ಸೈಟ್ ಮಾರಿ ಬಡವರಿಗೆ ಅನ್ನ ಕೊಡುತ್ತಿದ್ದಾರೆ ಕೋಲಾರದ ಈ ಸೋದರರು
ಕೋಲಾರ, ಏಪ್ರಿಲ್ 08: ದೇಶದಾದ್ಯಂತ ಕೊರೊನಾ ಆತಂಕ ಆವರಿಸಿದೆ. ಜೊತೆಗೆ ಕೊರೊನಾ ತಡೆಗೆಂದು ದೇಶಾದ್ಯಂತ ಲಾಕ್ ಡೌನ್ ಕೂಡ ಹೇರಲಾಗಿದೆ. ಆದರೆ ಲಾಕ್ ಡೌನ್ ನಿಂದಾಗಿ ಕೂಲಿ ಕಾರ್ಮಿಕರು, ಬಡವರು, ರೈತರು ತತ್ತರಿಸಿ ಹೋಗಿದ್ದಾರೆ. ದಿನಗೂಲಿ ನೆಚ್ಚಿಕೊಂಡವರ ಸ್ಥಿತಿಯಂತೂ ಕೇಳುವುದೇ ಬೇಡ. ಅಸಂಘಟಿತ ಕಾರ್ಮಿಕ ವಲಯದ ಕುಟುಂಬಗಳು ಈಗ ದಿನ ದೂಡುವುದೇ ಕಷ್ಟಕರವಾಗಿದೆ.
ಇಂತಹ ಸಮಯದಲ್ಲಿ ಕೋಲಾರ ನಗರದಲ್ಲಿ ಸಹೋದರರಿಬ್ಬರು ತಮ್ಮ 25 ಲಕ್ಷ ಮೌಲ್ಯದ ಸೈಟ್ ಮಾರಿ ಬಡವರ ನೆರವಿಗೆ ನಿಂತಿದ್ದಾರೆ. ಇವರ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಹರಿಹರದಲ್ಲಿ ನಿರ್ಗತಿಕರಿಗೆ ಊಟ ವಿತರಿಸಿ ಮಾನವೀಯತೆ ಮೆರೆದ ಪಿಎಸ್ಐ
ಬಡವರ ಸ್ಥಿತಿ ಕಂಡು ಮರುಗಿದ ಸೋದರರು
ಬಡವರ ಈ ಸ್ಥಿತಿಯನ್ನು ಕಂಡು ಮರುಗಿದವರು ಕೋಲಾರದ ಹೌಸಿಂಗ್ ಬೋರ್ಡ್ ಬಡಾವಣೆಯ ಸಹೋದರರಾದ ತಜ್ಮುಲ್ ಪಾಷಾ ಹಾಗೂ ಮುಜ್ಮುಲ್ ಪಾಷಾ. ಈಗ ಕೋಲಾರದಲ್ಲಿ ಕಷ್ಟದಲ್ಲಿದ್ದವರು ಫೋನ್ ಕರೆ ಮಾಡಿದರೆ, ಅವರಿಗೆ ಉಚಿತವಾಗಿ ಮನೆಗೆ ರೇಷನ್ ನೀಡುತ್ತಿದ್ದಾರೆ. ಒಂದು ಪ್ಯಾಕೆಟ್ನಲ್ಲಿ 10 ಕೆ.ಜಿ. ಅಕ್ಕಿ, ಬೇಳೆ, ಸಕ್ಕರೆ, ಗೋಧಿ ಹಿಟ್ಟು, ಸಕ್ಕರೆ, ಮೈದಾ ಹಿಟ್ಟು, ರವೆ, ಎಣ್ಣೆ, ಟೀ ಪುಡಿ, ಮಸಾಲೆ ಪದಾರ್ಥಗಳು ಸೇರಿದಂತೆ ಒಟ್ಟು15 ಬಗೆಯ ದಿನಸಿ ಪದಾರ್ಥಗಳು, ಜೊತೆಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡುತ್ತಿದ್ದಾರೆ.
ಬಾಳೆ ಹಣ್ಣು ವ್ಯಾಪಾರ ಇವರ ಕೆಲಸ
ಬಾಳೆ ಹಣ್ಣು ವ್ಯಾಪಾರ ಮಾಡುತ್ತಿರುವ ಈ ಸಹೋದರರು ಆಹಾರ ದಿನಸಿ ಪೂರೈಸಲು ತಮ್ಮ ಸೈಟ್ ಮಾರಾಟ ಮಾಡಿ, ಅದರಿಂದ ಬಂದ ಹಣವನ್ನು ನಿತ್ಯ ಸಮಾಜ ಸೇವೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿನ ತಮ್ಮ ನಿವಾಸವನ್ನೇ ದಿನಸಿ ಪದಾರ್ಥಗಳನ್ನು ಶೇಖರಣೆ ಮಾಡಿಕೊಳ್ಳಲು ಬಳಸಿಕೊಂಡಿದ್ದಾರೆ. ದಿನಸಿ ಸಾಮಗ್ರಿಗಳಿಂದ ಮನೆಯ ಕೊಠಡಿಗಳೆಲ್ಲ ತುಂಬಿ ಹೋಗಿದೆ.
ಅಂತರಗಂಗೆಯಲ್ಲಿ ಬಸವಳಿದ ಮಂಗಗಳಿಗೆ ಆಹಾರ ನೀಡಿದ ಯುವಕರು
ಸೈಟ್ ಮಾರಿ ಸಮಾಜ ಸೇವೆಗೆ ನಿಂತರು
ಲಾಕ್ ಡೌನ್ ನಿಂದ ಕಷ್ಟ ಅನುಭವಿಸುತ್ತಿರುವ ಮಂದಿಯನ್ನು ಕಂಡ ಈ ಅಣ್ಣ ತಮ್ಮ ತಮ್ಮ ಜಾಗವನ್ನೇ ಮಾರಿದ್ದಾರೆ. ಅದರಿಂದ ಬಂದ ಹಣದಿಂದ ಈ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇದುವರೆಗೆ 2000 ಪಾಕೆಟ್ ದಿನಸಿ ವಸ್ತುಗಳನ್ನು ಬಡವರಿಗೆ ಹಂಚಿದ್ದಾರೆ. ಈಗ ಮತ್ತೊಮ್ಮೆ 2700 ದಿನಸಿ ಪಾಕೆಟ್ ಗಳನ್ನ ಕಟ್ಟಿ ಬಡವರ ಮನೆಗಳಿಗೆ ಹಂಚುವ ಮೂಲಕ 21 ದಿನಗಳ ಕಾಲ ಮನೆಯಲ್ಲೇ ಇರುವ ಪ್ರಧಾನಿ ಮೋದಿ ಅವರ ಸಂದೇಶವನ್ನು ಪ್ರಚಾರ ಮಾಡ್ತಿದ್ದಾರೆ.
ಸಹೋದರರ ಸೇವೆಗೆ ಎಲ್ಲೆಡೆ ಮೆಚ್ಚುಗೆ
ಸಹೋದರರ ಈ ಸಮಾಜ ಸೇವೆಗೆ ನಗರದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು ಮಾತನಾಡಿರುವ ಸಹೋದರರು, "ಸಮಾಜ ಸೇವೆಗೆ ಯಾವುದೇ ಜಾತಿ, ಧರ್ಮ ಬೇಧ-ಭಾವವಿಲ್ಲ. ಹೀಗಾಗೇ ನಾವು ಉಚಿತವಾಗಿ ರೇಷನ್ ನೀಡುತ್ತಿದ್ದೇವೆ. ಬಡವರು ದಯಮಾಡಿ ಹೊರಗೆ ಬಾರದೆ ಪ್ರಧಾನಿ ಮೋದಿಯವರ ಆಶಯವನ್ನು ಈಡೇರಿಸಿ. ರೇಷನ್ ಬೇಕೆಂದರೆ ತಮಗೆ ಕರೆ ಮಾಡಿದರೆ ಉಚಿತವಾಗಿ ಮನೆಗೆ ತಲುಪಿಸುತ್ತೇವೆ" ಎಂದು ತಿಳಿಸಿದ್ದಾರೆ. ನಮ್ಮನ್ನು ನೋಡಿ ಸಿರಿವಂತರು ಧಾನ ಧರ್ಮ ಮಾಡಲು ಮುಂದೆ ಬರಲಿ, ಬಡವರಿಗೆ ನೆರವಾಗಲಿ ಎಂದೂ ಮನವಿ ಮಾಡಿದ್ದಾರೆ.