'ಪ್ರಧಾನಿ ಮೋದಿ ಸಮಯ ನೀಡಿದ್ದಾರೆ, ಭೇಟಿಯಾಗಲಿದ್ದೇನೆ' ಎಂದ ದೀದಿ
ಕೋಲ್ಕತ್ತಾ, ಜು.22: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿನ ವಾರ ದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯನ್ನು ಮೊದಲ ಬಾರಿಗೆ ಭೇಟಿಯಾಗಲಿದ್ದಾರೆ.
ಬುಧವಾರವಷ್ಟೇ ಪೆಗಾಸಸ್ ಹಗರಣದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯ ವಿರುದ್ದ ವಾಗ್ದಾಳಿ ನಡೆಸಿದ್ದ ದೀದಿ, "ಪಿಎಂ ಮೋದಿ ಸರ್ಕಾರವು ಜನರ ಕಲ್ಯಾಣಕ್ಕೆ ಬದಲಾಗಿ ಸ್ಪೈವೇರ್ಗಾಗಿ ತೆರಿಗೆ ಹಣವನ್ನು ಖರ್ಚು ಮಾಡುತ್ತಿದೆ. ಪೆಟ್ರೋಲ್ ಬೆಲೆಯನ್ನು ನೋಡಿ. ಭಾರತ ಸರ್ಕಾರವು ಇಂಧನ ತೆರಿಗೆಯಿಂದಲೇ 3.7 ಲಕ್ಷ ಕೋಟಿ ಸಂಗ್ರಹಿಸಿದೆ. ಹಣ ಎಲ್ಲಿಗೆ ಹೋಗುತ್ತಿದೆ?," ಎಂದು ಪ್ರಶ್ನಿಸಿದ್ದರು.

ಹಾಗೆಯೇ "ಮುಂದಿನ ವಾರ ದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿಯ ಭೇಟಿಗೆ ಅವಕಾಶ ದೊರೆತರೆ ಭೇಟಿಯಾಗುತ್ತೇನೆ," ಎಂದು ಹೇಳಿದ್ದರು.
ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ದೀದಿ, "ನಾನು 2-3 ದಿನಗಳ ಕಾಲ ದೆಹಲಿಗೆ ಹೋಗುತ್ತೇನೆ. ಸಮಯ ಸಿಕ್ಕರೆ ನಾನು ರಾಷ್ಟ್ರಪತಿಯನ್ನು ಭೇಟಿಯಾಗುತ್ತೇನೆ. ಪ್ರಧಾನಿ ನಾನು ಭೇಟಿಯಾಗಲು ಸಮಯ ನೀಡಿದ್ದಾರೆ. ನಾನು ಪ್ರಧಾನಿಯನ್ನು ಭೇಟಿಯಾಗಲಿದ್ದೇನೆ," ಎಂದು ತಿಳಿಸಿದ್ದಾರೆ.
ಜುಲೈ25 ರಂದು ಮಮತಾ ಬ್ಯಾನರ್ಜಿ ದೆಹಲಿಗೆ ತೆರಳಲಿದ್ದಾರೆ. ಸೋನಿಯಾ ಗಾಂಧಿ ಸೇರಿದಂತೆ ಹಲವು ವಿಪಕ್ಷ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಈ ವೇಳೆ ಶರದ್ ಪವಾರ್, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ರನ್ನು ಕೂಡಾ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಹಲವಾರು ದಿನಗಳಿಂದ ವಿಪಕ್ಷ ನಾಯಕರುಗಳು ಸಭೆ ಮಾತುಕತೆ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆ ಇರುವ ನಿಟ್ಟಿನಲ್ಲಿ ಈ ಮಾತುಕತೆಗಳು ಭಾರೀ ಚರ್ಚೆಗೆ ಕಾರಣವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications