ಎಷ್ಟೋ ವರ್ಷದ ನಂತರ ಕೋಲಾರದಲ್ಲಿ ಈ ಪರಿ ಮಳೆ; ಜೀವಪಡೆದ ನೀರ ಸೆಲೆ
ಕೋಲಾರ, ಆಗಸ್ಟ್ 10: ನೀರೇ ಇಲ್ಲದೇ ಬರಡಾಗಿದ್ದ ಪ್ರದೇಶಗಳಲ್ಲಿ ಈಗ ಜೀವ ಕಳೆ ಬಂದಿದೆ. ಮೂರು ದಿನಗಳಿಂದ ಸುರಿದ ಮಳೆ ಜಾದೂ ಮಾಡಿ ಬರದ ನಾಡಿನ ಬೆಟ್ಟಗುಡ್ಡಗಳಲ್ಲಿ ಸಣ್ಣಪುಟ್ಟ ಜಲಪಾತವನ್ನೇ ಸೃಷ್ಟಿಸಿದೆ. ಶತಶೃಂಗ ಗಿರಿ ಪರ್ವತದಲ್ಲಿ ಪುಟ್ಟ ಪುಟ್ಟ ಜಲಪಾತ ಝರಿಗಳು ಬರದ ನಾಡಿನ ಜನರಿಗೆ ಮಲೆನಾಡಿನ ಅನುಭವ ನೀಡುತ್ತಿದೆ.
ಕಲ್ಲು ಬಂಡೆಗಳ ನಡುವೆ ಜುಳು ಜುಳು ಚಿಮ್ಮುತ್ತಿರುವ ಜರಿಗಳು, ಧುಮ್ಮಿಕ್ಕಿ ಹರಿಯುತ್ತಿರುವ ಪುಟ್ಟ ಪುಟ್ಟ ಜಲಪಾಲಗಳು, ಆ ನೀರಿನಲ್ಲಿ ಕುಣಿದು ಕುಪ್ಪಳಿಸುತ್ತಿರುವ ಜನರು... ಈ ಸುಂದರ ದೃಶ್ಯಗಳು ಕಂಡು ಬಂದಿದ್ದು ಬರದ ನಾಡು ಎಂದೇ ಕರೆಸಿಕೊಳ್ಳುವ ಕೋಲಾರದಲ್ಲಿ. ಕಳೆದ ಕೆಲ ದಿನಗಳಿಂದ ಕೋಲಾರ ಜಿಲ್ಲೆಯಾದ್ಯಂತ ಒಳ್ಳೆಯ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರದ ಪ್ರಸಿದ್ಧ ಯಾತ್ರಾಸ್ಥಳ ಅಂತರಗಂಗೆ ಬೆಟ್ಟದಲ್ಲಿ ಸೃಷ್ಟಿಯಾಗಿರುವ ಪುಟ್ಟ ಪುಟ್ಟ ನೀರ ಸೆಲೆಗಳು ಕಣ್ಮನ ಸೆಳೆಯುತ್ತಿವೆ.
Recommended Video

ಎಷ್ಟೋ ವರ್ಷಗಳ ನಂತರ ಭಾರೀ ಮಳೆ
ಕಳೆದ ಹತ್ತಾರು ವರ್ಷಗಳಿಂದ ಮಳೆಯಿಲ್ಲದೇ ನೀರಿಗಾಗಿ ಪರದಾಡುತ್ತಿದ್ದ ಬರದೂರಿನ ಜನಕ್ಕೆ ನಿಜಕ್ಕೂ ಈ ಪುಟ್ಟ ಝರಿಗಳೇ ಜಲಪಾತದ ಅನುಭವ, ಸಂತೋಷ ನೀಡುತ್ತಿದೆ. ಹಾಗಾಗಿ ಕೋಲಾರ ಸೇರಿದಂತೆ ಅಕ್ಕ ಪಕ್ಕದೂರಿನ ಜನರು ಕೊರೊನಾದ ನಡುವೆಯೂ ಅಂತರಗಂಗೆ ಬೆಟ್ಟಕ್ಕೆ ಬಂದು ಅಲ್ಲಿನ ಬೃಹತ್ತಾದ ಬೆಟ್ಟ ಗುಡ್ಡಗಳ ನಡುವೆ, ಮರಗಳ ನಡುವೆ ಹರಿಯುತ್ತಿರುವ ಜಲಪಾತಗಳ ಸೊಬಗನ್ನು ಸವಿಯುತ್ತಿದ್ದಾರೆ.

ಎಂಟು ವರ್ಷದ ಹಿಂದೆ ಆಗಿದ್ದ ಮಳೆ
ಕೋಲಾರ ಜಿಲ್ಲೆಯಲ್ಲಿ ಎಂಟು ವರ್ಷಗಳ ಹಿಂದೆ ಆಂಧ್ರ ತಮಿಳುನಾಡಿನ ಚಂಡಮಾರುತದ ಪರಿಣಾಮದಿಂದ ಕೋಲಾರಕ್ಕೆ ಮಳೆಯಾಗಿ ಜಿಲ್ಲೆಯ ಕೆರೆಗಳೆಲ್ಲಾ ತುಂಬಿದ್ದವು. ಅಲ್ಲದೆ ಆ ವೇಳೆ ಅಂತರಗಂಗೆ ಬೆಟ್ಟದಲ್ಲಿ ಸುಂದರ ಜಲಪಾತಗಳು ಸೃಷ್ಟಿಯಾಗಿದ್ದವು. ಅದಾದ ನಂತರ ಮತ್ತೆ ಜಿಲ್ಲೆಯಲ್ಲಿ ಮಳೆಯೇ ಬೀಳೋದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವಾರದಿಂದ ಬೀಳುತ್ತಿರುವ ಮಳೆ ಜಿಲ್ಲೆಯ ಜನರಲ್ಲೊಂದು ಆಶಾಭಾವನೆ ಮೂಡಿಸಿದೆ.

ಜಲರಾಶಿ ಕಣ್ತುಂಬಿಕೊಳ್ಳುತ್ತಿರುವ ಜನ
ಇದೀಗ ಕೋಲಾರ ನಗರದ ಜನ ಅಂತರಗಂಗೆಗೆ ಬಂದು ಅಪರೂಪದ ಜಲರಾಶಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ತಮ್ಮ ಮೊಬೈಲ್ ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಂಡು ಆನಂದಗೊಳ್ಳುತ್ತಿದ್ದಾರೆ.

ಬರದ ನಾಡಲ್ಲಿ ಮಲೆನಾಡಿನ ಸಿರಿ
ಒಟ್ಟಾರೆ ಬರದನಾಡಲ್ಲಿ ಕೆಲ ದಿನಗಳಿಂದ ಸುರಿದ ಮಳೆ ಮರುಭೂಮಿಯಲ್ಲೂ ಮಲೆನಾಡಿನ ಮೈಸಿರಿ ಮೂಡುವಂತೆ ಮಾಡಿದೆ. ಜಿಲ್ಲೆಯ ಜನರಲ್ಲಿ ಹೊಸ ಭರವಸೆ ಚಿಗುರೊಡೆಯುವಂತೆ ಮಾಡಿದೆ. ಕೊರೊನಾ ಸೋಂಕಿನ ಭೀತಿಯಿಂದಾಗಿ ನಾಲ್ಕೈದು ತಿಂಗಳಿನಿಂದ ಜೀವಕಳೆಯೇ ಕಳೆದುಕೊಂಡಂತೆ ಇದ್ದ ಪ್ರಕೃತಿಗೂ ಹೊಸ ರೂಪ ಸಿಕ್ಕಿದೆ.












Click it and Unblock the Notifications