ಉಪಚುನಾವಣೆ, ಬಿಹಾರ ಚುನಾವಣೆ ಯಶಸ್ವಿ: ಅಮಿತ್ ಶಾ ಮುಂದಿನ ಸ್ಟೇಷನ್ ಪಶ್ಚಿಮ ಬಂಗಾಳ
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಊಹಿಸಲೂ ಅಸಾಧ್ಯವಾದ ಆಘಾತವನ್ನು ಬಿಜೆಪಿಯಿಂದ ಎದುರಿಸಿದ್ದರು. ಅಷ್ಟೇನೂ ನೆಲೆಯೇ ಇಲ್ಲದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದಾಖಲೆಯ ಹದಿನೆಂಟು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿತ್ತು.
ಅಂದಿನಿಂದ ಬಿಜೆಪಿ ಕಂಡರೆ ಉರಿದು ಬೀಳುವ ಮಮತಾ, ಬಿಜೆಪಿ ಮತ್ತು ಕೇಂದ್ರ ಸರಕಾರದ ವಿರುದ್ದ ಮುಗಿಬೀಳುತ್ತಲೇ ಇದ್ದಾರೆ. ನವೆಂಬರ್ ಹತ್ತರಂದು ಪ್ರಕಟವಾದ ಬಿಹಾರ ಮತ್ತು ವಿವಿಧ ರಾಜ್ಯಗಳ ಉಪಚುನಾವಣೆಯ ಫಲಿತಾಂಶದ ನಂತರ, ಬಿಜೆಪಿಗೆ ಇನ್ನಷ್ಟು ಹುಮ್ಮಸ್ಸು ಬಂದಿದೆ ಎಂದರೆ ತಪ್ಪಾಗಲಾರದು.
ಒಂದು ಬಾರಿಯೂ, ಚುನಾವಣಾ ಪ್ರಚಾರದ ವೇಳೆ ಬಿಹಾರಕ್ಕೆ ಹೋಗದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕುಂತಲ್ಲೇ ಏನು ಮಾಡಬಹುದೋ, ಅದನ್ನು ಮಾಡಿ ತೋರಿಸಿದ್ದಾರೆ. ಆಕಡೆ, ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಬೇಕು, ಇನ್ನೊಂದು ಕಡೆ, ಬಿಜೆಪಿ ಅತಿದೊಡ್ಡ ಪಾರ್ಟಿಯಾಗಿ ಹೊರಹೊಮ್ಮಬೇಕು.
ಅಮಿತ್ ಶಾ ಅವರ ಮುಂದಿನ ಟಾರ್ಗೆಟ್ ಪಶ್ಚಿಮ ಬಂಗಾಳ. ಈಗಾಗಲೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿರುವ ಬಿಜೆಪಿ, ಈಗಾಗಲೇ ಒಂದೊಂದಾಗಿಯೇ ಹೆಜ್ಜೆಯಿಡಲು ಆರಂಭಿಸಿದೆ. ಕಾನೂನು ಪಂಡಿತರ ಲೆಕ್ಕಾಚಾರದ ಪ್ರಕಾರ, ಮುಂದಿನ ಅಸೆಂಬ್ಲಿ ಚುನಾವಣೆ ದೀದಿಗೆ ಅಷ್ಟು ಸುಲಭವಲ್ಲ.

ಕಳೆದ ವಾರ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು
ಕಳೆದ ವಾರ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಶಾ ಭೇಟಿ ಅಲ್ಲಿ ದೊಡ್ಡ ಸುದ್ದಿಯಾಗಿತ್ತು. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರವಾದ ಹೋರಾಟ ನಡೆಸಿ ಕೇಸರಿ ಬಾವುಟ ಹಾರಿಸುವಂತೆ ಅಮಿತ್ ಕರೆ ನೀಡಿದ್ದರು. ಆದರೆ, ಇತರ ರಾಜ್ಯದಲ್ಲಿ ಕೇಸರಿ ಬಾವುಟ ಹಾರಿಸಿದಂತೆ ಪಶ್ಚಿಮ ಬಂಗಾಳದಲ್ಲಿ ಅದು ಅಷ್ಟು ಸುಲಭವಲ್ಲ. ಅದಕ್ಕೆ ಕಾರಣ ಇಲ್ಲದಿಲ್ಲ..

ಬುಡಕಟ್ಟು ಜನಾಂಗಕ್ಕೆ ಸೇರಿದ ನಿವಾಸವೊಂದರಲ್ಲಿ ಭೋಜನ ಸವಿದ ಅಮಿತ್ ಶಾ
ಬಂಕುರಾ ಜಿಲ್ಲೆಯಲ್ಲಿನ ಬುಡಕಟ್ಟು ಜನಾಂಗಕ್ಕೆ ಸೇರಿದ ನಿವಾಸವೊಂದರಲ್ಲಿ ಬಿಜಿಪಿ ರಾಜ್ಯ ಘಟಕದ ಮುಖ್ಯಸ್ಥರೊಂದಿಗೆ ಭೋಜನ ಸವಿದ ಅಮಿತ್ ಶಾ, ಆ ಕುಟುಂಬಕ್ಕೆ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ನೀಡುವುದಾಗಿ ಹೇಳಿದ್ದರು. ಅಮಿತ್ ಶಾ ಅವರದ್ದು ಇದೊಂದು ದೊಡ್ಡ ನಾಟಕ ಎಂದು ಮಮತಾ ಬ್ಯಾನರ್ಜಿ ಜರಿದರೂ, ಶಾ ಅವರ ಈ ನಡೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು.

ಪೌರತ್ವ ತಿದ್ದುಪಡೆ ಮಸೂದೆಯ ವಿಚಾರ
ಇಲ್ಲಿ ವಿಜಯ ಪತಾಕೆ ಹಾರಿಸುವುದು ಬಿಜೆಪಿಗೆ ಕಷ್ಟ ಎನ್ನುವುದಕ್ಕೆ ಇರುವ ಪ್ರಮುಖ ಕಾರಣ, ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿರುವುದು ಒಂದು ಕಡೆ. ಇನ್ನೊಂದೆಡೆ ಪೌರತ್ವ ತಿದ್ದುಪಡೆ ಮಸೂದೆಯ ವಿಚಾರದಲ್ಲಿ ಮೋದಿ ಸರಕಾರಕ್ಕೆ ಪೂರಕವಾದ ವಾತಾವರಣ ಇಲ್ಲದಿರುವುದು. ಇದೇ ಮಮತಾ ಬ್ಯಾನರ್ಜಿಗೆ ಟ್ರಂಪ್ ಕಾರ್ಡ್ ಆಗುವ ಸಾಧ್ಯತೆಯಿಲ್ಲದಿಲ್ಲ.

ಬಿಹಾರ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿ ಬಂಗಾಳದಲ್ಲಿ
ರಾಜ್ಯವು ಬಾಂಗ್ಲಾ ದೇಶದ ಜೊತೆಗೆ ಗಡಿಯನ್ನು ಹಂಚಿಕೊಳ್ಳುತ್ತಿರುವುದು ಕೂಡಾ ಬಿಜೆಪಿಗೆ ಮೈನಸ್ ಪಾಯಿಂಟ್ ಆಗಬಹುದು. ಸಿಎಎ ಮತ್ತು ಎನ್ ಆರ್ಸಿ ಮಸೂದೆ ಭಾರತ ಮತ್ತು ಬಾಂಗ್ಲಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೆ ಅಡ್ಡಿ ತರಬಹುದು. ಆದರೆ, ಬಿಹಾರ ಮೂಲದವರು ಸಾಕಷ್ಟು ಸಂಖ್ಯೆಯಲ್ಲಿ ಬಂಗಾಳದಲ್ಲಿ ಇರುವುದರಿಂದ ಬಿಜೆಪಿ ಈ ಮೂಲಕ ವೋಟ್ ಬ್ಯಾಂಕ್ ವೃದ್ದಿಸಿಕೊಳ್ಳಬಹುದು.

ಆರ್ ಎಸ್ ಎಸ್ ಬೆಂಬಲಿತ ರಾಜ್ಯಾಧ್ಯಕ್ಷ ದಿಲೀಪ್ ಘೋಷ್
ಬಿಜೆಪಿಗೆ ಮಮತಾ ಬ್ಯಾನರ್ಜಿಗೆ ಹೋಲಿಸಿದರೆ, ವರ್ಚಸ್ವೀ ಸ್ಥಳೀಯ ನಾಯಕರು ಇಲ್ಲದೇ ಇರುವುದು ಸದ್ಯಕ್ಕೆ ಬಿಜೆಪಿಗಿರುವ ದೊಡ್ಡ ತಲೆನೋವು. ಆರ್ ಎಸ್ ಎಸ್ ಬೆಂಬಲಿತ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ರಿಂದಾಗಿ, ಪಕ್ಷದ ಆಂತರಿಕೆ ಸಮಸ್ಯೆ ಕೂಡಾ ತುಸು ಹೆಚ್ಚಾಗಿದೆ. ಹಾಗಾಗಿ, ಅಲ್ಲಿ ಬಿಜೆಪಿಗೆ ಹಿಂದಿ ಭಾಷಿಗರೇ ನಿರ್ಣಾಯಕವಾಗಬಹುದು.












Click it and Unblock the Notifications