ತಾಕತ್ತಿದ್ರೆ ನನ್ನ ಬಂಧಿಸಿ: ದೀದಿಗೆ ಮೋದಿ ಸವಾಲು
Recommended Video
ಕೋಲ್ಕತ್ತಾ, ಮೇ 06: "ನಾನು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತೇನೆ. ತಾಕತ್ತಿದ್ರೆ ನನ್ನನ್ನು ಬಂಧಿಸಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಸವಾಲೆಸೆದಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ತಮ್ಲುಕ್ ನಲ್ಲಿ ಪ್ರಚಾರ ಸಭೆ ನಡೆಸಿದ ಮೋದಿ, ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡರು.
"ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಗ್ರಾಮಸ್ಥರ ವಿರುದ್ಧ ದೀದಿ ಹರಿಹಾಯ್ದಿದ್ದಾರೆ. ರಾಮನವಮಿ ಸಮಯದಲ್ಲಿ ಜಾಥಾಕ್ಕೂ ಅವಕಾಶ ನೀಡಲಿಲ್ಲ. ಇತ್ತೀಚೆಗೆ ದೀದಿ ಅದೆಷ್ಟು ಹತಾಶೆಯಿಂದ ಇದ್ದಾರೆಂದರೆ ಅವರಿಗೆ ದೇವರ ಬಗ್ಗೆ ಮಾತನಾಡುವುದೂ ಇಷ್ಟವಿಲ್ಲ. ನಾನು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತೇನೆ. ತಾಕತ್ತಿದ್ದರೆ ದೀದಿ ನನ್ನನ್ನು ಬಂಧಿಸಲಿ" ಎಂದು ಮೋದಿ ಸವಾಲೆಸೆದರು.

"ಮಮತಾ ಬ್ಯಾನರ್ಜಿ ಅವರು ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಆದರೆ ಅವರ ತೃಣಮೂಲ ಕಾಂಗ್ರೆಸ್ ಪಕ್ಷ 10 ಕ್ಷೇತ್ರಗಳಲ್ಲೂ ಗೆಲ್ಲುವುದಿಲ್ಲ" ಎಂದು ಮೋದಿ ಹೇಳಿದರು.
"ಮಮತಾ ಬ್ಯಾನರ್ಜಿ ಅವರು ಎಂದಿಗೂ ರಾಜಕೀಯ ಲೆಕ್ಕಾಚಾರ ಮಾಡುತ್ತಾರೆ. ಈ ದೇಶವನ್ನು ಅವರು ಹೊಗಳಿದ್ದನ್ನು ಎಂದಾದರೂ ಕೇಳಿದ್ದೀರಾ? ಮಸೂದ್ ಅಝರ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿದಾಗಲೂ ಬ್ಯಾನರ್ಜಿ ದೇಶವನ್ನು ಶ್ಲಾಘಿಸಲಿಲ್ಲ. ಹಾಗೆ ಮಾಡಿದರೆ ತನ್ನ ವೋಟ್ ಬ್ಯಾಂಕಿಗೆ ತೊಂದರೆಯಾಗುತ್ತದೆ ಎಂದು ಆಕೆಗೆ ಅನ್ನಿಸಿರಬೇಕು" ಎಂದು ಮೋದಿ ಹೇಳಿದರು.
ಮಮತಾ ಬ್ಯಾನರ್ಜಿ ಮತ್ತು ನರೇಂದ್ರ ಮೋದಿ ಅವರ ನಡುವಿನ ಸಂಬಂಧ ಇತ್ತೀಚೆಗೆ ಬಿಗುಡಾಯಿಸಿದ್ದು, ಸಂದರ್ಶನವೊಂದರಲ್ಲಿ ದೀದಿ ತಮಗೆ ವರ್ಷವೂ ಕುರ್ತಾ, ಸ್ವೀಟು ಕಳಿಸುತ್ತಾರೆ ಎಂದು ಮೋದಿ ಹೇಳಿದ್ದಕ್ಕೆ ಈ ಬಾರರಿ ಕಲ್ಲು ಮಣ್ಣಿನ ಸ್ವೀಟು ಕಳಿಸುವುದಾಗಿ ದೀದಿ ಪ್ರತಿಕ್ರಿಯಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಎದ್ದಿರುವ ಫೋನಿ ಚಂಡಮಾರುತದ ಕುರಿತು ಮಾಹಿತಿ ಪಡೆಯಲು ಪ್ರಧಾನಿ ಮೋದಿ ಎರಡು ಬಾರಿ ಕರೆ ಮಾಡಿದ್ದರೂ ದೀದಿ ಫೋನ್ ಸ್ವೀಕರಿಸಿರಲಿಲ್ಲ.












Click it and Unblock the Notifications