ಸಹಕಾರ ಸಂಸ್ಥೆ ಚುನಾವಣೆ: ನಂದಿಗ್ರಾಮದಲ್ಲಿ ದೀದಿ ವಿರುದ್ಧ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿಗೆ ಗೆಲುವು
ಕೋಲ್ಕತ್ತಾ ಸೆಪ್ಟೆಂಬರ್ 19: ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ್ನಲ್ಲಿ ಭಾನುವಾರ ನಡೆದ ಸಹಕಾರಿ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನಿಂದಾಗಿ ಮಮತಾ ಬ್ಯಾನರ್ಜಿಗೆ ಭಾರಿ ಹಿನ್ನಡೆಯಾಗಿದೆ.
ಸಹಕಾರಿ ಸಂಸ್ಥೆ ಭೆಕುಟಿಯಾ ಸಮಬಾಯ್ ಕೃಷಿ ಸಮಿತಿಯ 12 ಸ್ಥಾನಗಳಲ್ಲಿ ಬಿಜೆಪಿ 11 ಸ್ಥಾನಗಳನ್ನು ಗೆದ್ದಿದೆ. ಭಾನುವಾರ ನಡೆದ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸ್ಥಾನ ಮಾತ್ರ ತೃಣಮೂಲ ಪಾಲಾಗಿದೆ.
ಬಿಜೆಪಿ ಕಾರ್ಯಕರ್ತರು ಬಾಂಬ್, ಬಂದೂಕುಗಳಿಂದ ಶಸ್ತ್ರಸಜ್ಜಿತರಾಗಿದ್ದರು; ಮಮತಾ ಬ್ಯಾನರ್ಜಿ
ಕಳೆದ ತಿಂಗಳು ನಂದಿಗ್ರಾಮದ ಇನ್ನೊಂದು ಭಾಗದಲ್ಲಿ ತೃಣಮೂಲ ದೊಡ್ಡ ಗೆಲುವು ಸಾಧಿಸಿತ್ತು. ನಂದಿಗ್ರಾಮ್-2 ಬ್ಲಾಕ್ನಲ್ಲಿ ತೃಣಮೂಲ 51 ಸ್ಥಾನಗಳನ್ನು ಗೆದ್ದಿತ್ತು. ಸಿಪಿಎಂ ಒಂದು ಮತ್ತು ಬಿಜೆಪಿ ಯಾವುದೂ ಸ್ಥಾನವನ್ನು ಗೆದ್ದಿರಲಿಲ್ಲ. ಮಮತಾ ಬ್ಯಾನರ್ಜಿಯವರ ಪಕ್ಷವು ಕೊಂಟೈ ಮತ್ತು ಸಿಂಗೂರ್ನಲ್ಲಿಯೂ ಸಹ ಚುನಾವಣೆಯನ್ನು ಗೆದ್ದಿದೆ.
ಭಾನುವಾರ ನಡೆದ ಚುನಾವಣೆಯಲ್ಲಿ ಎರಡೂ ಪಕ್ಷಗಳು ಪರಸ್ಪರ ಹಿಂಸಾಚಾರದ ಆರೋಪಗಳನ್ನು ಮಾಡಿಕೊಂಡಿದ್ದವು. ತೃಣಮೂಲ ಹೊರಗಿನವರನ್ನು ಕರೆತಂದು ಮತದಾನಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಸುವೆಂದು ಅಧಿಕಾರಿ ಮೇಲೆ ತೃಣಮೂಲ ಕಾಂಗ್ರೆಸ್ ಅದೇ ಆರೋಪವನ್ನು ಮಾಡಿತ್ತು.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ತೃಣಮೂಲಕ್ಕೆ ಸೇರಿದವರು ಎಂದು ಹೇಳಲಾದ ಸ್ಥಳೀಯ ಪಂಚಾಯತ್ ಸಮಿತಿ ಸದಸ್ಯರ ಅಂಗಿಯನ್ನು ಕೆಲವು ಮಹಿಳೆಯರು ಹರಿದ ವಿಡಿಯೋಗಳು ಟಿವಿ ಚಾನೆಲ್ಗಳಲ್ಲಿ ವೈರಲ್ ಆಗಿದ್ದವು. ಆತನನ್ನು ಪೊಲೀಸರು ರಕ್ಷಿಸಿದರು. ನಂದಿಗ್ರಾಮ್ 2021ರ ಬಂಗಾಳ ಚುನಾವಣೆಗೆ ತಿಂಗಳ ಮೊದಲು ತೃಣಮೂಲವನ್ನು ತೊರೆದು ಬಿಜೆಪಿಗೆ ಸೇರಿದ ಮಮತಾ ಬ್ಯಾನರ್ಜಿ ಅವರ ಮಾಜಿ ಸಹಾಯಕ ಸುವೇಂದು ಅಧಿಕಾರಿ ಅವರ ಕ್ಷೇತ್ರವಾಗಿದೆ.
ಮಮತಾ ಬ್ಯಾನರ್ಜಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದು, ಮೂರನೇ ಬಾರಿಗೆ ಮುಖ್ಯಮಂತ್ರಿಯಾದರು, ಆದರೆ ಅವರು ಬಂಗಾಳದಲ್ಲಿ ಅಧಿಕಾರಕ್ಕೆ ಏರಲು ಕಾರಣವಾದ ಜಿಲ್ಲೆಯ ನಂದಿಗ್ರಾಮ್ನಲ್ಲಿ ಸುವೇಂದು ಅಧಿಕಾರಿಗೆ ಪ್ರತಿಷ್ಠೆಯ ಯುದ್ಧದಲ್ಲಿ ಸೋತರು.
"ಬಿಜೆಪಿಯ ನಿರ್ದೇಶಕರ ಸಮಿತಿಯನ್ನು ಆಯ್ಕೆ ಮಾಡಿದ್ದಕ್ಕಾಗಿ ನನ್ನ ನಂದಿಗ್ರಾಮ ಕ್ಷೇತ್ರದ ಭೆಕುಟಿಯಾ ಸಮಬಾಯ್ ಕೃಷಿ ಉನ್ನಯನ ಸಮಿತಿಯ ಎಲ್ಲಾ ಸಹಕಾರಿ ಸಂಘದ ಮತದಾರರಿಗೆ ಶುಭಾಶಯಗಳು. ಈ ರೀತಿಯ ಗೆಲುವುಗಳು ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸಿಗೆ ದಾರಿ ಮಾಡಿಕೊಡುತ್ತವೆ" ಎಂದು ಸುವೆಂದು ಅಧಿಕಾರಿ ಟ್ವೀಟ್ ಮಾಡಿದ್ದಾರೆ.
ನಂದಿಗ್ರಾಮ್ನಲ್ಲಿನ ಸಹಕಾರಿ ಸಂಸ್ಥೆ ಚುನಾವಣೆಯಲ್ಲಿ ಮಮತಾ ಅವರ ಹಿನ್ನಡೆಯನ್ನು ಬಿಜೆಪಿ ನಾಯಕರು ಬಂಗಾಳದ ಪ್ರಮುಖ ಭದ್ರಕೋಟೆಗಳಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಸಂಕೇತವೆಂದು ಬಿಂಬಿಸಿದ್ದಾರೆ. ಆದರೆ, ಕಳೆದ ತಿಂಗಳು ನಂದಿಗ್ರಾಮದಲ್ಲಿ ಹನುಭುನಿಯಾ, ಘೋಲ್ಪುಕೂರ್ ಮತ್ತು ಬಿರುಲಿಯಾದಲ್ಲಿ ನಡೆದ ಸಹಕಾರಿ ಚುನಾವಣೆಯಲ್ಲಿ ತೃಣಮೂಲ ನಾಯಕರು ಪಕ್ಷದ ಗೆಲುವನ್ನು ತೋರಿಸಿದರು. ಅದರಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿ ವಿಫಲವಾಗಿದೆ. ತೃಣಮೂಲ 2021 ರಲ್ಲಿ ಕಳೆದುಕೊಂಡ ಪ್ರದೇಶವನ್ನು ಮರಳಿ ಪಡೆಯುತ್ತಿದೆ ಎಂಬುದಕ್ಕೆ ಇದು ಪುರಾವೆ ಎಂದು ನಾಯಕರು ಹೇಳಿದ್ದರು.