ರಾಹುಲ್ ಮಾತು ದುರಹಂಕಾರದ ಪರಮಾವಧಿಯಲ್ಲವೆ : ಮೋದಿ ವ್ಯಂಗ್ಯ
ಬೆಂಗಳೂರು, ಮೇ 09 : "ಕ್ಯೂನಲ್ಲಿ ನಿಂತಿರುವವರನ್ನು, ಮೈತ್ರಿ ಕೂಟದ ಸದಸ್ಯರನ್ನು, 40 ವರ್ಷಕ್ಕೂ ಹೆಚ್ಚು ರಾಜಕೀಯ ಅನುಭವ ಇರುವವರನ್ನು ನಿರ್ಲಕ್ಷಿಸಿ ನಿನ್ನೆ ಕರ್ನಾಟಕದಲ್ಲಿ ಒಬ್ಬರು ಒಂದು ಪ್ರಮುಖ ಘೋಷಣೆ ಮಾಡಿದರು. 'ನಾನು ಪ್ರಧಾನಿ ಆಗುತ್ತೇನೆಂದು!' ಇದು ದುರಹಂಕಾರವಲ್ಲವೆ?"
ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು. ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುತ್ತಿರುವ ಮೋದಿಯವರು, ರಾಹುಲ್ ಮೇಲೆ ಭಾರೀ ಟೀಕಾಪ್ರಹಾರ ಮುಂದುವರಿಸಿದ್ದಾರೆ.
ಅವರ ಈ ಟೀಕೆಗೆ, ವ್ಯಂಗ್ಯದ ನುಡಿಗೆ ಕಾರಣವೇನೆಂದರೆ, ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡುತ್ತ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದ ಮೇಲೆ ಮತ್ತೆ ಅಧಿಕಾರಕ್ಕೆ ಬಂದರೆ, ನಾನು ದೇಶದ ಪ್ರಧಾನಿಯಾಗಲು ಸಿದ್ಧನಿದ್ದೇನೆ ಎಂದು ಘೋಷಿಸಿದ್ದರು.
ಅಲ್ಲದೆ, ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಒಂದು ವೇಳೆ ಕೈಜೋಡಿಸಿದರೆ, ಮುಂದಿನ ಲೋಕಸಭೆಯ ಚುನಾವಣೆಯ ನಂತರ ಬಿಜೆಪಿ ಮತ್ತೆ ಸರಕಾರ ರಚಿಸಲು ಸಾಧ್ಯವೇ ಇಲ್ಲ. ವಿಪಕ್ಷಗಳ ಒಗ್ಗಟ್ಟಿನಿಂದಿದ್ದರೆ ಬಿಜೆಪಿ ಅಧಿಕಾರಕ್ಕೇರುವುದು ಅಸಾಧ್ಯ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದರು.

ರಾಹುಲ್ ಮಾತಿಗೆ ಮೋದಿ ತಿರುಗೇಟು
ರಾಹುಲ್ ಗಾಂಧಿಯವರು ಆಡಿದ್ದ ಈ ಮಾತುಗಳಿಗೆ ಇದೀಗ ನರೇಂದ್ರ ಮೋದಿಯವರು ತಿರುಗೇಟು ನೀಡಿದ್ದಾರೆ. ನನ್ನನ್ನು ತೆಗೆದುಹಾಕಲು ಮೂರನೇ ರಂಗದ ಭಾರೀ ಸಭೆಗಳು ನಡೆಯುತ್ತಿವೆ. ಆದರೆ, 'ನಾನು ಪ್ರಧಾನಿ ಆಗಲು ಸಿದ್ಧನಿದ್ದೇನೆ' ಎಂದು 'ನಾಮಧಾರಿ' (ರಾಹುಲ್ ಗಾಂಧಿ) ಹೇಳಿರುವ ಹೇಳಿಕೆಗೆ ಸಭೆಯಲ್ಲಿ ಭಾಗವಹಿಸುವ ಹಿರಿಯ ನಾಯಕರು ಏನೆಂದು ಪ್ರತಿಕ್ರಿಯಿಸುತ್ತಾರೆ ಎಂದು ಮೋದಿ ಮೂರನೇ ರಂಗದಲ್ಲಿರುವ ಹಿರಿಯ ನಾಯಕರನ್ನು ಕೆಣಕಿದ್ದಾರೆ.

ಬಿಜೆಪಿ ವಿರುದ್ಧ ಸೋನಿಯಾ ರಣಕಹಳೆ
2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ, ಬಿಜೆಪಿ ವಿರುದ್ಧ ಕತ್ತಿ ಮಸೆಯುತ್ತಿರುವ ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ರಾಹುಲ್ ಗಾಂಧಿ ಅವರು ಭಾರೀ ಪ್ರಯತ್ನ ನಡೆಸಿದ್ದಾರೆ. ಮಾರ್ಚ್ ನಲ್ಲಿ ನಡೆದ ಕಾಂಗ್ರೆಸ್ ನ ಮಹಾ ಅಧಿವೇಶನದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿ ವಿರುದ್ಧ ರಣಕಹಳೆ ಊದಿದ್ದರು ಮತ್ತು ಎಲ್ಲ ವಿಪಕ್ಷಗಳು ಒಗ್ಗೂಡಬೇಕೆಂದು ಹೇಳಿದ್ದರು. ಮಂಗಳವಾರ ಮೊದಲ ಬಾರಿಗೆ ಕರ್ನಾಟಕದ, ವಿಜಯಪುರ ಜಿಲ್ಲೆಯಲ್ಲಿರುವ ಬಬಲೇಶ್ವರದಲ್ಲಿ ಪ್ರಚಾರ ಮಾಡಿದ ಸೋನಿಯಾ ಅವರು, ವಿರೋಧಿಗಳೆಲ್ಲ ಒಟ್ಟಾಗಬೇಕೆಂದು ಮತ್ತೆ ಕರೆ ನೀಡಿದ್ದಾರೆ.

ಎಂಥೆಂಥ ನಾಯಕರಿದ್ದಾರೆ ನೋಡಿ
ಮೂರನೇ ರಂಗಕ್ಕೆ ಬೆಂಬಲ ನೀಡುತ್ತಿರುವವರಲ್ಲಿ ಎಂಥೆಂಥ ನಾಯಕರಿದ್ದಾರೆ ನೋಡಿ. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮುಲಾಯಂ ಸಿಂಗ್ ಯಾದವ್, ಜಾತ್ಯತೀತ ಜನತಾದಳದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ತೃಣಮೂಲ ಕಾಂಗ್ರೆಸ್ ನ ಅಧಿನಾಯಕಿ ಮಮತಾ ಬ್ಯಾನರ್ಜಿ, ಬಹುಜನ ಸಮಾಜವಾದಿ ಪಕ್ಷದ ಮಾಯಾವತಿ, ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್, ಡಿಎಂಕೆ ಪಕ್ಷದ ಅಧ್ಯಕ್ಷ ಎಂಕೆ ಸ್ಟಾಲಿನ್. ಒಬ್ಬರಿಗಿಂತ ಮತ್ತೊಬ್ಬರು.

ಇವರೆಲ್ಲ ರಾಹುಲ್ ಪ್ರಧಾನಿಯಾಗಲು ಬಿಡ್ತಾರಾ?
ಒಂದು ವೇಳೆ ಮೂರನೇ ರಂಗ ಕಾಂಗ್ರೆಸ್ ನೇತೃತ್ವದಲ್ಲಿಯೇ ಬಿಜೆಪಿಯನ್ನು ಲೋಕಸಭೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಿತು ಅಂದುಕೊಳ್ಳೋಣ. ಈ ಘಟಾನುಘಟಿ ನಾಯಕರು, ನಾಯಕಿಯರು ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಆರಿಸುವರೇ? ಈಗಾಗಲೆ ಮಮತಾ ಬ್ಯಾನರ್ಜಿ, ಮುಲಾಯಂ ಸಿಂಗ್ ಯಾದವ್ ನಂಥ ಸಾಕಷ್ಟು ಅನುಭವವುಳ್ಳ ರಾಜಕಾರಣಿಗಳು ಮುಂದೆ ಪ್ರಧಾನಿಯಾಗುವ ತಮ್ಮ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಯಾಗಲು ರಾಹುಲ್ ನಿಜಕ್ಕೂ ಸಿದ್ಧರಿದ್ದಾರಾ?
ನಾನು ಪ್ರಧಾನಿಯಾಗಲು ಸಿದ್ಧನಿದ್ದೇನೆ ಎಂಬ ವಿಶ್ವಾಸವನ್ನು ರಾಹುಲ್ ಗಾಂಧಿಯವರು ವ್ಯಕ್ತಪಡಿಸುತ್ತಿದ್ದಂತೆ, ಒನ್ಇಂಡಿಯಾ ಓದುಗರಿಗೆ ಈ ಕುರಿತು ಒಂದು ಪ್ರಶ್ನೆ ಕೇಳಿತ್ತು. ಅದಕ್ಕೆ ಆಯ್ಕೆಗಳು ಹೀಗಿದ್ದವು : 1) ಅವರಲ್ಲಿ ಆ ಎಲ್ಲ ಗುಣಗಳಿವೆ, 2) ಅವರು ಇನ್ನೂ ಪಕ್ವವಾಗಬೇಕು, 3) ಯಾವ ಅರ್ಹತೆಯೂ ಅವರಲ್ಲಿಲ್ಲ. ಇದಕ್ಕೆ ಅವರಲ್ಲಿ ಆ ಎಲ್ಲ ಗುಣಗಳಿವೆ ಎಂದು ಹೇಳಿದ್ದು ಕೇವಲ ಶೇ.8ರಷ್ಟು ಮತದಾರರು ಮಾತ್ರ. ಶೇ.13ರಷ್ಟು ಅವರು ಇನ್ನೂ ಪಕ್ವವಾಗಬೇಕು ಅಂದಿದ್ದಾರೆ. ಉಳಿದಿದ್ದೆಲ್ಲ ಬಿದ್ದಿದ್ದು ಮೂರನೇ ಆಯ್ಕೆಗೆ. ಪೂರ್ತಿ ಮತಗಳನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications