"ಜಾತ್ಯತೀತ ಪಕ್ಷ ಅಂತ ಹೆಸರಿಟ್ಟರೆ ಸಾಲದು, ಜಾತ್ಯತೀತವಾಗಿ ನಡೆದುಕೊಳ್ಳಬೇಕು''
ಕೋಲಾರ, ನವೆಂಬರ್ 19: ನಾನು ಇನ್ನೂ ಜೆಡಿಎಸ್ ಪಕ್ಷದಲ್ಲೇ ಇದ್ದೇನೆ, ಆದರೆ ಎಲ್ಲೂ ಸಕ್ರಿಯವಾಗಿ ಪಕ್ಷದಲ್ಲಿ ತೊಡಿಗಿಸಿಕೊಂಡಿಲ್ಲ. ಡಿ.ಕೆ ಶಿವಕುಮಾರ್ ಹಾಗೂ ನಾವು ಕುಟುಂಬ ಸ್ನೇಹಿತರು ಎಂದು ಕೋಲಾರದಲ್ಲಿ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.
ಕಾಂಗ್ರೆಸ್ ಪಕ್ಷ ಸೇರುವ ತೀರ್ಮಾನ ಇನ್ನೂ ಮಾಡಿಲ್ಲ. ಜೆಡಿಎಸ್ ಪಕ್ಷದಲ್ಲಿ ಸಹಜವಾಗಿ ಗೊಂದಲವಿದೆ ಎಂದ ಮಧು ಬಂಗಾರಪ್ಪ, ನಮ್ಮ ತಂದೆ ಸಿಎಂ ಆಗಿದ್ದಾಗ ಡಿ.ಕೆ ಶಿವಕುಮಾರ್ ಅವರು ಕೆಲಸ ಮಾಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ನನ್ನನ್ನು ಕರೆಯುತ್ತಿದ್ದಾರೆ ಎಂದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಬಸವರಾಜ್ ಹೊರಟ್ಟಿ ಹಾಗೂ ಎಚ್.ವಿಶ್ವನಾಥ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಎಚ್.ವಿಶ್ವನಾಥ್ ಅವರಿಗೆ ಅಧಿಕಾರ ಕೊಟ್ಟಿದ್ದರೆ ಪಕ್ಷದಲ್ಲಿ ಉಳಿಯುತ್ತಿದ್ದರು. ನಾನು ಕೈಮುಗಿದು ಕೇಳಿಕೊಂಡರೂ ಪಕ್ಷ ಬಿಟ್ಟು ಹೋದರು ಎಂದು ಹೇಳಿದರು.

ಬಿಜೆಪಿ ಬಲವಾಗಿದೆ
ಅಧಿಕಾರದಲ್ಲಿದ್ದಾಗ ನಮ್ಮ ಪಕ್ಷದಲ್ಲಿದ್ದವರಿಗೆ ಸ್ಥಾನಮಾನ ನೀಡಲಿಲ್ಲ. ನಾನು ಮಾತ್ರವಲ್ಲ, ಜೆಡಿಎಸ್ ಪಕ್ಷವೇ ಸುಮ್ಮನಾಗಿ ಕುಳಿತಿದೆ. ವಿರೋಧ ಪಕ್ಷದವರು ವೀಕ್ ಇರುವುದರಿಂದ ಬಿಜೆಪಿ ಬಲವಾಗಿದೆ ಎಂದು ತಿಳಿಸಿದರು.
ನಮ್ಮ ತಂದೆ ಎಸ್.ಬಂಗಾರಪ್ಪನವರು ಕಿತ್ತೂರು ರಾಣಿ ಚೆನ್ನಮ್ಮ ನಿಗಮ ಮಂಡಳಿ ಮಾಡಿದರು, ಅದು ಅಭಿವೃದ್ಧಿಗೆ ಪೂರಕವಾಗಿತ್ತು. ನಿಗಮ ಮಂಡಳಿ ಘೋಷಣೆ ಮುಖ್ಯವಲ್ಲ, ಪರಿಹಾರ ಎಷ್ಟು ಕೊಡುತ್ತಾರೆ ಎಂಬುದು ಮುಖ್ಯ. ಬಿಜೆಪಿಯವರದು ದುರುದ್ದೇಶ ನಿರ್ಧಾರವಾಗಿದೆ ಎಂದು ಟೀಕಿಸಿದರು.

ನಿಗಮ ಮಂಡಳಿ ಮಾಡುವ ಅವಶ್ಯಕತೆ ಏನಿತ್ತು?
ವೈಯಕ್ತಿಕವಾಗಿ, ಜಾತಿ ಬಗ್ಗೆ ಮಾತನಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಈಗ ರಾಮನದು ಆಯ್ತು ಮುಂದಿನ ಚುನಾವಣೆಯಲ್ಲಿ ಕೃಷ್ಣನ ಬಗ್ಗೆ ಮಾತನಾಡುತ್ತಾರೆ. ಮೊದಲು ಸರ್ಕಾರಗಳು ಕೊಟ್ಟಿರುವ ಕಾರ್ಯಕ್ರಮಕ್ಕೆ ಹಣ ಬಿಡುಗಡೆ ಮಾಡಿ. ನಿಗಮ ಮಂಡಳಿ ಮಾಡುವ ಅವಶ್ಯಕತೆ ಏನಿತ್ತು? ಎಂದು ಆರೋಪಿಸಿದರು.

ನಮ್ಮ ಅಪ್ಪ ನನಗೆ ಕೆಟ್ಟ ಬುದ್ಧಿ ಹೇಳಿಕೊಟ್ಟಿಲ್ಲ
ನಮ್ಮ ಸಮುದಾಯದವರು ಸಹ ಈಗ ನಿಗಮ ಮಂಡಳಿ ಕೇಳುತ್ತಿದ್ದಾರೆ. ನಾನು ಕೊಡಬೇಡಿ ಅಂತ ಹೇಳುವುದಕ್ಕೆ ಆಗುತ್ತಾ? ಕೊಟ್ಟರೆ ಬೇಡ ಅನ್ನುವುದಕ್ಕೆ ಆಗುತ್ತಾ? ಎಂದು ಪ್ರಶ್ನಿಸಿದರು. ಬಿಜೆಪಿ ವಿರುದ್ಧ ರಾಜಕೀಯ ಧ್ರುವೀಕರಣ ದೇಶದಲ್ಲಿ ಆಗದಿದ್ದರೆ ಮುಂದೆ ದೇಶಕ್ಕೆ ಕಷ್ಟ ಆಗುತ್ತದೆ ಎಂದು ಎಚ್ಚರಿಸಿದರು. ನಮ್ಮ ಅಪ್ಪ ನನಗೆ ಕೆಟ್ಟ ಬುದ್ಧಿ ಹೇಳಿಕೊಟ್ಟಿಲ್ಲ. ಒಳ್ಳೆಯ ಬುದ್ಧಿ ಹೇಳಿಕೊಟ್ಟಿರುವುದಕ್ಕೆ ಚುನಾವಣೆಯಲ್ಲಿ ನಾಲ್ಕು ಬಾರಿ ಸೋತಿದ್ದೇನೆ ಎಂದರು.
Recommended Video

ನಾಯಕರ ವಿರುದ್ಧ ಮಧು ಬಂಗಾರಪ್ಪ ಕಿಡಿ
ನನ್ನ ಬಿಟ್ಟು ಪಕ್ಷದಲ್ಲಿ ಯಾರಾದರೂ ಸಕ್ರಿಯ ಆಗಿದ್ದರೆ ನಾನೇನು ಮಾಡಲಿ. ಅದು ಸಿಎಂ ಮಗನೇ ಆಗಿರಲಿ, ಮಾಜಿ ಸಿಎಂ ಮಗನೇ ಆಗಿರಲಿ, ಯಾರೇ ಆಗಿರಲಿ ಎಂದರು. ನಾನು ಹಣಕ್ಕೆ, ಅಧಿಕಾರಕ್ಕೆ, ಸಿದ್ಧಾಂತದ ವಿರುದ್ಧ ಜೋತು ಬಿದ್ದಿದ್ದರೆ ಯಾವಾಗಲೋ ಗೆಲ್ಲುತ್ತಿದ್ದೆ. ಬರೀ ಜಾತ್ಯತೀತ ಪಕ್ಷ ಅಂತ ಹೆಸರು ಇಟ್ಟುಕೊಂಡರೆ ಸಾಲದು, ಜಾತ್ಯತೀತವಾಗಿ ನಡೆದುಕೊಳ್ಳಬೇಕು ಎಂದು ಜೆಡಿಎಸ್ ನಾಯಕರ ವಿರುದ್ಧ ಮಧು ಬಂಗಾರಪ್ಪ ಕಿಡಿಕಾರಿದರು.












Click it and Unblock the Notifications