ಕಮಿಷನರ್ ಮನೆಗೆ ಬರಲು ಎಷ್ಟು ಧೈರ್ಯ : ಸಿಬಿಐ ವಿರುದ್ಧ ದೀದಿ ಕೆಂಡಾಮಂಡಲ
ಕೋಲ್ಕತಾ, ಫೆಬ್ರವರಿ 3 : "ಯಾವುದೇ ವಾರಂಟ್ ಇಲ್ಲದೆ ಪೊಲೀಸ್ ಕಮಿಷನರ್ ಮನೆಗೆ ಬರಲು ನಿಮಗೆಷ್ಟು ಧೈರ್ಯ" ಎಂದು ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಧಮ್ಕಿ ನೀಡಿದ್ದು, 'ಸಂವಿಧಾನವನ್ನು ಉಳಿಸಿ' ಎಂದು ಧರಣಿ ಕುಳಿತಿದ್ದಾರೆ.
ಸಿಬಿಐ ಮತ್ತು ಕೋಲ್ಕತಾ ಪೊಲೀಸ್ ಕಮಿಷನರ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಕೋಲ್ಕತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಅವರ ವಿಚಾರಣೆಗೆಂದು ಬಂದಿದ್ದ ಐವರು ಸಿಬಿಐ ಅಧಿಕಾರಿಗಳನ್ನೇ ಪೊಲೀಸ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದು, ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೋಲ್ಕತ್ತಾದಲ್ಲಿ ಭಾನುವಾರ ಹೈ ಡ್ರಾಮಾ: ಸಿಬಿಐ ವರ್ಸಸ್ ಪೊಲೀಸ್
ಅವರನ್ನು ಶೇಕ್ಸಪಿಯರ್ ಸರನಿ ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗಲಾಗಿತ್ತು. ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ದೀದಿ ಡಿಕ್ಟೇಟರ್ ನಂತೆ ಆಡಳಿತ ನಡೆಸುತ್ತಿದ್ದಾರೆ, ಕೂಡಲೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂದು ಆಗ್ರಹಿಸಲಾಗುತ್ತಿದೆ.
ಈ ಸಂಘರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರೇ ಕಾರಣ ಎಂದು ಕೆಂಡಾಮಂಡಲರಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ರಾಜ್ಯದ ಪೊಲೀಸ್ ಅಧಿಕಾರಿಯನ್ನು ಉಳಿಸೇ ಉಳಿಸುತ್ತೇನೆ ಎಂದು ಕೇಂದ್ರ ಸರಕಾರಕ್ಕೇ ಸವಾಲು ಒಡ್ಡಿದ್ದಾರೆ.
ಆಂಬಿಡೆಂಟ್, ಅಜ್ಮೀರಾ ಬಳಿಕ ಮತ್ತೊಂದು ಚಿಟ್ಫಂಡ್ ಸಂಸ್ಥೆ ಕರ್ಮಕಾಂಡ ಬಯಲು
ಮೋದಿ ಹೇಳಿದಂತೆ ಡೋವಲ್ ಆಡುತ್ತಿದ್ದಾರೆ : ರಾಜನೈತಿಕವಾಗಿ ನಮ್ಮ ವಿರುದ್ಧ ಹೋರಾಡಲು ಬಿಜೆಪಿಗೆ ಧೈರ್ಯವಿಲ್ಲ. ಹೀಗಾಗಿಯೇ ಅವರು ಇಂಥ ಮಟ್ಟಕ್ಕೆ ಇಳಿದಿದ್ದಾರೆ. ಆ ಅಜಿತ್ ಡೋವಲ್ ಅವರು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದನ್ನೆಲ್ಲ ಮಾಡುತ್ತಿದ್ದಾರೆ. ಅವರೇ (ಡೋವಲ್) ಅವರೇ ಸಿಬಿಐಗೆ ಎಲ್ಲ ನಿರ್ದೇಶನಗಳನ್ನು ನೀಡುತ್ತಿದ್ದಾರೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಪೊಲೀಸರಿಂದ ಸಾಕ್ಷ್ಯ ನಾಶ : ಪಶ್ಚಿಮ ಬಂಗಾಳದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿರುದ್ಧ ಸಾಕ್ಷ್ಯವಿದ್ದು, ಕೋಲ್ಕತಾ ಪೊಲೀಸರು ವಿಚಾರಣೆಗೆ ಬೆಂಬಲ ನೀಡುತ್ತಿಲ್ಲ ಎಂದು ಹಂಗಾಮಿ ಸಿಬಿಐ ನಿರ್ದೇಶಕ ಎಂ ನಾಗೇಶ್ವರ ರಾವ್ ಅವರು ಆರೋಪಿಸಿದ್ದು, ಹಲವಾರು ಸಾಕ್ಷ್ಯವನ್ನು ನಾಶಪಡಿಸಲಾಗಿದೆ ಅಥವಾ ಮಾಯವಾಗುವಂತೆ ಮಾಡಲಾಗಿದೆ ಎಂದೂ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಂಟಕವಾಗಲಿರುವ ತೀನ್ ದೇವಿಯಾ!
15 ಸಾವಿರ ಕೋಟಿ ರುಪಾಯಿಯ ರೋಸ್ ವ್ಯಾಲಿ ಹಗರಣ ಮತ್ತು ಎರಡೂವರೆ ಸಾವಿರ ಕೋಟಿ ರುಪಾಯಿಯ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿರುವ ಕಮಿಷನರ್ ರಾಜೀವ್ ಕುಮಾರ್ ಅವರ ಹುಡುಕಾಟದಲ್ಲಿ ಸಿಬಿಐ ತೊಡಗಿದೆ. ಆದರೆ, ಅವರನ್ನು ರಕ್ಷಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೊಂಕಕಟ್ಟಿ ನಿಂತಿದ್ದಾರೆ.
ಸಿಬಿಐ ಮೇಲೆ ಪೊಲೀಸರ ದಾಳಿ : ಪಶ್ಚಿಮ ಬಂಗಾಳದ ಪೊಲೀಸರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸಿಬಿಐ ಜಂಟಿ ನಿರ್ದೇಶಕ ಪಂಕಜ್ ಶ್ರೀವಾಸ್ತವ ಅವರ ಮನೆಯನ್ನು ಸುತ್ತುವರಿದಿದ್ದಾರೆ. ಅವರನ್ನು ಬಂಧಿಸಲು ಅವರ ಮನೆಯ ಬಾಗಿಲನ್ನು ಬಡಿಯುತ್ತಿದ್ದಾರೆ.
ದೇಶ ಮುನ್ನಡೆಸುವ ಶಕ್ತಿ ಮಮತಾ ಅವರಿಗಿದೆ ಎಂದ ಕುಮಾರಸ್ವಾಮಿ
ಸಿಆರ್ಪಿಎಫ್ ಆಗಮನ : ಕೋಲ್ಕತಾದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಅನ್ನು ಕರೆಸಲಾಗಿದ್ದು, ಸಿಬಿಐ ಕಚೇರಿ ಬಳಿ ಅವರು ಸ್ಥಿತಿಗತಿಯನ್ನು ಅವಲೋಕಿಸುತ್ತಿದ್ದಾರೆ. ಆದರೆ, ಸಿಆರ್ಪಿಎಫ್ ಆಗಲಿ, ಬಿಎಸ್ಎಫ್ ಆಗಲಿ, ಸೇನೆಯಾಗಲಿ ಮೋದಿಯವರ ನಿರ್ದೇಶನವನ್ನು ಪಾಲಿಸಬಾರದೆಂದು ಮಮತಾ ಬ್ಯಾನರ್ಜಿ ಕೋರಿದ್ದಾರೆ.
ಘಟಬಂಧನ್ ಮಿತ್ರರ ಬೆಂಬಲ : ಮಹಾಘಟಬಂಧನ್ ನ ಮಿತ್ರರಾದ ರಾಹುಲ್ ಗಾಂಧಿ, ಓಮರ್ ಅಬ್ದುಲ್ಲ, ಚಂದ್ರಬಾಬು ನಾಯ್ಡು, ಅಖಿಲೇಶ್ ಯಾದವ್, ಶರದ್ ಪವಾರ್, ಅರವಿಂದ್ ಕೇಜ್ರಿವಾಲ್, ಮಾಯಾವತಿ ಮುಂತಾದ ನಾಯಕರು ಮಮತಾ ಬ್ಯಾನರ್ಜಿ ಜೊತೆ ಮಾತನಾಡಿದ್ದು, ಎಲ್ಲರೂ ದೀದಿಯ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.