ಅಪ್ಡೇಟೆಡ್ ಕಳ್ಳರು: ಹಣ ಬೇಡ್ವಂತೆ ಈರುಳ್ಳಿ ಮೂಟೆ ಇದ್ರೆ ದೋಚ್ತಾರೆ!
ಕೊಲ್ಕತ್ತ, ನವೆಂಬರ್ 28: ಕಳ್ಳರಿಗೆ ಹಣದ ಮೂಲ್ಯಕ್ಕಿಂತ ಈರುಳ್ಳಿ ಮೌಲ್ಯವೇ ಅಧಿಕ ಎಂದೆನಿಸರಬೇಕು, ಅಂಥದ್ದೊಂದು ಘಟನೆ ಕೊಲ್ಕತ್ತದಲ್ಲಿ ನಡೆದಿದೆ. ಕಳ್ಳತನಕ್ಕೆಂದು ಬಂದಿದ್ದ ಕಳ್ಳರು ಹಣವನ್ನು ಬಿಟ್ಟು ಕೇವಲ ಈರುಳ್ಳಿ ಮೂಟೆಗಳನ್ನು ಹೊತ್ತೊಯ್ದಿದ್ದಾರೆ.
ಈ ಘಟನೆ ಮಿಡ್ನಾಪುರ್ ಜಿಲ್ಲೆಯ ಸುತಹತ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ, ಸುತಹತ ನಗರದಲ್ಲಿ ಅಕ್ಷಯ್ ಎಂಬುವವರು ತರಕಾರಿ ಮಳಿಗೆಯನ್ನು ಇಟ್ಟುಕೊಂಡಿದ್ದರು.
ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?
ಸಂಜೆ ಎಂದಿನಂತೆ ಬಾಗಿಲು ಹಾಕಿಕೊಂಡು ಹೋಗಿದ್ದಾರೆ, ಮರುದಿನ ಬೆಳಗ್ಗೆ ಬಂದು ಬಾಗಿಲು ತೆರೆಯುವಷ್ಟರಲ್ಲಿ ಅಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಅಯ್ಯೋ ಅಂಗಡಿಯಲ್ಲಿ ಕಳ್ಳತನವಾಗಿದೆ ಎಂದು ಮೊದಲು ಹೋಗಿ ಹಣದ ಪೆಟ್ಟಿಗೆ ತೆರೆದಾಗ ಅದರಲ್ಲಿದ್ದ ಹಣ ಹಾಗೆಯೇ ಇತ್ತು.
ಹಾಗಾದರೆ ಏನು ಕದ್ದಿರಬಹುದು ಎಂದು ನೋಡಿದಾಗ ಅಲ್ಲಿದ್ದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ಚೀಲಗಳು ಕಣ್ಮರೆಯಾಗಿದ್ದವು. ಆಗ ಹಣದ ಮೌಲ್ಯಕ್ಕಿಂತ ಈರುಳ್ಳಿ ಮೌಲ್ಯವೇ ಹೆಚ್ಚು ಎಂಬುದು ಅರಿವಿಗೆ ಬಂದಂತಾಗಿದೆ. ಸುಮಾರು 50 ಸಾವಿರ ರೂ ಮೌಲ್ಯದ ತರಕಾರಿಗಳನ್ನು ಕದ್ದೊಯ್ದಿದ್ದಾರೆ. ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ಹಲವೆಡೆ ಈರುಳ್ಳಿ ಬೆಲೆ 100ರ ಗಡಿ ದಾಟಿದೆ.