'ದೀದಿ' ಪಶ್ಚಿಮ ಬಂಗಾಳದಲ್ಲಿ ಸ್ಪೀಡ್ ಬ್ರೇಕರ್ ಇದ್ದಂತೆ : ನರೇಂದ್ರ ಮೋದಿ ವಾಗ್ಬಾಣ
ಸಿಲಿಗುರಿ (ಪಶ್ಚಿಮ ಬಂಗಾಲ), ಏಪ್ರಿಲ್ 3 : ಅಬಿವೃದ್ಧಿ ಪಥದಲ್ಲಿ ಸಾಗುವಾಗ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ಸ್ಪೀಡ್ ಬ್ರೇಕರ್' ಇದ್ದಂತೆ ಎಂದು ಬುಧವಾರ ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
"ಪಶ್ಚಿಮ ಬಂಗಾಲದಲ್ಲಿ ಸ್ಪೀಡ್ ಬ್ರೇಕರ್ ಒಂದು ಇದೆ. ಅದರ ಹೆಸರು 'ದೀದಿ'. ನಿಮ್ಮ ಅಭಿವೃದ್ಧಿಗೆ ಈ 'ದೀದಿ'ಯೇ ಸ್ಪೀಡ್ ಬ್ರೇಕರ್" ಎಂದು ಮೋದಿ ಹೇಳಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ನರೇಂದ್ರ ಮೋದಿ ಆರಂಭಿಸಿದ ಬಿಜೆಪಿ ಪರವಾದ ಮೊದಲ ಚುನಾವಣೆ ಭಾಷಣದಲ್ಲೇ ಮಮತಾ ವಿರುದ್ಧ ಕಿಡಿ ಕಾರಿದ್ದಾರೆ.
"ನಾನು ಈ ಸ್ಪೀಡ್ ಬ್ರೇಕರ್ ಹೋಗಲಿ ಎಂದು ಕಾಯುತ್ತಿದ್ದೇನೆ. ಆಗ ಅಭಿವೃದ್ಧಿಗೆ ವೇಗ ದೊರೆಯಲಿದೆ" ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಲದಲ್ಲಿ ನಡೆದ ಚಿಟ್ ಫಂಡ್ ಪ್ರಕರಣ ಹಾಗೂ ರಾಜ್ಯದ ಅಭಿವೃದ್ಧಿ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಉದ್ಧಾರಕ್ಕೆ ದಾರಿ ಮಾಡಿಕೊಡುವ ಸಲುವಾಗಿ ಮಮತಾ ಬ್ಯಾನರ್ಜಿ ಹೋಗಬೇಕು ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಿಂದ ಪಶ್ಚಿಮ ಬಂಗಾಲ ಹೊರಗೆ ಉಳಿದಿದ್ದಕ್ಕೆ ಕೂಡ ಮೋದಿ ಬೇಸರ ವ್ಯಕ್ತಪಡಿಸಿ, ಬಡವರಿಗೆ ಅನಾರೋಗ್ಯವಾದರೆ ಐದು ಲಕ್ಷ ರುಪಾಯಿ ತನಕ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಒಂದು ಪೈಸೆ ಖರ್ಚು ಮಾಡುವ ಅಗತ್ಯ ಇಲ್ಲ ಎಂದು ನಾವು ಹೇಳಿದೆವು. ಆದರೆ ಸ್ಪೀಡ್ ಬ್ರೇಕರ್ ದೀದಿ ಮಾಡಿದ್ದೇನು? ಬಡವರಿಗೆ ಅನುಕೂಲ ಆಗುತ್ತಿದ್ದ ಯೋಜನೆಗೆ ಬ್ರೇಕ್ ಹಾಕಿದರು ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಲದಲ್ಲಿರುವ ನಲವತ್ತೆರಡು ಲೋಕಸಭೆ ಕ್ಷೇತ್ರಗಳ ಪೈಕಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕೆಂದು ಬಿಜೆಪಿ ಗುರಿ ಇರಿಸಿಕೊಂಡಿದೆ. ಪಶ್ಚಿಮ ಬಂಗಾಲದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲದಿದ್ದರೂ ಹೆಜ್ಜೆ ಮೂಡಿಸುವ ಯತ್ನ ಮಾಡುತ್ತಿದೆ. ಸ್ಥಿರವಾಗಿ ಮತ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿದೆ. ಇನ್ನು ಟಿಎಂಸಿ, ಸಿಪಿಎಂ ಹಾಗೂ ಕಾಂಗ್ರೆಸ್ ಗೆ ಬೆಂಬಲ ಕಡಿಮೆ ಆಗುತ್ತಾ ಇದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗಳಿಗೆ ಉತ್ತರ ನೀಡಲು ಸೂಕ್ತ ವೇದಿಕೆಯನ್ನು ಕೂಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಗುರುವಾರದಿಂದ ಅವರ ಚುನಾವಣಾ ಪ್ರಚಾರ ಬಿರುಸಾಗಲಿದೆ.












Click it and Unblock the Notifications