ಟಿಎಂಸಿ, ಬಿಜೆಪಿ ವಾಕ್ಸಮರಕ್ಕೆ ಕೇಂದ್ರವಾಗಿಯೇ ಉಳಿದ ನಂದಿಗ್ರಾಮ
ಕೋಲ್ಕತ್ತಾ, ನವೆಂಬರ್ 11: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆಯಲ್ಲಿ ಹಾಗೂ ಬೇರೆ ಉಪಚುನಾವಣೆಯಲ್ಲಿ ಟಿಎಂಸಿ ಭರ್ಜರಿ ಗೆಲುವನ್ನು ಸಾಧಿಸಿದೆ. ಆದರೆ ಈ ನಡುವೆ ನಂದಿಗ್ರಾಮ ಮಾತ್ರ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ನಡುವಿನ ಚರ್ಚೆಯ ವಿಚಾರವಾಗಿಯೇ ಉಳಿದಿದೆ.
ಬಿಜೆಪಿಯ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್, "ಬಿಜೆಪಿಯು ಬೂತ್ಗಳನ್ನು ಒತ್ತಾಯ ಪೂರ್ವಕವಾಗಿ ತನ್ನ ವಶಕ್ಕೆ ಪಡೆದಿದೆ. ಅಕ್ರಮವಾಗಿ ವಿಧಾನಸಭೆ ಚುನಾವಣೆಯಲ್ಲಿ ಜಯ ಗಳಿಸಿದೆ," ಎಂದು ಆರೋಪ ಮಾಡಿದೆ.
ನಂದಿಗ್ರಾಮದಲ್ಲಿ ಸೋಲೊಪ್ಪಿಕೊಂಡ್ರು, ಬಂಗಾಳ ಗೆದ್ದ ಮಮತಾ
ಈ ಬಗ್ಗೆ ಮಾತನಾಡಿದ ತೃಣಮೂಲ ಕಾಂಗ್ರೆಸ್ ವಕ್ತಾರ, ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳ ರಾಜ್ಯ ಕಾರ್ಯದರ್ಶಿ ಕುನಲ್ ಘೋಷ್, "ನಂದಿಗ್ರಾಮದಲ್ಲಿ ಮರು ಎಣಿಕೆ ಪ್ರಕ್ರಿಯೆ ನಡೆದರೆ, ಮಮತಾ ಬ್ಯಾನರ್ಜಿ ಸುಮಾರು 22,000 ಮತಗಳ ಮುನ್ನಡೆಯಲ್ಲಿ ಜಯ ಸಾಧಿಸಲಿದ್ದಾರೆ," ಎಂದು ಹೇಳಿದ್ದಾರೆ. ನಂದಿಗ್ರಾಮದ ಹುತಾತ್ಮರಾದ "ಆಪರೇಷನ್ ಸನ್ಶೈನ್" ನ ವಾರ್ಷಿಕೋತ್ಸವದಂದು ರೈತರ ಚಳವಳಿಯ ಸಂದರ್ಭದಲ್ಲಿ ಮಡಿದ ನಂದಿಗ್ರಾಮದ ಜನರಿಗೆ ತೃಣಮೂಲ ಕಾಂಗ್ರೆಸ್ ಗೌರವ ಸಲ್ಲಿಸಿದೆ.
ಇನ್ನು ನಂದಿಗ್ರಾಮವನ್ನು ಕೋಮು ಆಧಾರದಲ್ಲಿ ವಿಂಗಡನೆ ಮಾಡುತ್ತಿರುವ ಆರೋಪದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿಯ ವಿರುದ್ಧ ವಾಗ್ದಾಳಿ ನಡೆಸಿದ ತೃಣಮೂಲ ಕಾಂಗ್ರೆಸ್ ವಕ್ತಾರ ಕುನಲ್ ಘೋಷ್, "ನಂದಿಗ್ರಾಮದಲ್ಲಿ ಬಿಜೆಪಿಯು ಅಕ್ರಮವಾಗಿ ಜಯ ಸಾಧಿಸಿದೆ. ನಂದಿಗ್ರಾಮದಿಂದ ಸುವೇಂದು ಅಧಿಕಾರಿಯನ್ನು ಖಾಯಂ ಆಗಿ ಹೊರ ಹಾಕಲು ನಾವು ಬಯಸುತ್ತೇವೆ. ನಂದಿಗ್ರಾಮದಲ್ಲಿ ಮತ್ತೆ ಮರು ಎಣಿಕೆ ನಡೆದರೆ ಮಮತಾ ಬ್ಯಾನರ್ಜಿ ಖಂಡಿತವಾಗಿ ಗೆಲುವು ಸಾಧಿಸಲಿದ್ದಾರೆ. ಸುಮಾರು 22,000 ಮತಗಳ ಮುನ್ನಡೆಯಲ್ಲಿ ಮಮತಾ ಬ್ಯಾನರ್ಜಿ ಜಯ ಸಾಧಿಸಲಿದ್ದಾರೆ," ಎಂದು ಅಭಿಪ್ರಾಯಿಸಿದ್ದಾರೆ.
ಚುನಾವಣಾ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಧೀಶ: ದೀದಿಗೆ 5 ಲಕ್ಷ ದಂಡ
ಈ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ನಂದಿಗ್ರಾಮ ಅತೀ ಹೆಚ್ಚಿನ ಚರ್ಚೆಯ ವಿಷಯವಾಗಿತ್ತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ನಂದಿಗ್ರಾಮದಲ್ಲಿ ಚುನಾವಣೆಯಲ್ಲಿ ತನ್ನ ಆಪ್ತ, ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿಯ ವಿರುದ್ಧ ಸ್ಪರ್ಧೆಗೆ ಇಳಿದಿದ್ದ ಕಾರಣದಿಂದಾಗಿ ಈ ಕ್ಷೇತ್ರವು ಹೆಚ್ಚು ಗಮನವನ್ನು ಸೆಳೆದಿತ್ತು. ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಚಳವಳಿಯನ್ನು ನಡೆಸಿದ್ದ ಸಂದರ್ಭದಲ್ಲಿ ಸುವೇಂದು ಅಧಿಕಾರಿ, ದೀದಿ ಜೊತೆ ಇದ್ದರು. ಅದರಲ್ಲೂ ಮುಖ್ಯವಾಗಿ 2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಧಿಕಾರವನ್ನು ಪಡೆಯುವಲ್ಲಿ ಸಫಲವಾಗಲು ಸುವೇಂದು ಅಧಿಕಾರಿ ಪಾತ್ರ ಗಮರ್ನಾಹ.
ಟಿಎಂಸಿ ವಿರುದ್ಧ ಸುವೇಂದು ಅಧಿಕಾರಿ ವಾಗ್ದಾಳಿ
ಬಳಿಕ ಸುವೇಂದು ಅಧಿಕಾರಿ ಬಿಜೆಪಿ ಸೇರ್ಪಡೆ ಆಗಿದ್ದು, ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಕಣಕ್ಕೆ ಇಳಿದು 1,622 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ತನ್ನ ಸ್ವಕ್ಷೇತ್ರ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. "ನಂದಿಗ್ರಾಮದಲ್ಲಿ ನಾನು ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದ್ದೇನೆ. ನಾನು ರಾಜ್ಯದಾದ್ಯಂತ ಕೇಸರಿ ಬಾವುಟವನ್ನು ಹಾರಿಸುತ್ತೇನೆ. ನಾನು ಎಡರಂಗದ ಸಿಪಿಐಎಂನ ಲಕ್ಷ್ಮಣ ಸೇತುರನ್ನು ಸೋಲಿಸಿದ್ದಾರೆ. ನಾನು ಮಮತಾ ಬ್ಯಾನರ್ಜಿಯನ್ನು ನಂದಿಗ್ರಾಮದಲ್ಲಿ ಸೋಲಿಸಿದ್ದೇನೆ. ಇನ್ನು ಭವಿಷ್ಯದಲ್ಲಿ ನಾನು ಜನರ ಬೆಂಬಲದಿಂದ ಜಯ ಸಾಧಿಸುತ್ತೇನೆ," ಎಂದು ಸುವೇಂದು ಅಧಿಕಾರಿ ಇಂದು ಹೇಳಿದ್ದಾರೆ.
ಕೋಲ್ಕತ್ತಾ ಹೈಕೋರ್ಟ್ನಿಂದ ಬಿಜೆಪಿಯ ಸುವೇಂದು ಅಧಿಕಾರಿಗೆ ನೋಟಿಸ್
"ನಂದಿಗ್ರಾಮ ಚಳವಳಿಯಲ್ಲಿ ಯಾರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೋ ಅವರನ್ನು ನಾನು ಎಂದಿಗೂ ಮರೆಯುವುದಿಲ್ಲ. ಪ್ರಬಲ ಎಡರಂಗದ ಆಡಳಿತದ ನಿರಂಕುಶಾಧಿಕಾರದ ವಿರೋಧ ಮಾಡಿ ಪ್ರಾಣ ಕಳೆದುಕೊಂಡವರನ್ನು ನಾವು ಎಂದಿಗೂ ಮರೆಯಲಾರೆವು. ಪಶ್ಚಿಮ ಬಂಗಾಳದ ರಾಜಕೀಯವನ್ನೇ ಬದಲಾವಣೆ ಆಗುವ ಮುನ್ನ ಈ ಚಳವಳಿಯಲ್ಲಿ ತಮ್ಮ ಜೀವ ತೆತ್ತವರನ್ನು ಮರೆಯುವುದಿಲ್ಲ," ಎಂದು ಕೂಡಾ ಸುವೇಂದು ಅಧಿಕಾರಿ ಟ್ವಿಟ್ಟರ್ನಲ್ಲಿ ತಿಳಿಸಿದರು.
(ಒನ್ಇಂಡಿಯಾ ಸುದ್ದಿ)