ವಿಸ್ಟ್ರಾನ್ ಗಲಭೆ; ತನಿಖೆಯ ಮೇಲ್ವಿಚಾರಣೆಗೆ ಎಡಿಜಿಪಿ ನೇಮಕ
ಕೋಲಾರ, ಡಿಸೆಂಬರ್ 23: ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ತನಿಖೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳಲಿದ್ದಾರೆ. ಡಿಸೆಂಬರ್ 12ರಂದು ನಡೆದ ಗಲಭೆ ಬಗ್ಗೆ ವೇಮಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ಕುರಿತು ಹೇಳಿಕೆ ನೀಡಿದ್ದಾರೆ. "ವಿಸ್ಟ್ರಾನ್ ದಾಂಧಲೆಗೆ ಸಂಬಂಧಿಸಿ ದಾಖಲಾಗಿರುವ ಪ್ರಕರಣಗಳ ತನಿಖೆಯ ಮೇಲ್ವಿಚಾರಕರಾಗಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು & ಸುವ್ಯವಸ್ಥೆ) ನೇಮಿಸಲಾಗಿದೆ" ಎಂದು ಹೇಳಿದ್ದಾರೆ.
"ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ. ಈ ಪ್ರಕರಣದ ತನಿಖೆಯ ಉಸ್ತುವಾರಿಯನ್ನು ಎಡಿಜಿಪಿಗೆ ವಹಿಸಲಾಗಿದೆ" ಎಂದು ತಿಳಿಸಿದ್ದಾರೆ.

"ವಿಸ್ಟ್ರಾನ್ ನಲ್ಲಿ ನಡೆದ ದಾಂಧಲೆಯಲ್ಲಿ ಕಂಪನಿಯ ಗಾಜು, ಪಿಠೋಪಕರಣ, ಕಂಪ್ಯೂಟರ್, ಲ್ಯಾಪ್ ಟಾಪ್, ಸಿಸಿಟಿವಿ, ಕಾರುಗಳಗಳನ್ನು ಧ್ವಂಸ ಮಾಡಲಾಗಿದೆ. 437 ಕೋಟಿಗೂ ಅಧಿಕ ನಷ್ಟವಾಗಿದೆ" ಎಂದು ದೂರು ದಾಖಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
"ಡಿಸೆಂಬರ್ 12ರಂದು ವಿಸ್ಟ್ರಾನ್ನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 300ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು & ಸುವ್ಯವಸ್ಥೆ), ಕೇಂದ್ರ ವಲಯ ಐಜಿಪಿ ಭೇಟಿ ನೀಡಿದ್ದರು" ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಡಿಸೆಂಬರ್ 11ರ ಶುಕ್ರವಾರ ಸಂಜೆಯಿಂದ ವಿಸ್ಟ್ರಾನ್ ಘಟಕದಲ್ಲಿ ವೇತನ ವಿಚಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಹಾಗೂ ಆಡಳಿತ ಮಂಡಳಿಯ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು.
ಡಿಸೆಂಬರ್ 12ರ ಶನಿವಾರ ಮುಂಜಾನೆ ಅದು ತೀವ್ರ ಸ್ವರೂಪ ಪಡೆದುಕೊಂಡಿತು. ಕಾರುಗಳಿಗೆ ಬೆಂಕಿ ಹಚ್ಚಲಾಯಿತು, ಪಿಠೋಪಕರಣ ಧ್ವಂಸ ಮಾಡಲಾಯಿತು, ಕಂಪ್ಯೂಟರ್ಗಳನ್ನು ಒಡೆದು ಹಾಕಲಾಯಿತು.
ಕೋಲಾರ ಸಮೀಪದ ನಸರಾಪುರದಲ್ಲಿ ತೈವಾನ್ ಮೂಲದ ವಿಸ್ಟ್ರಾನ್ ಘಟಕ ಐಫೋನ್ ಬಿಡಿಭಾಗಗಳ ತಯಾರಿಕಾ ಘಟಕವನ್ನು ಆರಂಭಿಸಿದೆ. ಸುಮಾರು 3 ಸಾವಿರ ಕೋಟಿ ವೆಚ್ಚದಲ್ಲಿ ಮೇಕ್ ಇನ್ ಇಂಡಿಯಾ ಹಾಗೂ ಚೀನಾ ಸರಕುಗಳಿಗೆ ಸೆಡ್ದು ಹೊಡೆಯಲು ಘಟಕ ನಿರ್ಮಾಣ ಮಾಡಲಾಗಿದೆ.












Click it and Unblock the Notifications