ವರ್ತೂರು ಪ್ರಕಾಶ್ ಕಿಡ್ನಾಪ್: ಮಹತ್ವದ ಮಾಹಿತಿ ನೀಡಿದ ಕೋಲಾರ ಎಸ್ಪಿ
ಕೋಲಾರ, ಡಿ 4: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣ ಹೊಸಹೊಸ ತಿರುವು ಪಡೆಯುತ್ತಿದ್ದು, ಕೋಲಾರದ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಕೋಲಾರ ಪೊಲೀಸ್ ಕಚೇರಿಗೆ ಭೇಟಿ ನೀಡಿದ್ದ ವರ್ತೂರು ಪ್ರಕಾಶ್, "ತನಿಖೆಯನ್ನು ಆದ್ಯತೆಯಿಂದ ಕೈಗೆತ್ತಿಗೊಂಡು ಪೂರ್ಣಗೊಳಿಸುವಂತೆ ಮನವಿ ಮಾಡಿದ್ದೇನೆ"ಎಂದು ಹೇಳಿದ್ದಾರೆ. ಅಪಹರಣವನ್ನು ರಾಜ್ಯದವರು ಮಾಡಿದವರೋ ಅಥವಾ ಮಹಾರಾಷ್ಟ್ರದವರು ಮಾಡಿದರೋ ಎನ್ನುವುದರ ಬಗ್ಗೆ ಕೋಲಾರ ಎಸ್ಪಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಫಾರಂ ಮತ್ತು ಡೈರಿ ಉದ್ಯಮವನ್ನು ನಡೆಸುತ್ತಿದ್ದ ವರ್ತೂರು ಪ್ರಕಾಶ್ ಅವರನ್ನು ಮಹಾರಾಷ್ಟ್ರ ಮೂಲದವರು ಬಾಕಿ ಹಣಕ್ಕಾಗಿ ಕಿಡ್ನಾಪ್ ಮಾಡಿರುವ ಸಾಧ್ಯತೆಯ ಬಗ್ಗೆ ವರದಿಯಾಗಿತ್ತು. ಪೊಲೀಸರು ಈ ಆಯಾಮದಲ್ಲೂ ತನಿಖೆ ಆರಂಭಿಸಿದ್ದರು.
ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿಯ ಫಾರಂನಿಂದ ಹಸುಗಳನ್ನು ತರಿಸಲಾಗಿತ್ತು. ಆ ಹಸುಗಳಿಗೆ ನೀಡಬೇಕಿದ್ದ ಸುಮಾರು 30 ಕೋಟಿ ರೂಪಾಯಿ ಹಣವನ್ನು ವರ್ತೂರು ಪ್ರಕಾಶ್ ಬಾಕಿ ಉಳಿಸಿಕೊಂಡಿದ್ದರು. ಇದು, ಅಪಹರಣಕ್ಕೆ ಪ್ರಮುಖ ಕಾರಣ ಎಂದೆಲ್ಲಾ ಸುದ್ದಿಯಾಗಿತ್ತು.

ಕೋಲಾರ ಪೊಲೀಸ್ ಮುಖ್ಯಸ್ಥ ಕಾರ್ತಿಕ್ ರೆಡ್ಡಿ
ಮಾಧ್ಯಮದವರೊಂದಿಗೆ ಗುರುವಾರ (ಡಿ 3) ಮಾತನಾಡುತ್ತಿದ್ದ ಕೋಲಾರ ಪೊಲೀಸ್ ಮುಖ್ಯಸ್ಥ ಕಾರ್ತಿಕ್ ರೆಡ್ಡಿ, "ವರ್ತೂರು ಪ್ರಕಾಶ್ ಅವರ ಅಪಹರಣ ತನಿಖೆಗಾಗಿ ತಂಡ ರಚಿಸಲಾಗಿದ್ದು, ಡಿವೈಎಸ್ಪಿ, ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್, 4 ಮಂದಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ"ಎನ್ನುವ ಮಾಹಿತಿಯನ್ನು ನೀಡಿದ್ದರು.

ವರ್ತೂರು ಪ್ರಕಾಶ್ ಅಪಹರಣ
ಮಹಾರಾಷ್ಟ್ರ ಮೂಲದವರಿಂದ ವರ್ತೂರು ಪ್ರಕಾಶ್ ಅಪಹರಣ ನಡೆದಿರುವ ಸಾಧ್ಯತೆಯ ಬಗ್ಗೆ ಮಾತನಾಡಿದ ಎಸ್ಪಿ ರೆಡ್ಡಿ, "ಇದು ಹೊರಗಿನವರ ಅಥವಾ ಮಹಾರಾಷ್ಟ್ರದವರ ಕೃತ್ಯವಲ್ಲ. ಅಪಹರಣದ ಹಿಂದೆ, ಕರ್ನಾಟಕ ಮೂಲದವರೇ ಇದ್ದಾರೆ"ಎಂದು ಹೇಳುವ ಮೂಲಕ, ಮಹಾರಾಷ್ಟ್ರ, ಡೈರಿ ಫಾರಂ ಮುಂತಾದ ಆಯಾಮಗಳಿಂದ ಕಿಡ್ನಾಪ್ ನಡೆದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಅಪಹರಣಕಾರರು ಕನ್ನಡ ಮತ್ತು ತಮಿಳು ಭಾಷೆಯನ್ನು ಮಾತನಾಡುತ್ತಿದ್ದರು
ವರ್ತೂರು ಪ್ರಕಾಶ್ ಕೂಡಾ ಪೊಲೀಸರಿಗೆ ದೂರು ನೀಡಿದ ವೇಳೆ, ಅಪಹರಣಕಾರರು ಕನ್ನಡ ಮತ್ತು ತಮಿಳು ಭಾಷೆಯನ್ನು ಮಾತನಾಡುತ್ತಿದ್ದರು ಎಂದು ಹೇಳಿದ್ದರು. ಹಾಗಾಗಿ, ಈ ಅಪಹರಣದ ಹಿಂದೆ ಲೋಕಲ್ ನವರ ಅಥವಾ ಕುಟುಂಬದವರಾ ಕೈವಾಡವಿದೆಯೇ ಎನ್ನುವ ಅನುಮಾನ ಬಲವಾಗುತ್ತಾ ಸಾಗುತ್ತಿದೆ.

ಮಹಿಳೆಗೆ ಇಬ್ಬರು ಮಕ್ಕಳಿದ್ದು, ಅದರಲ್ಲಿ ಮೊದಲನೇ ಮಗ ಅಪಹರಿಸಿರುವ ಸಾಧ್ಯತೆ
ಕೆಲವು ವರ್ಷಗಳ ಹಿಂದೆ ವರ್ತೂರು ಪ್ರಕಾಶ್ ಟೇಕಲ್ ಬಳಿ ಫಾರ್ಮ್ ಹೌಸ್ ಖರೀದಿಸಿದ್ದರು. ಇದರ ಉಸ್ತುವಾರಿಯನ್ನು ನೋಡಿಕೊಳ್ಳಲು ಒಬ್ಬರು ಮಹಿಳೆಯನ್ನು ಇವರು ನೇಮಿಸಿದ್ದರು. ತದನಂತರ, ಈಕೆಯನ್ನು ವರ್ತೂರು ಪ್ರಕಾಶ್ ಮದುವೆಯಾಗಿದ್ದಾರೆ. ಈ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಅದರಲ್ಲಿ ಮೊದಲನೇ ಮಗ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿರುವ ಸಾಧ್ಯತೆಯಿದೆ ಎಂದೂ ಸುದ್ದಿಯಾಗಿತ್ತು.












Click it and Unblock the Notifications