ಇಂದು ಕಾರವಾರದಲ್ಲಿ ಪ್ರವಾಹ ಪರಿಶೀಲನೆ; ಯಡಿಯೂರಪ್ಪ ಪ್ರವಾಸಕ್ಕೆ ತೊಡಕಾದ ಮಳೆ
ಕಾರವಾರ, ಆಗಸ್ಟ್ 31: ತಾಲ್ಲೂಕಿನಲ್ಲಿ ಮಳೆ, ಪ್ರವಾಹದಿಂದಾಗಿ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ಮಳೆಯ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಶುಕ್ರವಾರದಿಂದ ಮಳೆ ಮತ್ತೆ ಚುರುಕುಗೊಂಡಿದ್ದು, ವಿವಿಧೆಡೆ ಹೆದ್ದಾರಿಗಳಲ್ಲೇ ನೀರು ನಿಂತು ಸಮಸ್ಯೆ ಉದ್ಭವಿಸಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕ ಬಂದು, ಕಾರವಾರಕ್ಕೆ ಸಿಎಂ ಹೆಲಿಕಾಪ್ಟರ್ ಮೂಲಕವೇ ಬರಬೇಕಿತ್ತು. ಆದರೆ, ಜಿಲ್ಲೆಯಲ್ಲಿ ಸದ್ಯ ಮಳೆ ಹಾಗೂ ಕೆಟ್ಟ ಹವಾಮಾನ ಹೆಲಿಕಾಪ್ಟರ್ ಇಳಿಯಲು ಅನನುಕೂಲ ಉಂಟು ಮಾಡುವ ಆತಂಕ ಎದುರಾಗಿದೆ.
ಬೆಳಿಗ್ಗೆ 10 ಗಂಟೆಗೇ ಸಿಎಂ ಕಾರ್ಯಕ್ರಮ ಕಾರವಾರದಲ್ಲಿ ನಿಗದಿಯಾಗಿತ್ತು. ತಾಲ್ಲೂಕಿನಲ್ಲಿ ಮಳೆಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಬೇಕಿತ್ತು. ಸದ್ಯ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಈಗಷ್ಟೇ ಬಂದು ತಲುಪಿರುವ ಅವರು, ಅಲ್ಲಿಯೇ ಕೆಲವು ಕಾಲ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಬೇಕಿದೆ. ನಂತರ ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕಾರವಾರಕ್ಕೆ ಬರಬೇಕಿದ್ದು, ಬಹುಶಃ ಹವಾಮಾನ ವೈಪರೀತ್ಯ ಸಿಎಂ ಪ್ರವಾಸಕ್ಕೆ ಅಡ್ಡಿ ಉಂಟು ಮಾಡುವ ಲಕ್ಷಣ ಕಂಡು ಬರುತ್ತಿದೆ.

ಕಾರವಾರದ ಪ್ರವಾಸ ಮುಗಿಸಿ ಸಿಎಂ ಮಧ್ಯಾಹ್ನ 2ಕ್ಕೆ ಹಾವೇರಿ ಪ್ರವಾಸ ಮಾಡಬೇಕಿದೆ. ಕಾರವಾರ ಪ್ರವಾಸವೇ ವಿಳಂಬವಾಗಿರುವುದರಿಂದ ಹಾವೇರಿ ಪ್ರವಾಸವೂ ವಿಳಂಬವಾಗುವ ಸಾಧ್ಯತೆ ಇದೆ ಅಥವಾ ಶಿವಮೊಗ್ಗದಿಂದ ನೇರವಾಗಿ ಹಾವೇರಿಗೆ ತಲುಪಬೇಕಿದೆ.
ಕಾರವಾರದ ಅರಗಾ ಸೀಬರ್ಡ್ ನಲ್ಲಿ ಹೆಲಿಕಾಪ್ಟರ್ ಇಳಿಯಬೇಕಿದೆ. ಅಲ್ಲಿಂದ ವಿಶೇಷ ವಾಹನದಲ್ಲಿ ಅವರು ಸರ್ಕ್ಯೂಟ್ ಹೌಸ್ ಗೆ ಬರಬೇಕಿದೆ. ಸರ್ಕ್ಯೂಟ್ ಹೌಸ್ ನಲ್ಲಿ ಪೊಲೀಸರು ಎಲ್ಲ ವ್ಯವಸ್ಥೆ ಮಾಡಿದ್ದು, ಪಕ್ಷದವರೂ ಬೆಳಿಗ್ಗೆಯಿಂದ ಕಾದು ಕುಳಿತಿದ್ದಾರೆ. ಮಳೆಯಲ್ಲೇ ರಸ್ತೆಯ ಸುಗಮ ಸಂಚಾರಕ್ಕೆ ಪೊಲೀಸ್ ಸಿಬ್ಬಂದಿ ವ್ಯವಸ್ಥೆ ಮಾಡುತ್ತಿದ್ದಾರೆ.












Click it and Unblock the Notifications