪಿಗೆ ನೀಡಿದ ಮಮತಾ ಬ್ಯಾನರ್ಜಿ?!
ನವದೆಹಲಿ, ಮೇ 15: "ನಮ್ಮ ಮೊದಲ ಆದ್ಯತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು. ಅದಕ್ಕಾಗಿ ನಾವು ಏನು ಮಾಡುವುದಕ್ಕೂ ರೆಡಿ" ಎಂದು ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು ಹೇಳಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಟಿಎಂಸಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಒಪ್ಪಿಕೊಳ್ಳುವುದಕ್ಕೂ ತಾವು ಸಿದ್ಧ ಎಂದು ಪರೋಕ್ಷವಾಗಿ ಹೇಳಿದೆ.
ಬಿಜೆಪಿ ವಿರುದ್ದ ಮಮತಾ ದೀದಿಗೆ ಈ ಪರಿ ಸಿಟ್ಟು, ಭಯ ಇದೇ ಕಾರಣಕ್ಕಾ?
ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದಕ್ಕೆ ಒಪ್ಪಿಕೊಳ್ಳುತ್ತಾರೆಯೇ? ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಅವರು ಇಷ್ಟೆಲ್ಲ ಸುಲಭವಾಗಿ ಆ ಕನಸನ್ನು ಬಲಿಕೊಡುತ್ತಾರೆಯೇ? ಎಂಬುದು ಈಗಿರುವ ಪ್ರಶ್ನೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಆದರೆ ಟಿಎಂಸಿ ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೊದಿ ಅವರು ಮತ್ತು ಮಮತಾ ಬ್ಯಾನರ್ಜಿ ಅವರ ನಡುವೆ ನಡೆದ ಮಾತಿನ ಸಮರ ಇಬ್ಬರ ನಡುವಲ್ಲಿ ಭಾರೀ ಕಂದಕ ಸೃಷ್ಟಿಸಿದೆ. ಇದರಿಂದ ಮಮತಾ ಬ್ಯಾನರ್ಜಿ ಅವರಿಗೆ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕೆಂಬ ಹಠ ಆರಂಭವಾಗಿದ್ದು, ಅದಕ್ಕಾಗಿ ಅವರು ಯಾವ ತ್ಯಾಗಕ್ಕೂ ಸಿದ್ಧರಾದರೆ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ಸದ್ಯಕ್ಕೆ ನರೇಂದ್ರ ಮೋದಿ ನೇತ್ಟತ್ವದ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ಮುಖ್ಯ ಗುರಿಯಾಗಿದೆ. ರಾಹುಲ್ ಗಾಂಧಿಯವರನ್ನು ಮೊದಲು ಪ್ರಧಾನಿಯಾಗಿ ನೇಮಕ ಮಾಡಲು ಒಪ್ಪಿದರೂ, ನಂತರ ತಾನು ಪ್ರಧಾನಿ ಪಟ್ಟದ ಬೇಡಿಕೆ ಇಡಬಹುದು ಎಂಬ ಯೋಚನೆಯನ್ನೂ ದೀದಿ ಮಾಡಿದಂತಿದೆ.
ಈ ದೇಶಕ್ಕೆ ನರೇಂದ್ರ ಮೋದಿ 'ದೊಡ್ಡ ಅಪಾಯ': ಮಮತಾ ಬ್ಯಾನರ್ಜಿ
ಮೇ 21 ರಂದು ವಿಪಕ್ಷಗಳ ಮುಖಂಡರು ಪ್ರಧಾನಿ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಸಭೆ ಸೇರಲಿದ್ದು, ಅಂದು ಮಮತಾ ಬ್ಯಾನರ್ಜಿ ಮತ್ತು ಮಾಯಾವತಿ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ದೀದಿ ಈ ಸಭೆಗೆ ಹಾಜರಾಗಿದ್ದೇ ಆದಲ್ಲಿ ರಾಹುಲ್ ಅವರನ್ನು ಅವರು ಬೆಂಬಲಿಸುವ ಸುದ್ದಿಯೂ ನಿಜವಾದರೆ ಅಚ್ಚರಿಯಿಲ್ಲ. ಆದರೆ ಇದುವರೆಗೂ ಎಲ್ಲಿಯೂ ಅವರು ತಾವಾಗಿಯೇ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ತಾವು ಬೆಂಬಲಿಸುವುದಾಗಿ ಹೇಳಿಲ್ಲ. ಯಾವುದಕ್ಕೂ ಮೇ 21 ರವರೆಗು ಕಾದು ನೋಡಬೇಕು.