ಸಚಿವ ಸ್ಥಾನ ನೀಡುವ ಭರವಸೆ ಸಿಕ್ಕಿದೆ : ಎಚ್.ನಾಗೇಶ್
ಕೋಲಾರ, ಜೂನ್ 09 : 'ನಮ್ಮ ಕ್ಷೇತ್ರದ ಅಭಿವೃದ್ಧಿ ಉದ್ದೇಶದಿಂದ ನಾನು ಕೂಡಾ ಕುಮಾರಸ್ವಾಮಿ ಅವರ ಕೈಯನ್ನು ಬಲಡಿಸುತ್ತಿರುವೆ. ನನಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ' ಎಂದು ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಹೇಳಿದರು.
ಭಾನುವಾರ ಶ್ರೀನಿವಾಸಪುರದಲ್ಲಿ ಮಾತನಾಡಿದ ಎಚ್.ನಾಗೇಶ್ ಅವರು, 'ಸಚಿವ ಸ್ಥಾನದ ಭರವಸೆ ಸಿಕ್ಕಿದೆ. ಬುಧವಾರದ ತನಕ ಕಾಯುವಂತೆ ತಿಳಿಸಿದ್ದಾರೆ' ಎಂದು ಹೇಳಿದರು.
'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೋಲಾರ ಜಿಲ್ಲೆಗೆ ಕರೆತಂದು ಗ್ರಾಮ ವಾಸ್ತವ್ಯ ಮಾಡಿಸುತ್ತೇನೆ. ಅವರು ಕಳೆದ ಒಂದು ವರ್ಷದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ' ಎಂದರು.

'ಕುಮಾರಸ್ವಾಮಿ ಅವರ ಕಾರ್ಯವೈಖರಿ ನೋಡಿ ಸಮ್ಮಿಶ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿರುವೆ. ಮುಂದಿನ ನಾಲ್ಕು ವರ್ಷಗಳ ಕಾಲ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸುತ್ತಾರೆ' ಎಂದು ನಾಗೇಶ್ ವಿಶ್ವಾಸ ವ್ಯಕ್ತಪಸಿದರು.
'ಉತ್ತಮವಾದ ಆಡಳಿತ ನೀಡಲು ಕುಮಾರಸ್ವಾಮಿ ಅವರಿಗೆ ನೆಮ್ಮದಿ ಬೇಕು. ಶಾಸಕರು, ಸಚಿವರು ಈ ನಿಟ್ಟಿನಲ್ಲಿ ಸಹಕಾರ ನೀಡಬೇಕಿದೆ. ನಮ್ಮ ಕ್ಷೇತ್ರದ ಅಭಿವೃದ್ಧಿ ಉದ್ದೇಶದಿಂದ ನಾನು ಕೂಡಾ ಅವರ ಕೈ ಬಲಪಡಿಸಿದ್ದೇನೆ' ಎಂದು ಹೇಳಿದರು.
ಜೂನ್ 12ರ ಬುಧವಾರ 11.30ಕ್ಕೆ ಸಂಪುಟ ವಿಸ್ತರಣೆ ನಡೆಯಲಿದೆ. ಯಾವ ಶಾಸಕರು ಸಂಪುಟ ಸೇರಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಖಾಲಿ ಇವೆ.












Click it and Unblock the Notifications