ಕೋಲಾರ; 80 ಆಕ್ಸಿಜನ್ ಬೆಡ್ ಕೋವಿಡ್ ಆಸ್ಪತ್ರೆ ಉದ್ಘಾಟನೆ
ಕೋಲಾರ, ಜೂನ್ 02; ಮುಳಬಾಗಿಲು ಸ್ಥಳೀಯ ಶಾಸಕರ ನಿಧಿ ಹಾಗೂ ಸರ್ಕಾರದ ನೆರವಿನಿಂದ ಪಟ್ಟಣದ ಹಳೆಯ ನ್ಯಾಯಾಲಯ ಕಟ್ಟಡದಲ್ಲಿ ಹೊಸದಾಗಿ ಅಭಿವೃದ್ಧಿ ಮಾಡಲಾಗಿರುವ ಸುಸಜ್ಜಿತ 80 ಹಾಸಿಗೆಗಳ ಕೋವಿಡ್ ಕೇರ್ ಆಸ್ಪತ್ರೆ ಉದ್ಘಾಟನೆಗೊಂಡಿದೆ.
ಕರ್ನಾಟಕ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ ಬುಧವಾರ ಆಸ್ಪತ್ರೆ ಲೋಕಾರ್ಪಣೆ ಮಾಡಿದರು. ಈ ಮೂಲಕ ರಾಜ್ಯದ ಪೂರ್ವ ಗಡಿ ಭಾಗದ ಪಟ್ಟಣ ಮುಳಬಾಗಿಲು ಮತ್ತು ತಾಲೂಕಿನ ಗ್ರಾಮಗಳಲ್ಲಿ ಸೋಂಕಿಗೆ ತುತ್ತಾದವರು ಇಲ್ಲಿಯೇ ಅತ್ಯುತ್ತಮ ಚಿಕಿತ್ಸೆ ಪಡೆಯಬಹುದು.
"ಸೋಂಕು ಕಾಣಿಸಿಕೊಂಡ ಮೇಲೆ ಆತಂಕಗೊಂಡು ಕೋಲಾರ ಅಥವಾ ಬೆಂಗಳೂರಿಗೆ ಓಡುವುದು ಬೇಡ. ಇಲ್ಲಿಯೇ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗುತ್ತದೆ" ಎಂದು ಡಾ. ಸಿ. ಎನ್. ಅಶ್ವಥ್ ನಾರಾಯಣ ಹೇಳಿದರು.

ಹಳೆಯ ನ್ಯಾಯಾಲಯದ ಕಟ್ಟಡದಲ್ಲಿ ಅತ್ಯಂತ ಸುಸಜ್ಜಿತವಾಗಿ ಈ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗಿದೆ. ನ್ಯಾಯಾಲಯವು ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ನಂತರ ಈ ಕಟ್ಟಡ ಖಾಲಿ ಬಿದ್ದಿತ್ತು. ಇದನ್ನು ವ್ಯರ್ಥವಾಗಿ ಬಿಡದೇ ಈಗ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.
ಈ ಆಸ್ಪತ್ರೆಗೆ ಸ್ಥಳೀಯ ಶಾಸಕರ ನಿಧಿಯಿಂದ 80 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಈ ಕಟ್ಟಡವನ್ನು ಆಸ್ಪತ್ರೆ ಮಾಡಬೇಕು ಎಂದು ಶಾಸಕ ನಾಗೇಶ್ ಸಂಕಲ್ಪ ಮಾಡಿದ್ದರು. ಅದಕ್ಕೆ ಉಸ್ತುವಾರಿ ಸಚಿವ ಅರವಿಂದ ಲಿಂಬಾವಳಿ ಮತ್ತು ಸಂಸದ ಮುನಿಸ್ವಾಮಿ ಸಹಕಾರ ನೀಡಿದ್ದಾರೆ.

ಈ ಆಸ್ಪತ್ರೆಯ ಎಲ್ಲ 80 ಬೆಡ್ ಗಳಿಗೂ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಜಂಬೋ ಸಿಲಿಂಡರ್ ಸಂಪರ್ಕ ಕಲ್ಪಿಸಲಾಗಿದೆ. ಇಲ್ಲಿ ಆಮ್ಲಜನಕ ಕೊರತೆ ಆಗುವುದಿಲ್ಲ. ಅಲ್ಲದೆ, ಗೀವ್ ಇಂಡಿಯಾ ಹಾಗೂ ಶ್ರೀಮದ್ ರಾಜ್ ಚಂದ್ರ ಪ್ರತಿಷ್ಠಾನ ತಲಾ 10 ಆಮ್ಲಜನಕ ಸಾಂದ್ರಕಗಳನ್ನು ಆಸ್ಪತ್ರೆಗೆ ನೀಡಿದೆ. ಸರಕಾರದ ಕಡೆಯಿಂದ ವೈದ್ಯರು, ಅರೆ ವೈದ್ಯ ಸಿಬ್ಬಂದಿ, ವೈದ್ಯಕೀಯ ಸಾಮಗ್ರಿ, ಔಷಧಿ, ಮಾತ್ರೆಗಳನ್ನು ಒದಗಿಸಲಾಗಿದೆ.
ಮೂರನೇ ಅಲೆಗೂ ಸನ್ನದ್ಧ: "ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಆರೋಗ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಸಂಭವನೀಯ ಮೂರನೇ ಅಲೆ ಎದುರಿಸುವುದಕ್ಕೂ ಸರಕಾರ ಸಂಪೂರ್ಣವಾಗಿ ಸನ್ನದ್ಧವಾಗಿದೆ. ರಾಜ್ಯದ ಎಲ್ಲ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲ ಆಸ್ಪತ್ರೆಗಳಿಗೆ ಇನ್ನಷ್ಟು ಶಕ್ತಿ ತುಂಬಲಾಗುತ್ತಿದೆ" ಎಂದು ಅಶ್ವಥ್ ನಾರಾಯಣ ಹೇಳಿದರು.












Click it and Unblock the Notifications