ಲಾಕ್ ಡೌನ್ ವಿಸ್ತರಣೆ ಆಯ್ತು; ಮದ್ಯದಂಗಡಿ ತೆರೆಯುವ ಬಗ್ಗೆ ಅಬಕಾರಿ ಸಚಿವರ ಮಾತೇನು?
ಕೋಲಾರ, ಏಪ್ರಿಲ್ 14: ಏಪ್ರಿಲ್ 14ರವರೆಗೆ ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಇಂದು ಪ್ರಧಾನಿ ಮೋದಿ ಮೇ 3ರವರೆಗೆ ವಿಸ್ತರಿಸಿದ್ದಾರೆ. ಲಾಕ್ ಡೌನ್ ಆದಾಗಿನಿಂದಲೂ ರಾಜ್ಯಾದ್ಯಂತ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಏಪ್ರಿಲ್ 14ರ ನಂತರ ಮದ್ಯದಂಗಡಿಗಳನ್ನು ತೆರೆಯುವ ನಿರೀಕ್ಷೆ ಮದ್ಯ ಪ್ರಿಯರಲ್ಲಿ ಮನೆ ಮಾಡಿತ್ತು. ಆದರೆ ಇದೀಗ ಮೇ 3ರವರೆಗೂ ಲಾಕ್ ಡೌನ್ ವಿಸ್ತರಣೆ ಆಗಿದೆ.
ನಿನ್ನೆಯಷ್ಟೇ ಮದ್ಯದಂಗಡಿ ತೆರೆಯುವ ಕುರಿತು ಪ್ರತಿಕ್ರಿಯೆ ನೀಡಿದ್ದ ಅಬಕಾರಿ ಸಚಿವ ಎಚ್ ನಾಗೇಶ್, ಪ್ರಧಾನಿ ಮೋದಿ ನಾಳೆ ತೆಗೆದುಕೊಳ್ಳುವ ನಿರ್ಧಾರ ಮೇಲೆ ನಮ್ಮ ಮುಂದಿನ ನಿರ್ಧಾರ ಇರಲಿದೆ ಎಂದು ತಿಳಿಸಿದ್ದರು.
ಇಂದು ಪ್ರಧಾನಿ ಮೋದಿ ಅವರು ಮೇ 3ರವರೆಗೆ ಲಾಕ್ ಡೌನ್ ಮುಂದುವರೆಸಿದ್ದು, ಈ ಕುರಿತು ಸಚಿವ ನಾಗೇಶ್ ಪ್ರತಿಕ್ರಿಯಿಸಿದ್ದಾರೆ. "ಮದ್ಯದಂಗಡಿ ತೆರೆದರೆ ಜನಸಂದಣಿ ಹೆಚ್ಚಾಗುತ್ತದೆ. ಆದ್ದರಿಂದ ಸದ್ಯಕ್ಕೆ ತೆರೆಯುವ ಆಲೋಚನೆ ಇಲ್ಲ. ಏಪ್ರಿಲ್ 20ರ ನಂತರ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು" ಎಂದು ಹೇಳಿದ್ದಾರೆ.
"ನಾಳೆ ಮದ್ಯದಂಗಡಿಗಳ ತೆರೆಯುವ ನಿರೀಕ್ಷೆ ಇತ್ತು. ಆದರೆ ಮೋದಿ ಅವರು ಕಟ್ಟುನಿಟ್ಟಾಗಿ ಲಾಕ್ ಡೌನ್ ಮುಂದುವರೆಸಿ ಎಂದಿದ್ದಾರೆ. ಹೀಗಾಗಿ ಸರ್ಕಾರವನ್ನು ಒತ್ತಾಯ ಮಾಡಲು ಆಗುವುದಿಲ್ಲ. ಇಷ್ಟು ದಿನ ಕಾದಿದ್ದೀರಿ, ಇನ್ನು ಸ್ವಲ್ಪ ದಿನ ಕಾಯಿರಿ" ಎಂದು ತಿಳಿಸಿದ್ದಾರೆ.