ಮೋದಿ ಸರ್ಕಾರಕ್ಕೆ ಸೆಡ್ಡು ಹೊಡೆದು ನಿಂತ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಸೆಪ್ಟೆಂಬರ್ 12 : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ಕೇಂದ್ರ ಸರ್ಕಾರದ್ದು ಧಮನಕಾರಿಯಾದ ನೀತಿ ಎಂದು ಟೀಕೆ ಮಾಡಿದ್ದಾರೆ.
ಕೋಲ್ಕತ್ತಾದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, "ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಅನ್ನು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರುವುದಿಲ್ಲ. ಇದು ಜನ ಸಾಮಾನ್ಯರಿಗೆ ಕಠಿಣವಾದ ಕಾನೂನು ಆಗಿದೆ" ಎಂದು ಆರೋಪಿಸಿದ್ದಾರೆ.
"ಸಂಸತ್ನಲ್ಲಿ ಅನುಮೋದನೆ ಸಿಕ್ಕಿದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ರಾಜ್ಯದಲ್ಲಿ ಜಾರಿಗೆ ಬರುವುದಿಲ್ಲ. ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ರಾಜ್ಯದಲ್ಲಿಯೇ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ" ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 1ರಿಂದ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ದೇಶಾದ್ಯಂತ ಜಾರಿಗೆ ಬಂದಿದೆ. ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುವ ಬಗ್ಗೆ ಜನ ಸಾಮಾನ್ಯರು ಕೂಡಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಅಭಿಮಾನ
"ಪಶ್ಚಿಮ ಬಂಗಾಳದಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಜಾರಿಗೆ ತರುವುದಿಲ್ಲ. ಸೇಫ್ ಡ್ರೈವ್ ಸೇವ್ ಲೈಫ್ ಎಂಬ ಅಭಿಯಾನವನ್ನು ನಾವು ರಾಜ್ಯದಲ್ಲಿ ನಡೆಸುತ್ತಿದ್ದೇವೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಸಂಸತ್ತಿನಲ್ಲಿ ವಿರೋಧಿಸಿದೆವು
"ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ಅನ್ವಯ ಜನರಿಗೆ ವಿಧಿಸುವ ದಂಡ ಶುಲ್ಕಗಳು ಹೆಚ್ಚಿವೆ. ಸಂಸತ್ನಲ್ಲಿ ಈ ಕಾಯ್ದೆಯ ಬಗ್ಗೆ ಚರ್ಚೆಗಳು ನಡೆದಾ ತೃಣಮೂಲ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು" ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ದಂಡದ ಹಣವನ್ನು ಎಲ್ಲಿಂದ ತರುತ್ತಾರೆ?
"ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ಅನ್ನು ವಿರೋಧಿಸಿದರೆ ಕೇಂದ್ರ ಸರ್ಕಾರ ಕೇಳಿಸಿಕೊಳ್ಳಲಿಲ್ಲ. 500 ರೂ. ದಂಡ ವಿಧಿಸುತ್ತಿದ್ದ ಉಲ್ಲಂಘನೆಗೆ 10 ಸಾವಿರ ರೂ. ದಂಡ ಹಾಕಿದರೆ ಸಾಮಾನ್ಯ ಜನರು ಎಲ್ಲಿಂದ ಹಣ ತರಬೇಕು?" ಎಂದು ಮಮತಾ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.

ಅಧಿಕಾರಿಗಳ ಅಭಿಪ್ರಾಯ
"ಹಲವು ರಾಜ್ಯ ಸರ್ಕಾರ, ನಮ್ಮ ಸರ್ಕಾರ, ಹಲವು ಅಧಿಕಾರಿಗಳ ಪ್ರಕಾರ ದಂಡದ ಮೊತ್ತ ಹೆಚ್ಚಿದೆ. ಆದ್ದರಿಂದ, ನಮ್ಮ ರಾಜ್ಯದಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಜಾರಿಗೆ ತರುವುದಿಲ್ಲ. ನಾವು ಸೇವ್ ಡ್ರೈವ್ ಸೇವ್ ಲೈಫ್ ಎಂಬ ಅಭಿಯಾನವನ್ನು ವಿದ್ಯಾರ್ಥಿಗಳು, ಮಾಧ್ಯಮಗಳು, ಎನ್ಜಿಓಗಳ ಸಹಾಯದಿಂದ ರಾಜ್ಯದಲ್ಲಿ ಮಾಡುತ್ತಿದ್ದೇವೆ" ಎಂದು ಮಮತಾ ಬ್ಯಾನರ್ಜಿ ಹೇಳಿದರು.












Click it and Unblock the Notifications