ಮೂರು ಕಿಲೋ ಗ್ರಾಂ ಚಿನ್ನದ ಇಟ್ಟಿಗೆ, 50 ಕೋಟಿ ಹಣ: ಇದು ಶಿಕ್ಷಕರ ನೇಮಕಾತಿ ಹಗರಣ!
ಕೋಲ್ಕತ್ತಾ, ಜುಲೈ 28: ಶಿಕ್ಷಕರ ನೇಮಕಾತಿ ಹಗರಣದ ಆರೋಪದ ಮೇಲೆ ಬಂಧಿತರಾಗಿರುವ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಗುರುವಾರ ಜಾರಿ ನಿರ್ದೇಶನಾಲಯಕ್ಕೆ (ಇಡಿ) ತಮ್ಮ ಎರಡನೇ ಫ್ಲಾಟ್ನಿಂದ ವಶಪಡಿಸಿಕೊಂಡ ಹಣ ಪಾರ್ಥ ಚಟರ್ಜಿಗೆ ಸೇರಿದ್ದು ಎಂದು ಹೇಳಿಕೆ ನೀಡಿದ್ದಾರೆ.
ಆಕೆಯ ಮೊದಲ ಫ್ಲಾಟ್ನಿಂದ 21 ಕೋಟಿ ರೂ.ಗಳನ್ನು ವಶಪಡಿಸಿಕೊಂಡ ದಿನಗಳ ನಂತರ ತನಿಖಾ ಸಂಸ್ಥೆಯು ಆಕೆಯ ಎರಡನೇ ಅಪಾರ್ಟ್ಮೆಂಟ್ನಿಂದ 28 ಕೋಟಿ ರೂಪಾಯಿ ನಗದು ಮತ್ತು 5 ಕೆಜಿಗೂ ಹೆಚ್ಚು ಚಿನ್ನವನ್ನು ವಶಪಡಿಸಿಕೊಂಡ ದಿನ ಅರ್ಪಿತಾ ಮುಖರ್ಜಿ ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಫ್ಲಾಟ್ನ ಶೌಚಾಲಯದಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿತ್ತು ಎಣಿಕೆ ಮಾಡಲು ಇ.ಡಿ ಅಧಿಕಾರಿಗಳು 10 ಗಂಟೆ ಸಮಯ ತೆಗೆದುಕೊಂಡಿದ್ದಾರೆ.
ವಶಪಡಿಸಿಕೊಂಡಿರುವ ಹಣ, ಸಚಿವ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಮತ್ತು ಅವರ ಹಣವನ್ನು ಇಡಲು ತನ್ನ ಫ್ಲಾಟ್ ಬಳಸಿಕೊಳ್ಳುತ್ತಿದ್ದರು ಎಂದು ಅರ್ಪಿತಾ ಒಪ್ಪಿಕೊಂಡಿದ್ದಾರೆ ಎಂದು ಇಡಿ ಮೂಲಗಳು ತಿಳಿಸಿವೆ. ಆ ಫ್ಲಾಟ್ನಲ್ಲಿ ಇಷ್ಟು ದೊಡ್ಡ ಮೊತ್ತವಿದೆ ಎಂದು ತನಗೆ ತಿಳಿದಿರಲಿಲ್ಲ ಮತ್ತು ಪಾರ್ಥ ಚಟರ್ಜಿ ಫ್ಲಾಟ್ಗೆ ಭೇಟಿ ನೀಡುತ್ತಿದ್ದರು, ಅವರಿಗೆ ಮಾತ್ರ ಅದರ ಬಗ್ಗೆ ತಿಳಿದಿದೆ ಎಂದು ಅರ್ಪಿತಾ ಹೇಳಿದರು.

1 ಕೆ.ಜಿ ತೂಕದ 3 ಚಿನ್ನದ ಇಟ್ಟಿಗೆಗಳು ಪತ್ತೆ
ಈ ಮೊದಲು ವಿಚಾರಣೆ ವೇಳೆ ಎರಡನೇ ಫ್ಲಾಟ್ನಲ್ಲಿ ನಗದು ಇರುವ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಆಕೆಯ ಆಸ್ತಿಯ ಬಗ್ಗೆ ವಿವರ ಪಡೆದ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಎರಡನೇ ಫ್ಲಾಟ್ನಲ್ಲಿ ಶೋಧಕಾರ್ಯ ನಡೆಸಿದಾಗ ಅಪಾರ ಪ್ರಮಾಣದ ಹಣ, ಚಿನ್ನ ಇರುವುದು ಪತ್ತೆಯಾಗಿದೆ.
ದಾಳಿ ವೇಳೆ ಕೋಟಿಗಟ್ಟಲೆ ನಗದು, 5 ಕೆ.ಜಿ. ಚಿನ್ನ ಪತ್ತೆಯಾಗಿದೆ. ಒಟ್ಟು 27.9 ಕೋಟಿ ರುಪಾಯಿ ನಗದು ಪತ್ತೆಯಾಗಿದೆ. 4.31 ಕೋಟಿ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ 1 ಕೆ.ಜಿ ತೂಕದ 3 ಇಟ್ಟಿಗೆಗಳು, ಚಿನ್ನದ ಬಳೆಗಳು, ಚಿನ್ನದ ಪೆನ್ ಕೂಡ ಸೇರಿದೆ.

ಹಲವು ಸ್ಥಳಗಳಲ್ಲಿ ಇ.ಡಿ ಶೋಧ
ಇ.ಡಿ ಸಂಸ್ಥೆ ಜುಲೈ 27 ರಂದು ಉತ್ತರ 24 ಪರಗಣದ ಬೆಲ್ಗೋರಿಯಾ ಕ್ಲಬ್ ಟೌನ್ನಲ್ಲಿರುವ ಪಾರ್ಥ ಮುಖರ್ಜಿ ಅವರ ತಾಯಿಗೆ ಸೇರಿದ ಫ್ಲ್ಯಾಟ್ನ ಮೇಲೆ ದಾಳಿ ನಡೆಸಿತು ಮತ್ತು ಇತರ ಮೂರು ಸ್ಥಳಗಳಲ್ಲಿ ಶೋಧಕಾರ್ಯ ನಡೆಸಿದೆ.
"ನಾವು ಅರ್ಪಿತಾ ಮುಖರ್ಜಿ ಅವರಿಗೆ ಸೇರಿದ ಎರಡು ಫ್ಲಾಟ್ಗಳು, ಬೆಲ್ಗೋರಿಯಾದಲ್ಲಿ ಮತ್ತು ರಾಜ್ದಂಗಾದಲ್ಲಿದ್ದು ಅಲ್ಲಿ ನಮ್ಮ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ" ಎಂದು ಇ.ಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಿಚಾರಣೆಗ ಪಾರ್ಥ ಚಟರ್ಜಿ ಅಸಹಕಾರ
ವಿಚಾರಣೆ ವೇಳೆ ಅರ್ಪಿತಾ ಮುಖರ್ಜಿ ಸಹಕಾರ ನೀಡುತ್ತಿದ್ದಾರೆ. ಆದರೆ ಸಚಿವ ಪಾರ್ಥ ಚಟರ್ಜಿ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಇ.ಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ನಾವು ಪಾರ್ಥ ಚಟರ್ಜಿಯವರನ್ನು ಗ್ರಿಲ್ಲಿಂಗ್ ಮಾಡುವುದು ತುಂಬಾ ಕಷ್ಟಕರವಾಗಿದೆ. ಅವರು ನಮ್ಮ ಅಧಿಕಾರಿಗಳೊಂದಿಗೆ ಸಹಕಾರ ನೀಡುತ್ತಿಲ್ಲ. ಅವರು ಹಠಮಾರಿಯಾಗಿದ್ದಾರೆ ವಿಚಾರಣೆಗೆ ಅಸಹಕಾರ ವ್ಯಕ್ತಪಡಿಸುತ್ತಾರೆ. ನಮ್ಮ ಯಾವ ಪ್ರಶ್ನೆಗಳಿಗೂ ಅವರು ಸರಿಯಾದ ಉತ್ತರ ನೀಡುತ್ತಿಲ್ಲ" ಎಂದು ಅವರು ಹೇಳಿದ್ದಾರೆ.

ಸಚಿವನ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ
ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಜಾರಿ ನಿರ್ದೇಶನಾಲಯದ ವಶದಲ್ಲಿದ್ದಾರೆ. ಅಕ್ರಮ ಹೊರಗೆ ಬರುತ್ತಿದ್ದಂತೆ ಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೇಡಿಕೆಗೆ ಉತ್ತರ ನೀಡಿರುವ ಸಚಿವ ಪಾರ್ಥ ಚಟರ್ಜಿ ನಾನು ಯಾವುದೇ ತಪ್ಪು ಮಾಡಿಲ್ಲ, ರಾಜಿನಾಮೆ ನೀಡಲ್ಲ ಎಂದು ಉತ್ತರ ನೀಡಿದ್ದಾರೆ.












Click it and Unblock the Notifications