ಸಾಧ್ಯವಾದರೆ ನಮ್ಮನ್ನು ಗೆಲುವಿನಿಂದ ತಡೆಯಿರಿ; ಬಿಜೆಪಿಗೆ ಟಿಎಂಸಿ ಸವಾಲು
ಕೋಲ್ಕತ್ತಾ, ಏಪ್ರಿಲ್ 3: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಾಣುವುದು ಖಚಿತ ಎಂಬ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ನಡ್ಡಾ ಹೇಳಿಕೆಗೆ ತಿರುಗೇಟು ನೀಡಿರುವ ಟಿಎಂಸಿ ನಾಯಕ ಡೇರೆಕ್ ಒಬ್ರಿಯಾನ್, ನಿಮಗೆ ಸಾಧ್ಯವಾದರೆ ನಮ್ಮನ್ನು ಗೆಲುವಿನಿಂದ ತಡೆಯಿರಿ ಎಂದು ಸವಾಲು ಹಾಕಿದ್ದಾರೆ.
ಶನಿವಾರ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, "ಮೋ-ಶಾ (ಮೋದಿ ಹಾಗೂ ಅಮಿತ್ ಶಾ) ಅವರಿಗೆ ಒಂದು ಹಾಗೂ ಎರಡನೇ ಹಂತದ ಚುನಾವಣೆ ನಂತರ ರಾಜ್ಯದಲ್ಲಿ ಪಕ್ಷದ ಕಠಿಣ ಸ್ಥಿತಿ ಬಗ್ಗೆ ಅರಿವಾಗಿದೆ. ಹೀಗಾಗೇ ಅವರು ಹೊಸ ಮೈಂಡ್ ಗೇಮ್ ಆರಂಭಿಸಿದ್ದಾರೆ. ಅವರ ಮೈಂಡ್ಗೇಮ್ ಬಗ್ಗೆ ಆಶ್ಚರ್ಯವಾಗುತ್ತದೆ" ಎಂದು ಟೀಕಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಎಚ್ಚರಿಕೆ
ಈ ಎಲ್ಲಾ ಆರೋಪ, ವಾದಗಳ ನಡುವೆಯೂ 2019ರಲ್ಲಿ ಟಿಎಂಸಿ 3% ಹೆಚ್ಚಿನ ಮತವನ್ನು ಗಿಟ್ಟಿಸಿಕೊಂಡಿತ್ತು. 2021ರಲ್ಲಿಯೂ ಇದೇ ಗೆಲುವಿನ ಹುಮ್ಮಸ್ಸಿನಲ್ಲಿ ಪಕ್ಷ ಮುಂದೆ ಸಾಗಿದೆ. ಸಾಧ್ಯವಾದರೆ, ನಮ್ಮನ್ನು ತಡೆಯಿರಿ ಎಂದು ಹೇಳಿದ್ದಾರೆ.
ಮೋದಿ ಹಾಗೂ ಶಾ ಪಶ್ಚಿಮ ಬಂಗಾಳದಲ್ಲಿನ ಪರಿಸ್ಥಿತಿ ಕುರಿತು ಅವಲೋಕನ ನಡೆಸಿರುವುದಾಗಿ ದೆಹಲಿ ಮೂಲದಿಂದ ತಿಳಿದುಬಂದಿದೆ. ಎರಡು ಹಂತಗಳ ಚುನಾವಣೆ ನಂತರ ರಾಜ್ಯದಲ್ಲಿ ಅವರ ಪರಿಸ್ಥಿತಿ ಬಗ್ಗೆ ಅವರಿಗೆ ಅರಿವಾಗಿದೆ. ಹೀಗಾಗಿ ಮೈಂಡ್ ಗೇಮ್ ಆರಂಭಿಸಿದ್ದಾರೆ. ಆದರೆ ಅದು ಇಲ್ಲಿ ನಡೆಯುವುದಿಲ್ಲ" ಎಂದಿದ್ದಾರೆ.
ಮಮತಾ ಬ್ಯಾನರ್ಜಿ ನಂದಿಗ್ರಾಮ ಬಿಟ್ಟು ಮತ್ತೊಂದು ಕ್ಷೇತ್ರದತ್ತ ಹೋಗುತ್ತಾರೆ ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ನಂದಿಗ್ರಾಮದಲ್ಲಿ ನಮ್ಮ ಗೆಲುವಿದೆ. ಬೇರೆ ಕ್ಷೇತ್ರದತ್ತ ಹೊರಳುವ ಮಾತೇ ಇಲ್ಲ" ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 291 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಎರಡು ಹಂತದ ಚುನಾವಣೆಗಳು ನಡೆದಿವೆ. ಮೇ 2ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.