ಮೋದಿಗೆ ಮಾತ್ರ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ; ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಜನವರಿ 28: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಈ ಬಾರಿ ಏಪ್ರಿಲ್ ನಲ್ಲಿ ನಡೆಯುವ ಸಾಧ್ಯತೆಯಿದೆ. ಈಗಾಗಲೇ ರಾಜ್ಯದಲ್ಲಿ ಚುನಾವಣೆಯ ಪ್ರಚಾರ ಕಾರ್ಯವೂ ಜೋರಾಗಿ ಸಾಗಿದೆ. ಬಿಜೆಪಿ, ತೃಣಮೂಲ ಕಾಂಗ್ರೆಸ್ ನಡುವಿನ ಸಮರ ತಾರಕಕ್ಕೇರಿದ್ದು, ಈಚೆಗೆ ನಡೆದ ಕೆಲವು ಸಂಗತಿಗಳು ಈ ಸಮರದ ಬೆಂಕಿಗೆ ತುಪ್ಪ ಸುರಿದಂತೆ ಮಾಡಿವೆ.
ಪಶ್ಚಿಮ ಬಂಗಾಳ ಭೇಟಿ ಸಂದರ್ಭ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ, ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದು, ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದಂದು "ಜೈಶ್ರೀರಾಮ್" ಘೋಷಣೆ, ಈ ಸಂಗತಿಗಳೆಲ್ಲವೂ ಬಿಜೆಪಿ- ತೃಣಮೂಲ ನಡುವಿನ ಕಿಚ್ಚನ್ನು ಹೆಚ್ಚಿಸಿವೆ. ಈ ಬಗ್ಗೆ "ಇಂಡಿಯಾ ಟುಡೇ" ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಸಂದರ್ಶನ ನಡೆಸಿದೆ. ಸಂದರ್ಶನದಲ್ಲಿ ರೈತರ ಪ್ರತಿಭಟನೆ, ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರ, ಪಶ್ಚಿಮ ಬಂಗಾಳ ಚುನಾವಣೆ ಈ ಎಲ್ಲದರ ಕುರಿತೂ ಮಾತನಾಡಿದ್ದಾರೆ. ಮುಂದೆ ಓದಿ...
"ಇದು ಕೇಂದ್ರ ಸರ್ಕಾರದ ಸೋಲು ಎಂದೂ ಹೇಳಬಹುದು"
1. ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಮೆರವಣಿಗೆ ಸಂದರ್ಭ ನಡೆದ ಹಿಂಸಾಚಾರ ಪ್ರತಿಭಟನೆ ಮೌಲ್ಯವನ್ನು ತಗ್ಗಿಸಿತೇ? ರೈತರು ಈಗ ಹಿಂದೆ ಸರಿಯಬೇಕೆ?
ಈ ಮಾತನ್ನು ಒಪ್ಪುವುದಿಲ್ಲ. ಇದೊಂದು ಪ್ರಸಿದ್ಧ ರೈತ ಚಳವಳಿ. ಹಿಂಸಾಚಾರ ಘಟನೆ ಕೇಂದ್ರ ಸರ್ಕಾರದ ಸೋಲು ಎಂದೂ ಹೇಳಬಹುದಲ್ಲವೇ? ಚಳವಳಿಯನ್ನು ಸರಿಯಾಗಿ ನಿರ್ವಹಿಸಲು ಅವರಿಂದ ಆಗಲಿಲ್ಲ ಎಂದೂ ಹೇಳಬಹುದಲ್ಲವೇ? ಸರ್ಕಾರ ಈ ವಿಷಯದಲ್ಲಿ ಹೆಚ್ಚು ಜಾಗರೂಕವಾಗಿರಬೇಕಿತ್ತು ಎಂಬುದು ನನ್ನ ಅಭಿಪ್ರಾಯ.
ಮಮತಾ ಭಾಷಣದ ಮಧ್ಯೆ ಜೈ ಶ್ರೀರಾಮ ಘೋಷಣೆ; ಕೋಪದಲ್ಲೇ ಭಾಷಣ ಆರಂಭಿಸಿದ ದೀದಿ
"ನನಗೂ ಚೆನ್ನಾಗಿ ಸಂಸತ್ತಿನ ಬಗ್ಗೆ ತಿಳಿದಿದೆ"
2. ತಮಗೆ ಬಹುಬೆಂಬಲವಿದೆ. ಕೃಷಿ ಕಾಯ್ದೆಗಳಿಗೆ ಸಂಸತ್ತಿನಲ್ಲಿ ಬಹುಮತ ದೊರೆತಿದೆ. ಆದರೆ ವಿರೋಧ ಪಕ್ಷಗಳು ಸುಮ್ಮನೆ ಸಮಸ್ಯೆ ಸೃಷ್ಟಿಸುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಇದು ನಿಜವೇ?
ಬಹುಬೆಂಬಲವಿದೆ ಎಂದ ಮಾತ್ರಕ್ಕೆ ಜನರನ್ನು ಕೊಲ್ಲಬಹುದು ಎಂದರ್ಥವಲ್ಲ. ಕೃಷಿ ಕಾಯ್ದೆಗಳನ್ನು ಬಹಳ ತರಾತುರಿಯಲ್ಲಿ ತರಲಾಯಿತು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಧ್ವನಿ ಮತದ ಮುಖಾಂತರ ಕಾಯ್ದೆಗಳನ್ನು ಜಾರಿಗೆ ತರಲಾಯಿತು. ಎಲ್ಲರಿಗಿಂತ ಹೆಚ್ಚಾಗಿ ನನಗೆ ಸಂಸತ್ತು ಗೊತ್ತಿದೆ. ಈ ಕಾಯ್ದೆಗಳನ್ನು ಏಕೆ ಅವರು ಹಿಂತೆಗೆದುಕೊಳ್ಳುತ್ತಿಲ್ಲ? ಇದರಿಂದ ಏನು ತೊಂದರೆ? ಸರ್ಕಾರಕ್ಕೆ ಈಗಲೂ ನಾನು ಈ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಮನವಿ ಮಾಡುತ್ತಿದ್ದೇನೆ.
"ನನ್ನ ಸಹೋದರ ಅಮಿತ್ ಶಾ ಬಳಿ 51 ಲಕ್ಷ ವಾಟ್ಸ್ ಆಪ್ ಗ್ರೂಪ್ ಇವೆಯಂತೆ"
3. ಸರ್ಕಾರ ಈ ಕಾಯ್ದೆಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ವಿರೋಧಪಕ್ಷಗಳು ರೈತರ ಪ್ರತಿಭಟನೆಯನ್ನು ಬಳಸಿಕೊಳ್ಳುತ್ತಿವೆಯೇ?
ರೈತರ ಈ ಬೃಹತ್ ಪ್ರತಿಭಟನೆಗೆ ನಾಯಕರೇ ಇಲ್ಲ. ರೈತರೇ ತಮಗಾಗಿ ಹೋರಾಟಕ್ಕಿಳಿದಿದ್ದಾರೆ. ಇದೇ ಹೊಸ ಸಂಗತಿ. ನಾವು ಹೊರಗಿನಿಂದ ಅವರಿಗೆ ಬೆಂಬಲ ನೀಡುತ್ತಿದ್ದೇವೆ ಅಷ್ಟೆ. ನನ್ನ ಸಹೋದರರಾದ ಅಮಿತ್ ಶಾ ಅವರು ಹೇಳಿದ್ದಾರೆ, ತಮ್ಮ ಬಳಿ 51 ಲಕ್ಷ ವಾಟ್ಸ್ ಆಪ್ ಗ್ರೂಪ್ ಗಳು ಇವೆಯೆಂದು. ರೈತರ ಪ್ರತಿಭಟನೆಯನ್ನು ಅಪಖ್ಯಾತಿಗೊಳಿಸುವ ಯಾವುದೇ ಸಂದೇಶವನ್ನು ಅವರು ಹರಡಬಹುದು. ಸರ್ಕಾರ ಮಾಧ್ಯಮಗಳನ್ನೂ ಕೊಂಡುಕೊಂಡಿದೆ.
ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ: ದೀದಿ
ಮೋದಿ ಸರ್ವಪಕ್ಷ ಸಭೆ ಕರೆದು ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಮೋದಿ ಬರೀ ಬಿಜೆಪಿಗೆ ನಾಯಕ ಅಲ್ಲ, ಇಡೀ ದೇಶಕ್ಕೇ ನಾಯಕ. ಅವರಿಗೆ ಮಾತ್ರ ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದೆ.
"ನಾನೂ 26 ಉಪವಾಸ ಸತ್ಯಾಗ್ರಹ ಮಾಡಿದ್ದೇನೆ"
4. ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಖಂಡಿಸುತ್ತೀರಾ?
ನಾನು ಹಿಂಸಾಚಾರಕ್ಕೆ ಬೆಂಬಲ ನೀಡುವುದಿಲ್ಲ. ಶಾಂತಿಯುತ ಪ್ರತಿಭಟನೆಗೆ ನಮ್ಮ ಬೆಂಬಲ. ನಾನು 26 ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದೇನೆ. ಆದರೆ ನಾವೆಲ್ಲೂ ಧ್ವಜ ಹಾರಿಸಿಲ್ಲ. ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದವ ಅಮಿತ್ ಶಾ ಜೊತೆಗಿದ್ದು, ಬಿಜೆಪಿಯವನಾಗಿದ್ದಾನೆ ಎಂಬುದು ತಿಳಿದಿದೆ.
"ರಾಮನ ಆರಾಧ್ಯದೈವವನ್ನೇ ನಾನು ಆರಾಧಿಸುವುದು"
5. ನೇತಾಜಿ ಜನ್ಮದಿನದಂದು ಕಾರ್ಯಕ್ರಮದಲ್ಲಿ "ಜೈಶ್ರೀರಾಮ್" ಘೋಷಣೆ ಸಂಗತಿ ಬಗ್ಗೆ ಏನು ಹೇಳುತ್ತೀರಿ?
ಕೇಂದ್ರ ಸರ್ಕಾರ ಈ ಕಾರ್ಯಕ್ರಮದ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಯಾವುದೇ ಸಮನ್ವಯ ಸಾಧಿಸಿಲ್ಲ. ನಮ್ಮನ್ನು ಒಂದು ಮಾತೂ ಕೇಳಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ಘನತೆ ಇರಬೇಕು. ಆದರೆ ಅಲ್ಲಿ ರಾಜಕೀಯ ಘೋಷಣೆಗಳನ್ನು ಕೂಗಲಾಯಿತು. ನಾನು ಹೋದ ಕಾರ್ಯಕ್ರಮಗಳಲ್ಲೆಲ್ಲಾ ಬಿಜೆಪಿ ಜನರನ್ನು ಕಳುಹಿಸುತ್ತಾರೆ. ಅವರು ಅವರ ಪಕ್ಷದ ಕಾರ್ಯಕ್ರಮದಲ್ಲಿ ಘೋಷಣೆಗಳನ್ನು ಕೂಗಿಕೊಳ್ಳಲಿ. ಆದರೆ ಇದು ನೇತಾಜಿ ಕಾರ್ಯಕ್ರಮವಾಗಿತ್ತು. ನಾನು ಕಾರ್ಯಕ್ರಮ ಮುಗಿಯುವವರೆಗೂ ಇದ್ದೆ. ಪ್ರಧಾನಿಯವರನ್ನು ಈ ಬಗ್ಗೆ ಒಂದು ಮಾತೂ ಕೇಳಲಿಲ್ಲ. ರಾಮ ಯಾರನ್ನು ಆರಾಧಿಸುವುದು? ದುರ್ಗೆಯನ್ನು. ನಾನು ದುರ್ಗೆಯನ್ನು ಆರಾಧಿಸುತ್ತೇನೆ. ನಾನು ಕೂಡ ಹಿಂದು. ಹಿಂದೂತ್ವದ ಬಗ್ಗೆ ಚರ್ಚೆಗೆ ನಾನು ಸದಾ ಸಿದ್ಧ.
"ಬಿಜೆಪಿ ಕಡೆಯಿಂದ ಯಾವುದೇ ಹಿಂಸಾಚಾರ ನಡೆಯದೇ ಇರಲಿ"
6. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಗ್ಗೆ ಏನು ಹೇಳುತ್ತೀರಾ?
ಚುನಾವಣೆ ಮುಕ್ತವಾಗಿ, ಶಾಂತಿಯುತವಾಗಿ ನಡೆಯಬೇಕು. ಯಾವುದೇ ಹಿಂಸಾಚಾರವನ್ನು ಬಿಜೆಪಿ ತರಬಾರದು. ಎಲ್ಲಾ ರಾಜ್ಯಪಾಲರ ಬಗ್ಗೆ ನನಗೆ ಗೌರರವಿದೆ. ಅವರ ಮೇಲೆ ನಾನು ಹೊಣೆ ಹೊರಿಸುವುದಿಲ್ಲ. ರಾಜ್ಯಪಾಲ ನಾಮನಿರ್ದೇಶನದಿಂದ ಬಂದ ವ್ಯಕ್ತಿ. ಅವರು ರಾಜಕೀಯದವರಲ್ಲ. ಆದರೆ ಮುಖ್ಯಮಂತ್ರಿ ಚುನಾಯಿತ ವ್ಯಕ್ತಿ. ಇಬ್ಬರ ಮಧ್ಯೆಯೂ ಸಮನ್ವಯತೆ ಬಹಳ ಮುಖ್ಯ.