ಕೋಲಾರ; ವಿಸ್ಟ್ರಾನ್ನಲ್ಲಿ ಕೆಲಸ ಪಡೆಯಲು ಹೊಸ ಷರತ್ತು!
ಕೋಲಾರ, ಜನವರಿ 18: ಕೋಲಾರದ ನರಸಾಪುರದಲ್ಲಿರುವ ಐಫೋನ್ ತಯಾರಿಕಾ ಘಟಕ ವಿಸ್ಟ್ರಾನ್ ಪುನಃ ಕಾರ್ಯಾರಂಭ ಮಾಡಿದೆ. ಡಿಸೆಂಬರ್ 12ರಂದು ಘಟಕದಲ್ಲಿ ಕಾರ್ಮಿಕರು ನಡೆಸಿದ ಗಲಭೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
"ವಿಸ್ಟ್ರಾನ್ ಕಂಪನಿಯ ಗಲಭೆ ಪ್ರಕರಣವನ್ನು ಶೀಘ್ರವೇ ಇತ್ಯರ್ಥ ಪಡಿಸಿ, ಕಂಪನಿಯನ್ನು ಪುನಃ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು" ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದರು.
ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ವಿಸ್ಟ್ರಾನ್ ಕಂಪನಿಗೆ ಪುನಃ ಕಾರ್ಯಾರಂಭ ಮಾಡಿದೆ. ಕಂಪನಿಯಲ್ಲಿ ಕೆಲಸಕ್ಕೆ ಸೇರಲು ಯುವಕ/ ಯವತಿಯರ ನೂಕು ನುಗ್ಗಲು ಉಂಟಾಗಿದೆ.

ಆದರೆ, ಕಂಪನಿಯ ಕೆಲಸಕ್ಕೆ ನಿಯೋಜನೆಗೊಳ್ಳಲು ಪೋಲೀಸ್ ಠಾಣೆಯಿಂದ ನಿರಪೇಕ್ಷಣಾ ಪತ್ರವನ್ನು ತರಬೇಕಿದೆ. ನಿರಪೇಕ್ಷಣಾ ಪತ್ರ ಪಡೆಯಲು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಯುವಕ/ ಯುವತಿಯರು ಜಮಾವಣೆಗೊಂಡಿದ್ದಾರೆ.

ಪೊಲೀಸರು ಪ್ರತಿಯೊಬ್ಬರ ಆಧಾರ್, ಪಾನ್ ಕಾರ್ಡ್ ಹಾಗೂ ಹಿನ್ನೆಲೆಯನ್ನು ತನಿಖೆ ನಡೆಸಿದ ನಂತರ ನಿರಪೇಕ್ಷಣಾ ಪತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಗ್ರಾಮಾಂತರ ಠಾಣೆಯ ಪಿಎಸ್ಐ ಕಿರಣ್ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಘಟಕದಲ್ಲಿ ಏನಾಗಿತ್ತು?; ವೇತನದ ವಿಚಾರದಲ್ಲಿ ವಿಸ್ಟ್ರಾನ್ ಘಟಕದ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವೆ ಜಟಾಪಟಿ ನಡೆದಿತ್ತು. ಡಿಸೆಂಬರ್ 12ರಂದು ಕಾರ್ಮಿಕರು ಘಟಕದಲ್ಲಿ ದಾಂಧಲೆ ಮಾಡಿದ್ದರು. ಕಾರಿಗೆ ಬೆಂಕಿ ಹಚ್ಚಿದ್ದರು, ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ತನಿಖೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದಾರೆ. ಒಂದು ತಿಂಗಳ ಬಳಿಕ ಘಟಕ ಪುನಃ ಕಾರ್ಯಾರಂಭ ಮಾಡಿದೆ.
ತೈವಾನ್ ಮೂಲಕ ವಿಸ್ಟ್ರಾನ್ ಕಂಪನಿ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಿದೆ. ಕೋಲಾರ ಸಮೀಪದ ನಸರಾಪುರದಲ್ಲಿ ಐಫೋನ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ನಿರ್ಮಾಣ ಮಾಡಿದ್ದು, ಸುಮಾರು 3 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.












Click it and Unblock the Notifications