ದೀದಿ ಭದ್ರ ಕೋಟೆಗೆ ನುಗ್ಗಿ ರಣ ವೀಳ್ಯ ನೀಡಿದ ಮೋದಿ
ಕೊಲ್ಕತ್ತ, ಫೆಬ್ರವರಿ 02: ಮಹಾಘಟಬಂಧನ್ನ ಗಟ್ಟಿ ನಾಯಕಿ ಮಮತಾ ಬ್ಯಾನರ್ಜಿಗೆ ಅವರದ್ದೇ ರಾಜ್ಯಕ್ಕೆ ಹೋಗಿ ಪ್ರಧಾನಿ ಮೋದಿ ರಣ ವೀಳ್ಯ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಠಾಕೂರ್ ನಗರ್ ಮತ್ತು ದುರ್ಗಾಪುರದಲ್ಲಿ ಭಾರಿ ಸಮಾವೇಶ ನಡೆಸಿದ ಮೋದಿ, ದೀದಿಯ ಆಡಳಿತವನ್ನು ಹರಿತ ಮಾತುಗಳಿಂದ ಟೀಕಿಸಿದರು. ಎದುರಾಳಿ ಪಕ್ಷದ ಕಾರ್ಯಕರ್ತರ ಮೇಲೆ ಹಿಂಸಾಚಾರ ಮಾಡುವ ದೀದಿ, ಪ್ರಜಾಪ್ರಭುತ್ವ ಉಳಿಸುವ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ದೀಪ ಆರುವ ಮುನ್ನಾ ಜೋರಾಗಿ ಉರಿಯುತ್ತದೆ ಹಾಗೆಯೇ ದೀದಿ ವರ್ತಿಸುತ್ತಿದ್ದಾರೆ. ದೀದಿ ಸ್ವತಃ ಹಿಂಸಾಚಾರಕ್ಕೆ ಬಲಿ ಆದವರು, ಅವರು ಹಿಂಸೆಯ ದಾರಿ ಹಿಡಿಯುವುದಿಲ್ಲ ಎಂದುಕೊಂಡಿದ್ದೆ ಆದರೆ ನಿಮ್ಮ ಪ್ರೀತಿ ಅವರಿಗೆ ಅಭದ್ರತೆ ಉಂಟುಮಾಡಿದೆ ಎಂದು ಮೋದಿ ಹೇಳಿದರು.
ಬಂಗಾಳ ಪರಿವರ್ತನೆ ಆಗಿಯೇ ಆಗುತ್ತದೆ. ಇಲ್ಲಿನ ಬಿಜೆಪಿ ಕಾರ್ಯಕರ್ತರ ಬಲಿದಾನ ವ್ಯರ್ಥವಾಗುವುದಿಲ್ಲ. ಬಂಗಾಳ ಈಗಿನ ತನ್ನ ಹಿಂಸಾತ್ಮಕ ಸ್ಥಿತಿಯನ್ನು ಹೆಚ್ಚು ದಿನ ಸಹಿಸಿಕೊಳ್ಳುವುದಿಲ್ಲ ಎಂದು ಮೋದಿ ಭರವಸೆ ನೀಡಿದರು. ಮೋದಿಯ ಮಾತಿಗೆ ಕಾರ್ಯಕರ್ತರು ಭಾರಿ ಕರತಾಡನ ಮಾಡಿದರು.
ಕಾಂಗ್ರೆಸ್ ರೈತ ನೀತಿ ಬಗ್ಗೆ ಟೀಕೆ
ಕಾಂಗ್ರೆಸ್ನ ಸಾಲಮನ್ನಾ ಘೋಷಣೆಯನ್ನು ಮಹಾ ಸುಳ್ಳು ಎಂದು ಜರಿದ ಮೋದಿ, ಕಾಂಗ್ರೆಸ್ ಪ್ರತಿ ಹತ್ತು ವರ್ಷಕ್ಕೆ ಸಾಲಮನ್ನಾ ಘೋಷಣೆಯೊಂದಿಗೆ ಚುನಾವಣೆಗೆ ಬರುತ್ತದೆ. ಆದರೆ ಅದರ ಲಾಭ ಸಿಗುವುದು ಕೇವಲ 2-3 ಕೋಟಿ ರೈತರಿಗಷ್ಟೆ ಲಾಭ ಸಿಗುತ್ತದೆ. ಆದರೆ ನಾವು ಮುಂದಿನ ಹತ್ತು ವರ್ಷದಲ್ಲಿ ರೈತರಿಗೆ 70.50 ಲಕ್ಷ ಕೋಟಿ ಹಣ ನೀಡಲಿದ್ದೇವೆ ಎಂದು ಹೇಳಿದರು.
ಸಾಲಮನ್ನಾ ಬಗ್ಗೆ ತೀವ್ರ ವಾಗ್ದಾಳಿ
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ತನ್ನ ಸಾಲಮನ್ನಾ ಭರವಸೆಯಿಂದ ಹಿಂದೆ ಸರಿದಿದೆ. ಕರ್ನಾಟಕದಲ್ಲಿ ಸಾಲಪಾವತಿಸಲಾಗದ ರೈತರ ಹಿಂದೆ ಪೊಲೀಸರನ್ನು ಛೂ ಬಿಡಲಾಗಿದೆ. ಮಧ್ಯ ಪ್ರದೇಶದಲ್ಲಿ ಲಕ್ಷಾಂತರ ಸಾಲ ಇರುವ ರೈತರದ್ದು ಕೇವಲ 11 ರೂಪಾಯಿ ಸಾಲಮನ್ನಾ ಮಾಡಲಾಗಿದೆ. ಇದು ಕಾಂಗ್ರೆಸ್ನ ರೈತ ನೀತಿ ಎಂದು ಮೋದಿ ಟೀಕಿಸಿದರು.
ಮಹಾಘಟಬಂದನ್ ಭ್ರಷ್ಟರ ಕೂಟ
ಮಹಾಘಟಬಂಧನ್ ಅನ್ನು ಭ್ರಷ್ಟರ ಕೂಟ ಎಂದು ಜರಿದ ಮೋದಿ. ಮಮತಾ ಬ್ಯಾನರ್ಜಿ ಸರ್ಕಾರವು ತಾವು ಜನರಿಗೆ ಒಳ್ಳೆಯದು ಮಾಡುತ್ತಿಲ್ಲ ಜೊತೆಗೆ ಕೇಂದ್ರ ಸರ್ಕಾರವನ್ನು ಒಳ್ಳೆಯದು ಮಾಡಲು ಬಿಡುತ್ತಿಲ್ಲ. ನಮ್ಮ ಆಯುಷ್ಮಾನ್ ಭಾರತ್ ಯೋಜನೆಗೆ ದೀದಿ ಪಶ್ಚಿಮ ಬಂಗಾಳದಲ್ಲಿ ಅಡ್ಡಗಾಲು ಹಾಕಿದ್ದಾರೆ ಎಂದು ಮೋದಿ ದೂರಿದರು.
ಪೂರ್ಣ ಬಜೆಟ್ನಲ್ಲಿ ಇನ್ನೂ ಹೆಚ್ಚಿನದು ಇರಲಿದೆ
ಬಜೆಟ್ ಬಗ್ಗೆ ವಿಶ್ಲೇಷಣಾತ್ಮಕವಾಗಿ ಮಾತನಾಡಿದ ಮೋದಿ, ಚುನಾವಣೆ ನಂತರ ನಾವು ಮಂಡಿಸುವ ಪೂರ್ಣ ಬಜೆಟ್ನಲ್ಲಿ ನಿರುದ್ಯೋಗಿಗಳು, ಯುವಕರು, ಮಧ್ಯಮವರ್ಗದವರು, ಬಡವರು, ರೈತರಿಗೆ ಅನುಕೂಲಕರ ಯೋಜನೆಗಳು ಹೊರಬೀಳಲಿವೆ. ಹೊಸ ಭಾರತದ ಪೂರ್ಣ ಚಿತ್ರಣ ಸಿಗುತ್ತದೆ ಎಂದು ಹೇಳಿದರು.
ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನ
ಠಾಕೂರ್ ನಗರ್ ಮತ್ತು ದುರ್ಗಾಪುರದಲ್ಲಿ ಎರಡೂ ನಗರಗಳಲ್ಲಿ ಮೋದಿ ಅವರ ಸಮಾವೇಶಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಠಾಕೂರ್ ನಗರದಲ್ಲಿಯಂತೂ ಜನ ಹೆಚ್ಚಾಗಿ ನೂಕಾಟ-ತಳ್ಳಾಟಗಳು ಉಂಟಾಗಿ ಕೆಲವರು ಗಾಯಗೊಂಡರು. ಜನ ಹೆಚ್ಚು ಸೇರಿ ತೊಂದರೆ ಆದ ಕಾರಣ ಮೋದಿ ಅವರು ಭಾಷಣವನ್ನು ಮೊಟಕು ಮಾಡಿ ಠಾಕೂರ್ ನಗರದಿಂದ ಹೊರಡಬೇಕಾಯಿತು.