ದೇಶದೆಲ್ಲಡೆ ಕೊರೊನಾ ವೈರಸ್ ಭೀತಿ: ಇದು ಪ್ರಧಾನಿ ಮೋದಿಯ 'ದೊಡ್ಡ ಗಿಮಿಕ್' ಎಂದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಮಾರ್ಚ್ 4: ದೇಶದೆಲ್ಲಡೆ ಕೊರೊನಾ ವೈರಸ್ ಭೀತಿ ಆವರಿಸುತ್ತಿದ್ದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನರೇಂದ್ರ ಮೋದಿ ಸರಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ.
"ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಗಲಭೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರವು ಕರೋನ ವೈರಸ್ ಭೀತಿ ಹರಡುತ್ತಿದೆ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
"ಕೊರೊನಾ ಎನ್ನುವುದು ಭಯಾನಕ ಕಾಯಿಲೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಕೆಲವರು ಇದನ್ನು ಅವಶ್ಯಕತೆಗಿಂತ ಜಾಸ್ತಿ ಬಳಸಿಕೊಳ್ಳುತ್ತಿದ್ದಾರೆ. ಸುಮ್ಮನೆ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ. ದೆಹಲಿಯ ಘಟನೆಯನ್ನು ಬೇರಡೆ ಸೆಳೆಯಲು ನಡೆಸಲಾಗುತ್ತಿರುವ ವ್ಯವಸ್ಥಿತ ತಂತ್ರ" ಎಂದು ಮಮತಾ, ಮೋದಿ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.

"ಕೊರೊನಾ ವೈರಸ್ ನಿಂದ ದೇಶದಲ್ಲಿ ಯಾರೂ ಸಾಯಲಿಲ್ಲ, ಜನ ಮೃತ ಪಟ್ಟಿದ್ದು ದೆಹಲಿಯಲ್ಲಿ ನಡೆದ ಗಲಭೆಯಿಂದ. ಇದನ್ನು ಮುಚ್ಚಿಹಾಕಲು ಕೆಲವು ಖಾಸಗಿ ವಾಹಿನಿಗಳು ಕೊರೊನಾ ವಿಚಾರವನ್ನು ಮುನ್ನಲೆಗೆ ತರುತ್ತಿದ್ದಾರೆ" ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
"ಗೋಲಿ ಮಾರೋ ಎಂದು ಬಹಿರಂಗವಾಗಿಯೇ ಕರೆ ನೀಡುತ್ತಾರೆ. ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳ ಒಂದೇ ಅಲ್ಲ ಎನ್ನುವ ಎಚ್ಚರಿಕೆಯನ್ನು ನಾನು ನೀಡುತ್ತೇನೆ" ಎಂದು ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಈವರೆಗೆ ಭಾರತದಲ್ಲಿ 28 ಕರೋನ ವೈರಸ್ ಪ್ರಕರಣಗಳು ದಾಖಲಾಗಿದೆ. ಈ ಮಾರಣಾಂತಿಕ ರೋಗದಿಂದ ವಿಶ್ವಾದ್ಯಂತ ಇದುವರೆಗೆ, 3,000 ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ 90,000ಕ್ಕೂ ಹೆಚ್ಚು ಜನರಿಗೆ ಇದಾ ಸೋಂಕು ತಗುಲಿದೆ.












Click it and Unblock the Notifications