ಬಂಗಾಳದಲ್ಲಿ ಮೊದಲಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಬಿಜೆಪಿ
ಕೋಲ್ಕತಾ, ಡಿ. 13: ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ 2021ರ ಜನವರಿ ತಿಂಗಳ ವೇಳೆಗೆ ದೇಶದೆಲ್ಲೆಡೆ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಜಾರಿಗೆ ತರಲಾಗುವುದು, ಮೊದಲಿಗೆ ಪಶ್ಚಿಮ ಬಂಗಾಳದಲ್ಲಿ ಈ ಕಾಯ್ದೆ ಜಾರಿಗೊಳ್ಳಲಿದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಉಸ್ತುವಾರಿ ಕೈಲಾಶ್ ವಿಜಯ್ ವರ್ಗಿಯಾ ಹೇಳಿದ್ದಾರೆ.
''ಪಶ್ಚಿಮ ಬಂಗಾಳದಲ್ಲಿ ಅಕ್ರಮ ನುಸುಳುವಿಕೆ, ವಲಸಿಗರ ಸಮಸ್ಯೆ ಬೃಹದಾಕಾರವಾಗಿ ಬೆಳೆದರೂ ಮಮತಾ ಬ್ಯಾನರ್ಜಿ ಸರ್ಕಾರ ಕಣ್ಮುಚ್ಚಿಕೊಂಡಿದೆ. ಇದಕ್ಕೆ ಕಡಿವಾಣ ಹಾಕುವ ಕಾಲ ಬಂದಿದೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿಜಯ್ ಹೇಳಿದರು.
ನಾರ್ಥ್ 14 ಪರಾಗಣ ಜಿಲ್ಲೆಯ ಠಾಕೂರ್ ನಗರದಲ್ಲಿ ಮಾತನಾಡಿದ ವಿಜಯ್, ಹಿಂದುಳಿತ ಮಾತುವಾ ಸಮುದಾಯದ ಹಿತದೃಷ್ಟಿ ಕಾಯುವ ಭರವಸೆ ನೀಡಿದರು. ಆದರೆ, ರಾಷ್ಟ್ರೀಯ ನಾಗರಿಕ ನೋಂದಣಿ (NRC) ಬಗ್ಗೆ ಬಿಜೆಪಿ ಇಲ್ಲಿ ತನಕ ಸೊಲ್ಲೆತ್ತಿಲ್ಲ.

ಬೊಂಗಾವ್ ಸಂಸದ ಶಂತನು ಠಾಕೂರ್ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಜಾರಿ ಬಗ್ಗೆ ಘೋಷಿಸಲಿದ್ದಾರೆ. ನಮ್ಮ(ಮಾತುವಾ) ಸಮುದಾಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಪೂರ್ವ ಪಾಕಿಸ್ತಾನ(ಇಂದಿನ ಬಾಂಗ್ಲಾದೇಶ)ದಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ಮಾತುವಾ ಸಮುದಾಯವು ಹಿಂದುಳಿದ ಹಿಂದು ನಿರಾಶ್ರಿತರೆನಿಸಿದ್ದಾರೆ. ಸಿಎಎ ಜಾರಿ ಮೂಲಕ ಈ ಸಮುದಾಯದ ಬೇಡಿಕೆ, ಆಶೋತ್ತರವನ್ನು ಈಡೇರಿಸುವ ಭರವಸೆಯನ್ನು ಬಿಜೆಪಿ ನೀಡಿದೆ. ಮುಂಬರುವ ಪಶ್ಚಿಮ ಬಂಗಾಳ ಚುನಾವಣೆ ಮೇಲೆ ಕಣ್ಣಿರಿಸಿರುವ ಕೇಸರಿ ಪಡೆ ಇದಕ್ಕೂ ಮುನ್ನ ಸಿಎಎ ಜಾರಿಗೊಳಿಸಿ ಅಕ್ರಮ ವಲಸಿಗರನ್ನು ಪ್ರತ್ಯೇಕಿಸಿ ಕ್ರಮ ಜರುಗಿಸಲು ಮುಂದಾಗಿದೆ.
2014ರ ಡಿಸೆಂಬರ್ 31ರಂದು ಹಾಗೂ ಅದಕ್ಕೂ ಮುನ್ನ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದು, ಸಿಖ್, ಬೌದ್ಧ, ಕ್ರೈಸ್ತ, ಜೈನ ಹಾಗೂ ಪಾರ್ಸಿ ನಿರಾಶ್ರಿತ ವಲಸಿಗರಿಗೆ ಸಿಎಎ ಮೂಲಕ ಪೌರತ್ವ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.












Click it and Unblock the Notifications