ಚಂದ್ರಬಾಬು ನಾಯ್ಡು-ಮಮತಾ ಸಭೆ: ಮೊದಲ ಸಂದೇಶ ಬಿಜೆಪಿಗಲ್ಲ, ರಾಹುಲ್ಗೆ!
ಕೋಲ್ಕತಾ, ನವೆಂಬರ್ 19: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಗ್ಗುಬಡಿದು ಸರ್ಕಾರ ರಚನೆ ಮಾಡುವ ಸಲುವಾಗಿ ಮಹಾಮೈತ್ರಿಕೂಟ ರಚಿಸುವ ಪ್ರಯತ್ನದಲ್ಲಿರುವ ವಿರೋಧ ಪಕ್ಷಗಳಿಗೆ ನಾಯಕತ್ವವೇ ದೊಡ್ಡ ಸವಾಲಾಗುವ ಸಾಧ್ಯತೆ ಎದುರಾಗಿದೆ.
ಪ್ರಮುಖ ಪಕ್ಷವಾದ ಕಾಂಗ್ರೆಸ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ಉಳಿದ ಪಕ್ಷಗಳಲ್ಲಿ ಸಹಮತ ವ್ಯಕ್ತವಾಗುತ್ತಿದ್ದರೂ, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿಕೊಂಡು ಚುನಾವಣೆಗೆ ಮುಂದಾಗಲು ವಿರೋಧ ಪಕ್ಷಗಳು ಸಿದ್ಧರಿಲ್ಲ.
ತಮ್ಮಲ್ಲಿಯೇ ಪ್ರಧಾನಿ ಆಗುವ ಅರ್ಹತೆ, ರಾಜಕೀಯ ಅನುಭವ, ಹಿರಿತನ ಇರುವವರು ಇರುವಾಗ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಂಡು ಹೋಗುವುದು ಸರಿಯಲ್ಲ ಎಂಬುದು ವಿರೋಧ ಪಕ್ಷಗಳ ಅಭಿಪ್ರಾಯ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ನಡೆಸಿದ ಸಭೆಯ ಬಳಿಕ ರಾಹುಲ್ ಗಾಂಧಿ ಅವರನ್ನು ಮಹಾಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನೆಯಾಗಿದೆ.
ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ಮಹಾ ಮೈತ್ರಿಕೂಟದಲ್ಲಿ ಎಲ್ಲರೂ ನಾಯಕರೇ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಚಂದ್ರಬಾಬು ನಾಯ್ಡು, ನಾವು ಹಿರಿಯ ರಾಜಕಾರಣಿಗಳು. ಮೋದಿ ಅವರಿಗಿಂತಲೂ ಬಹಳ ಹಿರಿಯರು ಎಂದು ಹೇಳಿದರು.
ಕೋಲ್ಕತಾದಲ್ಲಿ ಜನವರಿಯಲ್ಲಿ ನಡೆಯಲಿರುವ 19 ಸಮಾವೇಶಗಳಲ್ಲಿ ಭಾಗವಹಿಸುವುದಾಗಿ ಖಚಿತಪಡಿಸಿದ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಅವರ ಪಕ್ಷದೊಂದಿಗೆ ಕೈಜೋಡಿಸಿರುವುದನ್ನು ದೃಢಪಡಿಸಿದರು.
ನಾವೆಲ್ಲರೂ ಸಂಪೂರ್ಣವಾಗಿ ಒಂದಾಗಿದ್ದೇವೆ. ನಾವು ಒಗ್ಗಟ್ಟಾಗಿದ್ದೇವೆ. ನಾವು ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವದವು ಅಪಾಯದಲ್ಲಿದೆ. ದೇಶವನ್ನು ರಕ್ಷಿಸುವ ಉದ್ದೇಶದಿಂದ ಎಲ್ಲ ವಿರೋಧ ಪಕ್ಷಗಳೂ ಆಡಳಿತಾರೂಢ ಬಿಜೆಪಿ ವಿರುದ್ಧ ಕೈ ಜೋಡಿಸಿವೆ ಎಂದು ಹೇಳಿದರು.
ದೇಶದಲ್ಲಿನ ಅಲ್ಪಸಂಖ್ಯಾತರ ಕಡೆಗೆ ಅಸಹಿಷ್ಣುತೆ ವ್ಯಕ್ತವಾಗುತ್ತಿದೆ. ಸಿಬಿಐ, ಇಡಿ, ಆದಾಯ ತೆರಿಗೆ, ಆರ್ ಬಿಐ ಮತ್ತು ಸಿಎಜಿಯಂತಹ ಸಂಸ್ಥೆಗಳು ಅತೀವ ಒತ್ತಡಕ್ಕೆ ಸಿಲುಕಿವೆ ಎಂದು ಆರೋಪಿಸಿದರು.












Click it and Unblock the Notifications