ಅರ್ಪಿತಾ ಮುಖರ್ಜಿ ಮಗು ದತ್ತು ಪಡೆಯಲು ಮಾಜಿ ಸಚಿವ ಪಾರ್ಥ ಚಟರ್ಜಿ ಪ್ರಮಾಣಪತ್ರ
ಕೋಲ್ಕತ್ತಾ, ಸೆಪ್ಟೆಂಬರ್ 21: ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಸಹಾಯಕಿ ಅರ್ಪಿತಾ ಮುಖರ್ಜಿ ಮಗುವೊಂದನ್ನು ದತ್ತು ಪಡೆಯಲು ಬಯಸಿದ್ದರು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಮಗುವನ್ನು ದತ್ತು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿ ತಮ್ಮ ಕುಟುಂಬದ ಸ್ನೇಹಿತರಾಗಿ ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ ಸಹಿ ಹಾಕಿ ನೀಡಿದ್ದರು ಎಂದು ಹೇಳಲಾಗಿದೆ.
ದತ್ತು ಸ್ವೀಕಾರದ ದಾಖಲೆಗಳನ್ನು ಎದುರಿಸಿದ ಈ ದಾಖಲೆ ಬಗ್ಗೆ ಪ್ರಸ್ತಾಪಿಸುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಅವರು, ತಾವು ಸಾರ್ವಜನಿಕ ಪ್ರತಿನಿಧಿ ಆಗಿರುವ ಹಿನ್ನೆಲೆ ಈ ರೀತಿಯ ಶಿಫಾರಸ್ಸು ಪತ್ರಕ್ಕಾಗಿ ಅನೇಕು ತಮ್ಮ ಬಳಿಗೆ ಬರುತ್ತಾರೆ ಎಂದು ಹೇಳಿದ್ದಾರೆ. ಆದರೆ ಚಾರ್ಜ್ಶೀಟ್ನಲ್ಲಿ ಇಬ್ಬರ ಮನೆಗಳಲ್ಲಿ ನಡೆಸಿದ ಶೋಧದ ವಿವರಗಳು ಮತ್ತು ಪತ್ತೆಯಾದ ಎಲ್ಲಾ ದಾಖಲೆಗಳು, ನಗದು ಮತ್ತು ವಸ್ತುಗಳ ವಿವರವನ್ನೂ ಸಹ ತಿಳಿಸಲಾಗಿದೆ.

ಈಗಾಗಲೇ ಜೈಲು ಸೇರಿದ ಚಟರ್ಜಿ ಹಾಗೂ ಮುಖರ್ಜಿ
ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (WBSSC) ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದ ಹಗರಣ ಆರೋಪದಲ್ಲಿ ಈಗಾಗಲೇ ಅರ್ಪಿತಾ ಮುಖರ್ಜಿ ಹಾಗೂ ಮಾಜಿ ಸಚಿವ ಪಾರ್ಥ ಚಟರ್ಜಿ ಜೈಲು ಸೇರಿದ್ದಾರೆ. ಕೋಲ್ಕತ್ತಾದ ಆರ್ಪಿತಾ ಮನೆ ಮೇಲೆ ದಾಳಿ ನಡೆಸಿದ ಹಣಕಾಸು ತನಿಖಾ ಸಂಸ್ಥೆ ಅಧಿಕಾರಿಗಳು ಕೋಟಿಗಟ್ಟಲೆ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. ಜುಲೈನಲ್ಲಿ ಕೋಲ್ಕತ್ತಾದಲ್ಲಿರುವ ಮುಖರ್ಜಿಯ ಎರಡು ನಿವಾಸಗಳಿಂದ 49.80 ಕೋಟಿ ರೂಪಾಯಿ ನಗದು ಮತ್ತು 5.08 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು.

ಜಾಮೀನು ಅರ್ಜಿ ತಿರಸ್ಕರಿಸಿರುವ ಕೋರ್ಟ್
ಮಾಜಿ ಸಚಿವ ಪಾರ್ಥ ಚಟರ್ಜಿ ಮತ್ತು ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋಲ್ಕತ್ತಾ ಕೋರ್ಟ್ ತಿರಸ್ಕರಿಸಿತು. ಅಲ್ಲದೇ ಇನ್ನೂ 14 ದಿನಗಳವರೆಗೂ ಇಬ್ಬರಿಗೆ ಜೈಲು ಶಿಕ್ಷೆಯನ್ನು ವಿಸ್ತರಿಸಲಾಯಿತು. ಕೋಲ್ಕತ್ತಾದ ವಿಶೇಷ ಇಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಮೊದಲ ಆರೋಪ ಪಟ್ಟಿಯಲ್ಲಿ ಪ್ರಮುಖ ಆರೋಪಿಗಳಾದ ಇವರಿಬ್ಬರ ಬಳಿಯೇ ಬರೋಬ್ಬರಿ 103.10 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಉಲ್ಲೇಖಿಸಲಾಗಿತ್ತು.

ಮೊದಲ ಚಾರ್ಜ್ ಶೀಟ್ 58 ದಿನ ಬೇಕಾಯ್ತು
ಇಡಿ ತನಿಖೆ ಆರಂಭಿಸಿದ 58 ದಿನಗಳ ನಂತರದಲ್ಲಿ ಮೊದಲ ಚಾರ್ಜ್ಶೀಟ್ನ್ನು ಸಲ್ಲಿಸಲಾಗಿದೆ. ಅದರಲ್ಲಿ 35 ಬ್ಯಾಂಕ್ ಖಾತೆಗಳ ಒಟ್ಟು ಠೇವಣಿ 7.89 ಕೋಟಿ ರೂ. ಹಗರಣದಲ್ಲಿ ಚಟರ್ಜಿ ಮತ್ತು ಮುಖರ್ಜಿ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಒಟ್ಟು 872 ಪುಟಗಳ ಚಾರ್ಜ್ ಶೀಟ್ನ್ನು ಸಲ್ಲಿಕೆ ಮಾಡಲಾಗಿದೆ. "ತನಿಖಾ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ ಮತ್ತು ಮುಂದಿನ ತನಿಖೆಯು ಹಗರಣದ ಆದಾಯದ ಅಕ್ರಮ ಸಂಪತ್ತನ್ನು ಬಳಸಿಕೊಂಡು ಸಂಗ್ರಹಿಸಿದ ಅಂತಹ ಹೆಚ್ಚಿನ ಆಸ್ತಿಗಳನ್ನು ಬಹಿರಂಗಪಡಿಸುತ್ತದೆ ಎಂದು ನಮಗೆ ಖಚಿತವಾಗಿದೆ", ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಬ್ಲ್ಯುಬಿಎಸ್ಎಸ್ಸಿ ಹಗರಣದ ಬಗ್ಗೆ ತಿಳಿಯಿರಿ
ಡಬ್ಲ್ಯುಬಿಎಸ್ಎಸ್ಸಿಯ ಹಗರಣವು 2014ರ ಹಿಂದಿನದಾಗಿದ್ದು, ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (SSC) ಪಶ್ಚಿಮ ಬಂಗಾಳದ ಸರ್ಕಾರಿ ಶಾಲೆಗಳಲ್ಲಿ ರಾಜ್ಯ ಮಟ್ಟದ ಆಯ್ಕೆ ಪರೀಕ್ಷೆ (SLST) ಮೂಲಕ ಶಿಕ್ಷಕರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿತು. ಅಂದು ಪಾರ್ಥ ಚಟರ್ಜಿ ಪಶ್ಚಿಮ ಬಂಗಾಳದಲ್ಲಿ ಉನ್ನತ ಶಿಕ್ಷಣ ಮತ್ತು ಶಾಲಾ ಶಿಕ್ಷಣ ಇಲಾಖೆಯ ಉಸ್ತುವಾರಿ ಸಚಿವರಾಗಿದ್ದು, 2016 ರಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಯಿತು. ಆದಾಗ್ಯೂ, ನೇಮಕಾತಿ ಪ್ರಕ್ರಿಯೆಯಲ್ಲಿನ ಅವ್ಯವಹಾರಗಳನ್ನು ಆರೋಪಿಸಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಸರಣಿ ಅರ್ಜಿಗಳನ್ನು ಸಲ್ಲಿಸಲಾಯಿತು. ಕಡಿಮೆ ಅಂಕಗಳನ್ನು ಪಡೆದ ಅನೇಕ ಪರೀಕ್ಷಾರ್ಥಿಗಳು ಮೆರಿಟ್ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದಿದ್ದಾರೆ. ಮೆರಿಟ್ ಪಟ್ಟಿಯಲ್ಲೂ ಇಲ್ಲದ ಕೆಲವು ಅರ್ಜಿದಾರರು ನೇಮಕಾತಿ ಪತ್ರಗಳನ್ನು ಪಡೆದಿದ್ದಾರೆ ಎಂಬ ಹಲವಾರು ಆರೋಪಗಳಿವೆ ಎಂದು ಅರ್ಜಿದಾರರು ಆರೋಪಿಸಿದ್ದರು.












Click it and Unblock the Notifications