ಐದು ರೂಪಾಯಿಗೆ ಊಟ; ಪಶ್ಚಿಮ ಬಂಗಾಳದಲ್ಲಿ "ಮಾ" ಯೋಜನೆಗೆ ದೀದಿ ಚಾಲನೆ
ಕೋಲ್ಕತ್ತಾ, ಫೆಬ್ರುವರಿ 15: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ ಕಣ ಸಿದ್ಧವಾಗುತ್ತಿದೆ. ಬಿಜೆಪಿ, ತೃಣಮೂಲ ಕಾಂಗ್ರೆಸ್ ನಡುವಣ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭರವಸೆಗಳ ಮಹಾಪೂರವೇ ಜನರ ಮುಂದಿದೆ. ಹಲವು ಭರವಸೆಗಳನ್ನು ಎರಡೂ ಪಕ್ಷಗಳು ನೀಡುತ್ತಿದ್ದು, ಈಚೆಗೆ ರಾಜ್ಯ ಬಜೆಟ್ ನಲ್ಲಿಯೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಜ್ಯದ ಅಭಿವೃದ್ಧಿಗೆ ಹಲವು ಘೋಷಣೆ ಮಾಡಿದ್ದಾರೆ.
ಇದೀಗ ತೃಣಮೂಲ ಕಾಂಗ್ರೆಸ್ ವತಿಯಿಂದ ಹೊಸ ಯೋಜನೆಯೊಂದಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. ರಾಜ್ಯ ಸರ್ಕಾರದ "ಮಾ" ಯೋಜನೆಯಡಿಯಲ್ಲಿ ಬಡ ಜನರಿಗೆ ಐದು ರೂಪಾಯಿಗೆ ಊಟ ಕೊಡುವ ಈ ಯೋಜನೆಗೆ ವರ್ಚುಯಲ್ ಆಗಿ ಮಮತಾ ಬ್ಯಾನರ್ಜಿ ಚಾಲನೆ ನೀಡಿದ್ದಾರೆ.
ಒಂದು ತಟ್ಟೆ ಅನ್ನ, ದಾಲ್, ತರಕಾರಿ ಹಾಗೂ ಮೊಟ್ಟೆ ಪಲ್ಯವನ್ನು ಐದು ರೂಪಾಯಿಗೆ ನೀಡಲಾಗುತ್ತಿದೆ. ಒಂದು ಪ್ಲೇಟ್ ಗೆ 15 ತಗುಲಲಿದ್ದು, ರಾಜ್ಯ ಸರ್ಕಾರವು ಉಳಿದ ವೆಚ್ಚವನ್ನು ಭರಿಸಲಿದೆ.

ಬಡವರಿಗಾಗಿ ಈ ಹೊಸ ಆಹಾರ ಯೋಜನೆಯನ್ನು ತಂದಿರುವುದಾಗಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ. ಆಹಾರ ತಯಾರಿಕೆ ಕಾರ್ಯವನ್ನು ಸ್ವಸಹಾಯ ಗುಂಪುಗಳು ನಿರ್ವಹಿಸಲಿದ್ದು, ಪ್ರತಿದಿನ ಮಧ್ಯಾಹ್ನ 1ರಿಂದ 3 ಗಂಟೆವರೆಗೆ ಕಾರ್ಯನಿರ್ವಹಿಸಲಿದ್ದಾರೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲಿಯೂ ಹಂತ ಹಂತವಾಗಿ ಆಹಾರ ತಯಾರಿಕೆಗೆ ಅಡುಗೆ ಮನೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications