ನಾಮಪತ್ರ ಹಿಂಪಡೆದ ಕೊತ್ತನೂರು, ನಂದಿನಿ; ಮುಳಬಾಗಿಲಲ್ಲಿ ಕಾಂಗ್ರೆಸಿಗಿಲ್ಲ ಅಭ್ಯರ್ಥಿ
ಬೆಂಗಳೂರು, ಏಪ್ರಿಲ್ 27: ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಕೊತ್ತನೂರು ಮಂಜುನಾಥ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿತ್ತು. ಅವರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್ ರದ್ದುಗೊಳಿಸಿತ್ತು, ಮತ್ತು ಶಾಸಕತ್ವವನ್ನೂ ಅಸಿಂಧುಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಮುಳಬಾಗಿಲು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲದ ಕಾರಣ ಅವರಿಂದು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.
ನಕಲಿ ಜಾತಿ ಪ್ರಮಾಣಪತ್ರ: ಕೊತ್ತನೂರು ಮಂಜುನಾಥ್ ನಾಮಪತ್ರ ತಿರಸ್ಕೃತ
ಇದೇ ಕ್ಷೇತ್ರದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಕೆ.ಎಚ್.ಮುನಿಯಪ್ಪ ಪುತ್ರಿ ಎಂ. ನಂದಿನಿ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಕೊತ್ತನೂರು ಮಂಜುನಾಥ್ ನಾಮಪತ್ರ ತಿರಸ್ಕೃತವಾಗಿರುವುದರಿಂದ ನಂದಿನಿ ಇಲ್ಲಿ ಅಭ್ಯರ್ಥಿಯಾಗುತ್ತಾರೆ ಎಂದುಕೊಳ್ಳಲಾಗಿತ್ತು.
ಆದರೆ ಎಂ. ನಂದಿನಿ ಬೆಂಬಲಿಸಲು ಮಂಜುನಾಥ್ ನಿರಾಕರಿಸಿದ್ದರಿಂದ ಅವರೂ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ನಂದಿನಿ ಸ್ಪರ್ಧೆಗೆ ಭಾರಿ ಉತ್ಸುಕರಾಗಿದ್ದರು. ಹೀಗಿದ್ದೂ ಮಂಜುನಾಥ್ ಹೇಳಿಕೆಯಿಂದಾಗಿ ಮನಸ್ಸಿಲ್ಲದ ಮನಸ್ಸಿನಿಂದ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.