ಮನೆಯಲ್ಲಿ ಹಿಂದೂ ದೇವರ ಫೋಟೋ ತೆಗೆದು ಬುದ್ಧ- ಅಂಬೇಡ್ಕರ್ ಫೋಟೋ ಹಾಕಿದ ದಲಿತ ಕುಟುಂಬ
ಕೋಲಾರ, ಸೆಪ್ಟೆಂಬರ್ 23: ಉತ್ಸವಕ್ಕೆ ಸಿದ್ಧವಾಗಿದ್ದ ದೇವರ ಮೂರ್ತಿಯನ್ನು ಮುಟ್ಟಿದ್ದಕ್ಕೆ 14 ವರ್ಷದ ದಲಿತ ಬಾಲಕನಿಗೆ ಥಳಿಸಿ, ಆತನ ಕುಟುಂಬಕ್ಕೆ 60 ಸಾವಿರ ದಂಡ ವಿಧಿಸಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ನಡೆದಿತ್ತು. ದಂಡ ಕಟ್ಟದಿದ್ದರೆ ಊರಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಕಲಾಗಿತ್ತು.
ಉಳ್ಳೇರಹಳ್ಳಿಯ ಶೋಭಾ ಹಾಗೂ ರಮೇಶ್ ದಂಪತಿಯ ಮಗ ವಾರದ ಹಿಂದೆ ಉತ್ಸವ ಮೂರ್ತಿಯನ್ನು ಮುಟ್ಟಿದ್ದಕ್ಕೆ ಮೇಲು ಜಾತಿಯವರು ದೇವರ ಮೂರ್ತಿಗೆ ಮೈಲಿಗೆಯಾಗಿದ್ದು, ಶುಚಿ ಮಾಡಲು 60 ಸಾವಿರ ದಂಡ ಕಟ್ಟಬೇಕು ಎಂದು ಆಗ್ರಹಿಸಿದ್ದರು. ಅಲ್ಲದೆ, ಕುಟುಂಬ ಹಣವಿಲ್ಲ ಎಂದು ಹೇಳಿಕೊಂಡಿದ್ದಕ್ಕೆ ಊರಿಂದ ಬಹಿಷ್ಕಾರ ಹಾಕುವ ಎಚ್ಚರಿಕೆ ನೀಡಿದ್ದರು.
ಕೊನೆಗೆ ನೊಂದ ಕುಟುಂಬ ಮಾಸ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ, ಜಿಲ್ಲಾಧಿಕಾರಿ ವೆಂಕಟ್ರಾಜ ಮತ್ತು ಎಸ್ ಪಿ ದೇವರಾಜ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಬಾಲಕನ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ನೀಡದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದರು.

ಇನ್ನು ಮಾನವ ಕುಲ ತಲೆತಗ್ಗಿಸುವ ಘಟನೆ ಬಹಿರಂಗ ಗೊಳ್ಳುತ್ತಿದ್ದಂತೆ ಸಂಸದ ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೊಂದ ಕುಟುಂಬದೊಂದಿದೆಗೆ ಚರ್ಚಿಸಿದ್ದಾರೆ. ಬಾಲಕನ ತಾಯಿ ದಿನನಿತ್ಯ ಬೆಂಗಳೂರಿಗೆ ಮನೆಕೆಲಸಕ್ಕೆ ಹೋಗುವುದಾಗಿ ತಿಳಿದುಬಂದ ನಂತರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕೆಲಸ ಹಾಗೂ ಒಂದು ಲಕ್ಷ ರೂಗಳನ್ನು ನೀಡಲಾಗಿದೆ. ಸಂಸದ ಮುನಿಸ್ವಾಮಿ ಕೂಡ ವೈಯಕ್ತಿಕವಾಗಿ 50 ಸಾವಿರ ನೀಡಿ ಇಂತಹ ಅನಿಷ್ಠ ಘಟನೆಗಳು ಮುಂದೆ ನಡೆಯದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.
8 ಮಂದಿ ಬಂಧನ
ಬಾಲಕನ ಕುಟುಂಬಕ್ಕೆ ಬಹಿಷ್ಕಾರ ಹಾಗೂ ಬೆದರಿಕೆಯೊಡ್ಡಿದ ಆರೋಪದ ಮೇಲೆ ಗ್ರಾಮದ 8 ಮಂದಿ ಆರೋಪಿಗಳು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದ ನಾರಾಯಣಸ್ವಾಮಿ ಬಿನ್ ಗೋಪಾಲಪ್ಪ, ರಮೇಶ್ ಬಿನ್ ಗೋಪಾಲಪ್ಪ, ನಾರಾಯಣಸ್ವಾಮಿ ಬಿನ್ ರಾಮಚಂದ್ರಪ್ಪ, ವೆಂಕಟೇಶಪ್ಪ ಬಿನ್ ಲೇಟ್ ಚಿಕ್ಕಯೆಳೆಪ್ಪ, ಕೋಟೆಪ್ಪ ಬಿನ್ ಲೇಟ್ ಭೈಯಣ್ಣ, ಚಲಪತಿ ಬಿನ್ ಲೇಟ್ ಭೈಯಣ್ಣ ಮೋಹನ್ರಾವ್ ಬಿನ್ ಕೋದಂಡರಾಮಯ್ಯ, ಚಿನ್ನಯ್ಯ ಬಿನ್ ಲೇಟ್ ರೇವಪ್ಪ ಎಂಬುವವರನ್ನು ಬಂಧಿಸಲಾಗಿದೆ.

ಮನೆಯಿಂದ ದೇವರಫೋಟೋ ತೆಗೆದ ಕುಟುಂಬ
ದೇವರ ಮುಟ್ಟಿದ್ದಕ್ಕೆ ಇಷ್ಟೆಲ್ಲಾ ಘಟನೆ ನಡೆದಿದ್ದರಿಂದ ನೊಂದ ಕುಟುಂಬ ತಮ್ಮ ಮನೆಯಲ್ಲಿದ್ದ ಎಲ್ಲಾ ಹಿಂದೂ ದೇವತೆಗಳ ಫೋಟೋಗಳನ್ನು, ವಿಗ್ರಹಗಳನ್ನು ತೆಗೆದು ಹಾಕಿ, ಆ ಜಾಗದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್, ಭಗವಾನ್ ಬುದ್ಧರ ಫೋಟೋಗಳನ್ನು ಇರಿಸಿದ್ದಾರೆ.












Click it and Unblock the Notifications