ನೀರಿನಾಳದ ಸಾಹಸ ಮಾಡುವ ಯತ್ನದಲ್ಲಿ ಜಾದೂಗಾರ ಸಾವು, ಶವ ಪತ್ತೆ
ಕೋಲ್ಕತ್ತಾ (ಪಶ್ಚಿಮ ಬಂಗಾಲ), ಜೂನ್ 18: ಹ್ಯಾರಿ- ಹೌದಿನಿ ಅವರಿಂದ ಸ್ಫೂರ್ತಿಗೊಂಡ ನೀರಿನಾಳದ ಸಾಹಸವನ್ನು ಮಾಡುವ ಬೇಳೆ ಕೋಲ್ಕತ್ತಾದ ಮೆಜಿಷಿಯನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸೋಮವಾರ ಶವ ಪತ್ತೆಯಾಗಿದೆ. ಹಗ್ಗ- ಸರಳುಗಳಿಂದ ತನ್ನನ್ನು ಬಂದಿ ಮಾಡಿಕೊಂಡು, ಆತ ನದಿಯ ಆಳಕ್ಕೆ ಇಳಿದಿದ್ದರು.
ರಕ್ಷಣಾ ಕಾರ್ಯದಲ್ಲಿ ನಿರತರಾದವರಿಗೆ ಚಂಚಲ್ ಲಹಿರಿ ಅವರ ಶವವು ಸೋಮವಾರ ತಡವಾಗಿ ಹೂಗ್ಲಿ ನದಿಯಲ್ಲಿ ಸಿಕ್ಕಿದೆ. ನಲವತ್ತು ವರ್ಷದ ಲಹಿರಿ ಅವರು ವೇದಿಕೆ ಮೇಲೆ, 'ಜಾದೂಗಾರ ಮಾಂಡ್ರೇಕ್' ಅಂತಲೇ ಹೆಸರುವಾಸಿ. ಹಳದಿ, ಕೆಂಪು ದಿರಿಸು ಧರಿಸಿದ್ದ ಅವರು, ಭಾನುವಾರ ನದಿಯೊಳಗೆ ಇಳಿದಿದ್ದರು.
ಲಹಿರಿ ಅವರ ಕೈ-ಕಾಲುಗಳನ್ನು ಬಿಗಿಯಾಗಿ ಕಟ್ಟಲಾಗಿತ್ತು. ಅವರಿಗೆ ನೀರಿನಿಂದ ಹೊರಬರಲು ಸಾಧ್ಯವಾಗಿಲ್ಲ. ಈ ದುರ್ಘಟನೆ ಸಂಭವಿಸುವ ವೇಳೆ ಅವರ ಕುಟುಂಬದವರು, ತಂಡದ ಸದಸ್ಯರು ಹಾಗೂ ಕೆಲವು ಪ್ರತ್ಯಕ್ಷದರ್ಶಿಗಳು ಸ್ಥಳದಲ್ಲೇ ಇದ್ದರು. ಮೊದಲಿಗೆ ಇದು ಜಾದೂ ತಂತ್ರದ ಭಾಗವೇ ಆಗಿರಬೇಕು ಎಂದು ಅಧಿಕಾರಿಗಳು ಸಹ ಭಾವಿಸಿದ್ದರು. ಆ ನಂತರ ರಕ್ಷಣಾ ತಂಡದ ವ್ಯವಸ್ಥೆ ಮಾಡಲಾಯಿತು.

ಈ ಸಾಹಸ ಕೈಗೊಳ್ಳುವ ಮುನ್ನ ಮಾಧ್ಯಮ ಸಂಸ್ಥೆಯೊಂದರ ಜತೆ ಮಾತನಾಡಿದ್ದ ಲಹಿರಿ, ಬುಲೆಟ್ ಪ್ರೂಫ್ ಗಾಜಿನ ಪೆಟ್ಟಿಗೆಯಲ್ಲಿ ನನ್ನನ್ನು ಕಟ್ಟಿಹಾಕಿ, ಹೌರಾ ಸೇತುವೆಯಿಂದ ಕೆಳಗೆ ಬಿಡಲಾಗಿತ್ತು. ಆಗ ಇಪ್ಪತ್ತೊಂಬತ್ತು ಸೆಕೆಂಡ್ ನಲ್ಲಿ ವಾಪಸ್ ಬಂದಿದ್ದೆ ಎಂದು ಹೇಳಿದ್ದರು.
ಆದರೆ, ಈ ಸಲ ಅದು ಕಷ್ಟ ಇದೆ ಎಂದು ಹೇಳಿಕೊಂಡಿದ್ದರು. ನಾನು ಈ ಬಾರಿ ಪೆಟ್ಟಿಗೆ ತೆಗೆದು ಹೊರಬಂದರೆ ಅದು ಮ್ಯಾಜಿಕ್, ಇಲ್ಲದಿದ್ದರೆ ಟ್ರಾಜಿಕ್ (ದುರಂತ) ಎಂದು ಅವರೇ ಹೆಳಿದ್ದರು.
ಆರು ವರ್ಷಗಳ ಹಿಂದೆ ನದಿಯಲ್ಲಿ ಲಹಿರಿ ಸಾಹಸ ಮಾಡುವ ವೇಳೆ, ಬೀಗ ಹಾಕಿದ ಬೋನಿನಲ್ಲಿ ಬಾಗಿಲ ಮೂಲಕ ತಪ್ಪಿಸಿಕೊಳ್ಳುತ್ತಿದ್ದದ್ದು ಪ್ರತ್ಯಕ್ಷದರ್ಶಿಗೆ ಸ್ಪಷ್ಟವಾಗಿ ಕಾಣಿತ್ತು. ಲಹಿರಿಯ ಉದ್ದವಾದ ವಿಗ್ ಅನ್ನು ಎಳೆದು, ಗುಂಪು ಹಲ್ಲೆ ನಡೆಸಲಾಗಿತ್ತು.
ದಶಕಗಳ ಹಿಂದೆ, ನದಿಯ ನೀರಿನ ಮೇಲೆ ನಾನು ನಡೆಯಬಲ್ಲೆ ಎಂದು ಆತ ಘೋಷಿಸಿಕೊಂಡಿದ್ದರು. ಆದರೆ ಅದು ತಪ್ಪಾದಾಗ ಲಹಿರಿ ಅವರ ಮೇಲೆ ಹಲ್ಲೆಯಾಗಿತ್ತು.












Click it and Unblock the Notifications