ರಾಜಕೀಯ ನಿರ್ಗಮನ ಘೋಷಿಸಿದ ಬಿಜೆಪಿ ಸಂಸದ ಬಾಬೂಲ್ ಸುಪ್ರಿಯೋ
ಕೋಲ್ಕತ್ತಾ, ಆ.01: ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ, ಸಂಸದ ಬಾಬುಲ್ ಸುಪ್ರಿಯೋ ರಾಜಕೀಯ ತ್ಯಜಿಸುವ ನಿರ್ಧಾರ ಕೈಗೊಂಡಿದ್ದು, ರಾಜಕೀಯ ನಿರ್ಗಮನ ಘೋಷಣೆ ಮಾಡಿದ್ದಾರೆ. ಹಾಗೆಯೇ ತನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋರ ಈ ನಿರ್ಧಾರವು ಭಾಗಶಃ ಕೇಂದ್ರ ಸಚಿವ ಸ್ಥಾನವನ್ನು ಕಳೆದುಕೊಂಡ ಕಾರಣ ಮತ್ತು ರಾಜ್ಯ ಬಿಜೆಪಿ ನಾಯಕತ್ವದೊಂದಿಗೆ ಭಿನ್ನಾಭಿಪ್ರಾಯಗಳ ಕಾರಣ ಎಂಬ ಸುಳಿವನ್ನು ಸ್ವತಃ ಬಾಬುಲ್ ಸುಪ್ರಿಯೋ ನೀಡಿದ್ದಾರೆ.
2014 ರಿಂದ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಹಲವಾರು ಖಾತೆಗಳನ್ನು ನಿರ್ವಹಿಸಿದ್ದ ಸುಪ್ರಿಯೋರನ್ನು ಈ ತಿಂಗಳ ಆರಂಭದಲ್ಲಿ ಪ್ರಮುಖ ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಹೊರ ಹಾಕಲಾಗಿದೆ. "ನಾನು ರಾಜಕೀಯ ತೊರೆಯುತ್ತಿದ್ದೇನೆ, ಅಲ್ವಿದಾ. ನನ್ನ ಪೋಷಕರು, ಪತ್ನಿ, ಸ್ನೇಹಿತ ಜೊತೆಯಲ್ಲಿ ಮಾತುಕತೆ ನಡೆಸಿದೆ. ಅವರೆಲ್ಲರ ಸಲಹೆಯನ್ನು ಕೇಳಿದ ನಂತರ ನಾನು ನಿರ್ಗಮನದ ಘೋಷಣೆ ಮಾಡುತ್ತಿದ್ದೇನೆ. ಆದರೆ ನಾನು ಯಾವುದೇ ಬೇರೆ ಪಕ್ಷಕ್ಕೆ ಹೋಗುತ್ತಿಲ್ಲ. ಟಿಎಂಸಿ, ಕಾಂಗ್ರೆಸ್, ಸಿಪಿಐಎಂ ಯಾವ ಪಕ್ಷಕ್ಕೂ ಸೇರ್ಪಡೆ ಮಾಡುತ್ತಿಲ್ಲ. ಯಾರೂ ನನ್ನನ್ನು ಕರೆದಿಲ್ಲ ಎಂದು ಈ ಮೂಲಕ ನಾನು ದೃಢಪಡಿಸುತ್ತೇನೆ," ಎಂದು ತಿಳಿಸಿದ್ದಾರೆ.
"ನಾನು ಯಾವ ಪಕ್ಷಕ್ಕೂ ಸೇರುತ್ತಿಲ್ಲ. ನಾನು ಒಬ್ಬ ತಂಡದ ಆಟಗಾರ! ಯಾವಾಗಲೂ ಒಂದು ತಂಡವನ್ನು ಬೆಂಬಲಿಸುತ್ತಿದ್ದೇನೆ. ಅದು ಮೌನ್ ಭಗನ್. ಹಾಗೆಯೇ ಒಂದೇ ಪಕ್ಷದಲ್ಲಿ ಇದ್ದೆ. ಅದು ಪಶ್ಚಿಮ ಬಂಗಾಳ ಬಿಜೆಪಿ ಪಕ್ಷ. ಅಷ್ಟೇ. ನಾನೀಗ ತೆರಳುತ್ತಿದ್ದೇನೆ," ಎಂದು ಸುಪ್ರಿಯೋ ತನ್ನ ಫೇಸ್ ಬುಕ್ನಲ್ಲಿ ತಿಳಿಸಿದ್ದಾರೆ. "ನಾನು ತುಂಬಾ ಸಮಯ ರಾಜಕೀಯದಲ್ಲಿದ್ದೆ. ಆ ಸಂದರ್ಭದಲ್ಲಿ ಯಾರಿಗಾದರೂ ಸಹಾಯ ಮಾಡಿದ್ದೇನೆ. ಹಾಗೆಯೇ ಈ ಸಂದರ್ಭದಲ್ಲೇ ಯಾರಿಗಾದರೂ ನಿರಾಶೆಗೊಳಿಸಿರಲುಬಹುದು. ಆದರೆ ಇದನ್ನು ಜನರು ನಿರ್ಧರಿಸುತ್ತಾರೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳ ಬೇಕಾದರೆ, ನೀವು ಯಾವುದೇ ರಾಜಕೀಯದಲ್ಲಿ ಭಾಗಿಯಾಗದೆ ಅದನ್ನು ಮಾಡಬಹುದು," ಎಂದು ಪೋಸ್ಟ್ನಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನು ಬಳಿಕ ಬಾಬೂಲ್ ತಾನು ಎಲ್ಲಿಗೂ ಹೋಗುತ್ತಿಲ್ಲ ಎಂಬ ವಾಕ್ಯವನ್ನು ತೆಗೆದುಹಾಕಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೆಯೇ ಬಾಬೂಲ್ ಸುಪ್ರಿಯೋ, "ನನ್ನ ಮತ್ತು ಪಕ್ಷದ ನಾಯಕತ್ವದ ನಡುವೆ ಚುನಾವಣೆಗೆ ಮುಂಚೆಯೇ ಸಾಕಷ್ಟು ವಿರೋಧಾಭಾಸಗಳಿವೆ ಎಂದು ನಾನು ಹೇಳಲು ಬಯಸುತ್ತೇನೆ. ಅದು ಸಾಮಾನ್ಯ ಎಂದು ನಾನು ಭಾವಿಸಿದ್ದೆ ಆದರೆ ಆ ಘಟನೆಗಳನ್ನು ಹೆಚ್ಚಾಗಿ ಮುನ್ನೆಲೆಗೆ ತರಲಾಯಿತು. ಅದಕ್ಕಾಗಿ, ಕೆಲವು ನಾಯಕರು ಅಷ್ಟೇ ಜವಾಬ್ದಾರರು ನಾನಂತೂ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದೇನೆ, ಇದು ಪಕ್ಷದ ಶಿಸ್ತನ್ನು ಉಲ್ಲಂಘಿಸುವ ಕ್ರಿಯೆ ಎಂದು ನೋಡಬಹುದು," ಎಂದಿದ್ದಾರೆ.
2014 ರಲ್ಲಿ ತನ್ನ ಗೆಲುವನ್ನು ತರುವಾಗ, ಸುಪ್ರಿಯೋ ಅಂದಿನಿಂದ ರಾಜ್ಯದಲ್ಲಿ ಬಿಜೆಪಿಗೆ ಸಾಕಷ್ಟು ಬದಲಾವಣೆಯಾಗಿದೆ ಎಂದು ಹೇಳಿದರು. "2014 ರಲ್ಲಿ ಬಂಗಾಳದಲ್ಲಿನ ಸನ್ನಿವೇಶವು 2019 ಕ್ಕಿಂತ ಭಿನ್ನವಾಗಿತ್ತು. ಎಸ್ಎಸ್ ಅಹ್ಲುವಾಲಿಯಾರಿಗೆ ಗೌರವಯುತವಾಗಿ, ಡಾರ್ಜಿಲಿಂಗ್ನಲ್ಲಿ ಜಿಜೆಎಂ ಬಿಜೆಪಿಯ ಮಿತ್ರ ಪಕ್ಷವಾಗಿತ್ತು. ನಾನು ಬಿಜೆಪಿ ಟಿಕೆಟ್ನಲ್ಲಿ ಒಬ್ಬನೇ ಎಂದು ಹೇಳಬೇಕು. ಆದರೆ ಇಂದು ಬಂಗಾಳದಲ್ಲಿ ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿದೆ. ಪಕ್ಷವು ಇಂದು ಯುವ ಮತ್ತು ಅನುಭವಿ ಸದಸ್ಯರನ್ನು ಹೊಂದಿದೆ. ಆ ಯುವ ಮತ್ತು ಅನುಭವಿ ಸದಸ್ಯರು ಪಕ್ಷವನ್ನು ಬಹಳ ದೂರ ಸಾಗಲು ಸಹಾಯ ಮಾಡಬಹುದು. ಅದೇನೇ ಇದ್ದರೂ, ಪಕ್ಷದಿಂದ ಒಂದು ನಿರ್ದಿಷ್ಟ ಮುಖದ ಅನುಪಸ್ಥಿತಿಯು ಇಂದು ಬಹಳಷ್ಟು ವ್ಯತ್ಯಾಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಸತ್ಯವನ್ನು ಒಪ್ಪಿಕೊಳ್ಳುವ ಮೂಲಕ ನಾನು ಸರಿಯಾದ ಆಯ್ಕೆ ಮಾಡುತ್ತಿದ್ದೇನೆ ಎಂದು ನಾನು ನಂಬುತ್ತೇನೆ," ಎಂದು ಕೂಡಾ ಸುಪ್ರಿಯೋ ತಿಳಿಸಿದ್ದಾರೆ.

ಇನ್ನು ಈ ಬಾಬೂಲ್ ರಾಜಕೀಯ ನಿರ್ಗಮನದ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಬಾಬೂಲ್ ಸುಪ್ರಿಯೋ ಫೇಸ್ಬುಕ್ ಪೋಸ್ಟ್ ನಾಟಕ ಎಂದ ಟಿಎಂಸಿ
ಈ ನಡುವೆ ಟಿಎಂಸಿ ನಾಯಕತ್ವವು ಬಿಜೆಪಿ ಘಟಕವು ತನ್ನ ಪಕ್ಷದ ಸದಸ್ಯರನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಲೇವಡಿ ಮಾಡಿದೆ. ಸುಪ್ರಿಯೋ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು "ನಾಟಕ" ಎಂದು ಬಣ್ಣಿಸಿದೆ. "ಬಾಬುಲ್ ಸುಪ್ರಿಯೋರನ್ನು ಸಚಿವ ಸ್ಥಾನದಿಂದ ಕೈಬಿಟ್ಟಿದ್ದರಿಂದ ನಾಟಕ ಮಾಡುತ್ತಿದ್ದಾರೆ. ಬಾಬೂಲ್ ರಾಜೀನಾಮೆ ನೀಡಲು ಇಷ್ಟಪಟ್ಟಿದ್ದರೆ, ತಮ್ಮ ರಾಜೀನಾಮೆಯನ್ನು ಲೋಕಸಭಾ ಸ್ಪೀಕರ್ಗೆ ಕಳುಹಿಸಬೇಕಿತ್ತು. ಬದಲಾಗಿ ಈ ತಂತ್ರಗಳಲ್ಲಿ ತೊಡಗಿದ್ದಾರೆ. ಆದರೆ, ಈ ಘಟನೆಯು ಬಿಜೆಪಿಯಲ್ಲಿನ ಆಂತರಿಕ ಜಗಳವನ್ನು ಮುನ್ನೆಲೆಗೆ ತಂದಿದೆ ಎಂದು ಟಿಎಂಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಹೇಳಿದರು.
ಅಸನ್ಸೋಲ್ನಿಂದ ಎರಡು ಬಾರಿ ಸಂಸದರಾಗಿದ್ದ ಬಾಬೂಲ್, ಜುಲೈ 7 ರಂದು ಪ್ರಮುಖ ಸಂಪುಟ ಪುನರ್ ರಚನೆಯ ಭಾಗವಾಗಿ ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲ್ಪಟ್ಟ ಹಲವಾರು ಸಚಿವರಲ್ಲಿ ಒಬ್ಬರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ನ ಅರೂಪ್ ಬಿಸ್ವಾಸ್ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ವಿಫಲರಾಗಿದ್ದರು. ಸುಪ್ರಿಯೋ ಮತ್ತು ದೇಬಶ್ರೀ ಚೌಧುರಿ ಇಬ್ಬರನ್ನೂ ಸಚಿವ ಸ್ಥಾನದಿಂದ ಕೈಬಿಡಲಾಯಿತು. ಪಶ್ಚಿಮ ಬಂಗಾಳದ ಇತರ ನಾಲ್ಕು ಸಂಸದರಾದ ನಿಶಿತ್ ಪ್ರಮಾಣಿಕ್, ಸಂತನು ಠಾಕೂರ್, ಸುಭಾಸ್ ಸರ್ಕಾರ್ ಮತ್ತು ಜಾನ್ ಬಾರ್ಲಾರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.
ಇನ್ನು ಈ ನಡುವೆ ಬಾಬೂಲ್ ಪಕ್ಷದಲ್ಲಿಯೇ ಉಳಿಯುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ರಾಜಕೀಯ ನಿವೃತ್ತಿಯ ಕುರಿತು ಬಾಬುಲ್ ಸುಪ್ರಿಯೋ ಘೋಷಣೆಗೆ ಸಂಬಂಧಿಸಿ ಬಿಜೆಪಿ ನಾಯಕರು, ಮಾತನಾಡಿ ಬಾಬೂಲ್ ಪಕ್ಷದೊಂದಿಗೆ ಮುಂದುವರಿಯುತ್ತಾರೆ ಎಂದು ಹೇಳಿದರು. ಬಿಜೆಪಿ ನಾಯಕ ರಾಹುಲ್ ಸಿನ್ಹಾ, "ನಾನು ಅವರೊಂದಿಗೆ (ಬಾಬುಲ್ ಸುಪ್ರಿಯೋ) ಮಾತನಾಡಲಿಲ್ಲ, ಅಗತ್ಯ ಬಿದ್ದರೆ ನಾನು ಮಾತನಾಡುತ್ತೇನೆ. ನಾನು ತಿಳಿದಿರುವ ಮಟ್ಟಿಗೆ, 2014 ರಲ್ಲಿ ನನ್ನ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಅವರು ಹುಗ್ಲಿಯಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ನಾನು ಪರಿಸ್ಥಿತಿ ವಿವರಿಸಿ, ಅಸನ್ಸೋಲ್ನಲ್ಲಿ ನಿಲ್ಲುವಂತೆ ಮಾಡಿದೆ. ಬಾಬುಲ್ ಸುಪ್ರಿಯೋ ಭಾವೋದ್ರಿಕ್ತ, ಚಿಂತನಶೀಲರಾಗಿದ್ದಾರೆ," ಎಂದು ಹೇಳಿದ್ದಾರೆ.
"ಕಲಾವಿದರು ಅಂದರೆ ಬಾಬೂಲ್ ಹಾಗೇ ಇದ್ದಾರೆ. ಈಗಲೂ ಸಂಸದಾಗಿದ್ದಾರೆ. ಭಾವನೆಗಳು ಕಡಿಮೆಯಾಗುತ್ತವೆ, ಬಾಬುಲ್ ಸುಪ್ರಿಯೋ ಬಿಜೆಪಿಯಲ್ಲಿದ್ದಾರೆ. ಅವರು ಈ ಹಿಂದೆ ಬಿಜೆಪಿಗಾಗಿ ಜನರಿಗಾಗಿ ಕೆಲಸ ಮಾಡುತ್ತಿದ್ದರು. ನಾಳೆಯೂ ಮಾಡುತ್ತಾರೆ," ಎಂದು ಹೇಳಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications