ಸಿದ್ದರಾಮಯ್ಯ ಕೋಲಾರ ಪ್ರವಾಸ ಠುಸ್ ಪಟಾಕಿ!
ಕೋಲಾರ ನವೆಂಬರ್16: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಲ್ಲಿ ಸ್ಫರ್ಧಿಸುತ್ತಾರೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಠಿ ಕೊಡುವಂತೆ ಸಿದ್ದರಾಮಯ್ಯ ಕೋಲಾರ ಕೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ಈ ಬಗ್ಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ಆರಂಭದಲ್ಲಿ ನನಗೂ ಸ್ಪಲ್ಪ ಗಾಬರಿ ಇತ್ತು. ಮಾಜಿ ಮುಖ್ಯಮಂತ್ರಿಗಳು, ಮೈಸೂರು ಹುಲಿ ಬಂದರೆ ಏನಾಗಬಹುದು?, ಜನಸ್ತೋಮ ಸೇರುತ್ತಾರೆ ಎನ್ನುವ ಆಲೋಚನೆ ಇತ್ತು. ಆದರೆ ಸಿದ್ದರಾಮಯ್ಯ ಕೋಲಾರ ಪ್ರವಾಸ ಠುಸ್ ಪಟಾಕಿ ಆಗಿದೆ" ಎಂದು ಲೇವಡಿ ಮಾಡಿದರು.
"ನಮ್ಮ ಕಡೆಗಳಲ್ಲಿ ಒಬ್ಬ ಗ್ರಾಮ ಪಂಚಾಯತಿ ಸದಸ್ಯ ಸೇರಿದರೆ ನೂರರಿಂದ ಇನ್ನೂರು ಜನ ಸೇರುತ್ತಾರೆ. ಸಿದ್ದರಾಮಯ್ಯ ಅವರು ಐದು ಕಡೆ ಪ್ರವಾಸ ಮಾಡಿದರು. ಕೋಲಾರಮ್ಮ ದೇವಸ್ಥಾನ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸೇರಿದಂತೆ ಅನೇಕ ಕಾರ್ಯಕ್ರಮ ಇತ್ತು. ಆದರೆ ಎಲ್ಲಿಯೂ ಇನ್ನೂರು ಜನ ಸೇರಿಲ್ಲ" ಎಂದು ವ್ಯಂಗ್ಯವಾಡಿದರು.
ನಾನು ಕರೆಕೊಟ್ಟಾಗ ನಾಲ್ಕು ಸಾವಿರ ಜನ ಬಂದಿದ್ದರು
"ಸಿದ್ದರಾಮಯ್ಯ ಕೋಲಾರ ಪ್ರವಾಸದ ವೇಳೆ ಸೇರಿದ್ದ ಜನರೆನೆಲ್ಲಾ ಮೂರು ಬಸ್ನಲ್ಲಿ ಎಸ್. ಎಲ್. ನಾರಾಯಣ ಸ್ವಾಮಿ ಕರೆದುಕೊಂಡು ಬಂದಿದ್ದವರು. ನಮ್ಮ ಕೋಲಾರ ಪ್ರವೇಶದಲ್ಲಿ ಗಡಿ ಭಾಗದಿಂದ ಐನೂರು ಜನರನ್ನು ನಂಜೇಗೌಡರು ಕರೆತಂದಿದ್ದರು. ಒಬ್ಬ ಮಾಜಿ ಮುಖ್ಯಮಂತ್ರಿ, ಈ ಕ್ಷೇತ್ರದಲ್ಲಿ ಸ್ಫರ್ಧಿಸಬೇಕು ಎಂದುಕೊಂಡಿರುವ ವ್ಯಕ್ತಿ ಬಂದಾಗ ಕನಿಷ್ಟ ಎರಡಿಂದ ಮೂರು ಸಾವಿರ ಜನ ಸೇರಬೇಕಿತ್ತು. ನಾನು ಸುಮ್ಮನೆ ಕರೆಕೊಟ್ಟಾಗ, ಎರಡು ಸಾವಿರ ಬೈಕ್ನಲ್ಲಿ ನಾಲ್ಕು ಸಾವಿರ ಜನ ಅರ್ಧಗಂಟೆಯಲ್ಲಿ ಬಂದರು. ಇದು ನನ್ನ ಶಕ್ತಿ. ಸಿದ್ದರಾಮಯ್ಯನವರದು ಕೋಲಾರದಲ್ಲಿ ಅಸ್ತಿತ್ವ ಇಲ್ಲ" ಎಂದು ವರ್ತೂರು ಪ್ರಕಾಶ್ ಹೇಳಿದರು.
ಆರ್ಥಿಕವಾಗಿ ಸಿದ್ದರಾಮಯ್ಯನವರಿಗೆ ಸಹಾಯ ಮಾಡಿದ್ದೇನೆ
"ನಾನು ಸಿದ್ದರಾಮಯ್ಯ ಶಿಷ್ಯ ಅಲ್ಲ. ಅವರು 1983ರಲ್ಲಿ ವಿಧಾನಸಭೆ ಪ್ರವೇಶ ಮಾಡಿದಾಗ, ನಾನು ಬೆಂಗಳೂರು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದೆ. ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಹೊರಗೆ ಬಂದಾಗ ನಾವು ಅವರಿಗೆ ಆಶ್ರಯ ಕೊಟ್ಟಿದ್ದೇವೆ. ನಾವು ಅವರ ಗರಡಿಯಲ್ಲಿ ಯುದ್ಧ ಕಲಿತವರಲ್ಲ. ಚುನಾವಣೆಯಲ್ಲಿ ಆರ್ಥಿಕವಾಗಿ ನಾನು ಸಿದ್ದರಾಮಯ್ಯನವರಿಗೆ ಸಹಾಯ ಮಾಡಿದ್ದೇನೆ. ಹೀಗಾಗಿ ಅವರ ಶಿಷ್ಯ ನಾನು ಎನ್ನುವ ಪದವನ್ನು ಯಾರೂ ಬಳಸಬಾರದು" ಎಂದು ಈಗ ಬಿಜೆಪಿಯಲ್ಲಿರುವ ವರ್ತೂರು ಪ್ರಕಾಶ್ ಹೇಳಿದರು.
ನನ್ನ ಸೇವೆ ನನ್ನ ಕಾಣಿಕೆ ಸಿದ್ದರಾಮಯ್ಯನವರಿಗೆ ಬಾರಿ ಇದೆ
"ಸಿದ್ದರಾಮಯ್ಯ ಕೋಲಾರದಿಂದ ಚುನಾವಣೆಗೆ ನಿಲ್ಲುತ್ತೇನೆ ಎಂದ ದಿನ ನನ್ನ ಮಾತು ನನ್ನ ವಿಚಾರಧಾರೆ ಬೇರೆ ಆಗಿರುತ್ತದೆ. ನಮ್ಮ ಸಮಾಜದವರು ಎಂದು ಇವತ್ತಿಗೂ ನನಗೆ ಸಿದ್ದರಾಮಯ್ಯನವರ ಮೇಲೆ ಸಾಫ್ಟ್ ಕಾರ್ನರ್ ಇದೆ. ನಾನು ಸಿದ್ದರಾಮಯ್ಯ ಶಿಷ್ಯ ಅಲ್ಲ. ನಾನು 2008ರಲ್ಲಿ ಪಕ್ಷೇತರವಾಗಿ ಗೆದ್ದು, ಈ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ನಾನು ಶ್ರಮವಹಿಸಿದ್ದೇನೆ ಹೊರತು. ಸಿದ್ದರಾಮಯ್ಯನವರಿಂದ ಎಳ್ಳಷ್ಟು ಕೊಡುಗೆ ನನಗೆ ಇಲ್ಲ. ನನ್ನ ಸೇವೆ ನನ್ನ ಕಾಣಿಕೆ ಸಿದ್ದರಾಮಯ್ಯನವರಿಗೆ ಬಾರಿ ಇದೆ" ಎಂದು ಮಾಜಿ ಸಚಿವರು ವಿವರಿಸಿದರು.
ಯಾರೂ ಕೂಡ ರಾಜ್ಯದಲ್ಲಿ ಕ್ಷೇತ್ರ ಬದಲಾವಣೆ ಮಾಡಿದವರಿಲ್ಲ
"ಸಿದ್ದರಾಮಯ್ಯ ಕೋಲಾರ ಪ್ರವಾಸದ ಬಳಿಕ ಬಹಳ ಖುಷಿಯಲ್ಲಿದ್ದೇನೆ. ಅವರು ಕ್ಷೇತ್ರ ಪ್ರವಾಸ ಮಾಡಿರುವುದು ನನಗೆ ಬಹಳ ಖುಷಿಯಾಗಿದೆ. ಜನ ಜಾಣರಿದ್ದಾರೆ. ಯಾರೂ ಕೂಡ ರಾಜ್ಯದಲ್ಲಿ ಕ್ಷೇತ್ರ ಬದಲಾವಣೆ ಮಾಡಿದವರಿಲ್ಲ. ಎಸ್. ಎಂ. ಕೃಷ್ಣ ಮಂಡ್ಯ ಬಿಟ್ಟು ಬೆಂಗಳೂರಿಗೆ ಬಂದು ಅವರ ಜೀವನ ಹಾಳು ಮಾಡಿಕೊಂಡರು. ಹಾಗೆ ಸಿದ್ದರಾಮಯ್ಯ ವರುಣ ಬಿಟ್ಟು ಚಾಮುಂಡಿಯಲ್ಲಿ ಸೋತು ಬಾದಾಮಿಗೆ ಹೋದರು. ಸಿದ್ದರಾಮಯ್ಯನವರ ಕೆಲಸಕ್ಕೆ ಕೋಲಾರದಲ್ಲಿ ಬೆಲೆ ಇಲ್ಲ" ಎಂದು ವರ್ತೂರು ಪ್ರಕಾಶ್ ವ್ಯಂಗ್ಯವಾಡಿದ್ದಾರೆ.