ಮಮತಾ ಬ್ಯಾನರ್ಜಿಯನ್ನು 'ಸ್ಟಿಕ್ಕರ್ ದೀದಿ' ಎಂದು ವ್ಯಂಗ್ಯವಾಡಿದ ಮೋದಿ
ರಾಣಾಘಾಟ್, ಏಪ್ರಿಲ್ 24: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ತಮ್ಮ ಸರ್ಕಾರದ ಹೆಸರನ್ನು ಹಾಕಿಕೊಳ್ಳುವ 'ಸ್ಟಿಕ್ಕರ್ ದೀದಿ' ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.
ಪಶ್ಚಿಮ ಬಂಗಾಲದಲ್ಲಿ ಬುಧವಾರ ಸತತ ಚುನಾವಣಾ ಪ್ರಚಾರ ನಡೆಸಿದ ಅವರು, ಮಮತಾ ಮತ್ತು ಅವರ ಸರ್ಕಾರದ ಆಡಳಿತದ ವಿರುದ್ಧ ಹರಿಹಾಯ್ದರು.
'ಸ್ಪೀಡ್ ಬ್ರೇಕರ್ ದೀದಿ ಸ್ಟಿಕ್ಕರ್ ದೀದಿಯೂ ಹೌದು. ಸರ್ಕಾರಉಚಿತ ವಿದ್ಯುತ್ ಅಥವಾ ಜನರಿಗೆ ನೀಡುವ ರೇಷನ್ ಮುಂತಾದ ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ಸರ್ಕಾರದ ಸ್ಟಿಕ್ಕರ್ ಅಂಟಿಸಿ ತಮ್ಮ ನೀಡುತ್ತಿರುವ ಸವಲತ್ತುಗಳು ಎಂದು ಬಿಂಬಿಸಿಕೊಳ್ಳುತ್ತಾರೆ' ಎಂದು ಟೀಕಿಸಿದರು.

ಇದಕ್ಕೂ ಮೊದಲು ಕೋಲ್ಕತಾದಲ್ಲಿ ಮಾತನಾಡಿದ ಮೋದಿ, ಲೋಕಸಭೆ ಚುನಾವಣೆಯ ಬಳಿಕ ಪಶ್ಚಿಮ ಬಂಗಾಳದಲ್ಲಿ ಮಮತಾ ಸರ್ಕಾರದ ಆಡಳಿತದ 'ಸೂರ್ಯಾಸ್ತ' ಆಗಲಿದೆ ಎಂದರು.
ಮಮತಾರ ಸಿಂಹಾಸನ ಅಲುಗಾಡಲು ಆರಂಭವಾಗಿದ್ದು, ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಒಂದು ತಿಂಗಳಲ್ಲಿ ಅವರ ಅಧಿಕಾರಾವಧಿಯ ಅಂತ್ಯದ ಕ್ಷಣಗಣನೆ ಶುರುವಾಗಲಿದೆ ಎಂದು ಹೇಳಿದರು.
ಮಮತಾ ಅವರ ಹೆಸರಿನ ಅರ್ಥ ಗೂಂಡಾಗಿರಿ ಎಂದಾಗಿದೆ. ಏಕೆಂದರೆ ಅವರ ಆಡಳಿತ ಕ್ರೌರ್ಯಕ್ಕೆ (ನಿರ್ಮಮತಾ) ಹೆಸರುವಾಸಿಯಾಗಿದೆ ಎಂದು ಟೀಕಿಸಿದರು.
'ಮೂರು ಹಂತದ ಚುನಾವಣೆ ಬಳಿಕ ಬಂದ ವರದಿಗಳು ದೀದಿಯ ಸೂರ್ಯ ಪಶ್ಚಿಮ ಬಂಗಾಳದಲ್ಲಿ ಅಸ್ತಮಾನ ಆಗುತ್ತಿದ್ದಾನೆ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.
ದೀದಿ ಗೂಂಡಾಗಿರಿಯ ಬಲ ಹೊಂದಿದ್ದರೆ, ನಾವೂ ಪ್ರಜಾಪ್ರಭುತ್ವದ ಶಕ್ತಿ ಹೊಂದಿದ್ದೇವೆ. ತೃಣಮೂಲದ ದಾಂದಲೆಕೋರತನದಿಂದ ಬಂಗಾಳವನ್ನು ಮುಕ್ತಗೊಳಿಸುವುದಾಗಿ ನಾನು ಭರವಸೆ ನೀಡುತ್ತೇನೆ. ಒಂದು ತಿಂಗಳ ಬಳಿಕ ಸರಿಯಾಗಿ, ಮೇ 23ರಂದು ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಪಶ್ಚಿಮ ಬಂಗಾಳದಲ್ಲಿನ ದುರಾಡಳಿತದ ಅಂತ್ಯವೂ ಆರಂಭವಾಗುತ್ತದೆ ಎಂದರು.












Click it and Unblock the Notifications