ಸಬಾ ನಖ್ವಿ, ಸಾಂಬಾರ್ ಪುಡಿ, ಅನಂತ ಕುಮಾರ್; ಟ್ವಿಟ್ಟರ್ ನಲ್ಲಿ ಏನಿದು ರಗಳೆ?
ಕಾರವಾರ, ಅಕ್ಟೋಬರ್ 31: ಬರಹಗಾರ್ತಿ ಸಬಾ ನಖ್ವಿ ಟ್ವಿಟರ್ ನಲ್ಲಿ ಸಂಸದ ಅನಂತಕುಮಾರ ಹೆಗಡೆ ಅವರ ಕಾಲೆಳೆಯಲು ಹೋಗಿ ತಾವೇ ಮುಜುಗರಕ್ಕೀಡಾಗಿದ್ದಾರೆ.
ಇತ್ತೀಚಿಗಷ್ಟೇ ಸಬಾ ನಖ್ವಿ ಈಸ್ಟರ್ನ್ ಬ್ರಾಹ್ಮಿನ್ ಸಾಂಬಾರ್ ಪೌಡರ್ ನ ಪ್ಯಾಕೆಟ್ ಫೋಟೊವೊಂದನ್ನು ಟ್ವೀಟ್ ಮಾಡಿದ್ದಾರೆ. ಅದಕ್ಕೆ, 'ಕರಾವಳಿ ಕರ್ನಾಟದ ಕಾರವಾರದಲ್ಲಿ ನನ್ನದೊಂದು ಆವಿಷ್ಕಾರ. ಇದು ಅನಂತಕುಮಾರ ಹೆಗಡೆ ದೇಶ' ಎಂದು ಅಡಿಬರಹ ಬರೆದುಕೊಂಡಿದ್ದಾರೆ. ಇದು ಅನಂತಕುಮಾರ ಹೆಗಡೆ ಹಾಗೂ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಲೋಕಲ್ ಟ್ರೇನ್ ಹತ್ತಿ ಬಂದೋರಲ್ಲ ನಾವು: ಅತೃಪ್ತರಿಗೆ ಅನಂತಕುಮಾರ್ ಹೆಗಡೆ ವ್ಯಂಗ್ಯ
ಸಬಾ ನಖ್ವಿಯವರ ಟ್ವೀಟ್ ಅನ್ನು 220 ಮಂದಿ ರಿಟ್ವೀಟ್ ಮಾಡಿದ್ದು, ನಖ್ವಿಯವರನ್ನು ಟ್ವಿಟರ್ ನಲ್ಲಿ ತರಾಟೆಗೆ ತೆಗದುಕೊಂಡಿದ್ದಾರೆ. ಒಬ್ಬರು, 'ಸಬಾ ಅವ್ರೆ ಮಂಡ್ಯಕ್ಕೆ ಬನ್ನಿ, ಗೌಡರ ಮುದ್ದೆ ಕೊಡ್ತೀವಿ. ಬೀದರಿಗೆ ಬನ್ನಿ, ಲಿಂಗಾಯತ ಖಾನಾವಳಿಯಲ್ಲಿ ಉಣಬಡಿಸುತ್ತೇವೆ' ಎಂದಿದ್ದಾರೆ. ಇನ್ನೊಬ್ಬರು, 'ಸಬಾ ನಖ್ವಿ ಈ ಮೂಲಕ ಸ್ವಯಂ ಗುರಿಯಾಗುತ್ತಿದ್ದಾರೆ. ಈಸ್ಟರ್ನ್ ಮಸಾಲ ಕಂಪೆನಿಯು ಕೊಚ್ಚಿ ಮೂಲದ ಮುಸ್ಲಿಂ ಕುಟುಂಬದ ಮೀರನ್ ಅವರ ಒಡೆತನದ್ದು. ಇದಕ್ಕೂ ಬಿಜೆಪಿ, ಆರ್ಎಸ್ಎಸ್ ಗೂ ಯಾವುದೇ ಸಂಬಂಧವಿಲ್ಲ. ಈಸ್ಟರ್ನ್ ಬೀಫ್ ಮಸಾಲವನ್ನೂ ಮಾರುಕಟ್ಟೆಗೆ ಬಿಟ್ಟಿದೆ. ಈ ಕಂಪೆನಿಯನ್ನು ಬಹಿಷ್ಕಾರ ಮಾಡಬೇಕೆ' ಎಂದು ಪ್ರಶ್ನಿಸಿದ್ದಾರೆ.
ಹಲವರು, 'ಭಾರತ ವೈವಿಧ್ಯಮಯ ದೇಶ. ಇಲ್ಲಿ ಹಲವು ಜಾತಿ, ಧರ್ಮಗಳಿವೆ. ಒಂದೊಂದು ಜಾತಿಯಲ್ಲೂ ಒಂದೊಂದು ವಿಶೇಷತೆಗಳಿವೆ. ನಾವು ಎಲ್ಲಾ ಜಾತಿಯವರ ಅಡುಗೆಯ ರುಚಿ ನೋಡಲು ಬಯಸುತ್ತೇವೆ. ಈಸ್ಟರ್ನ್ ಸಾಂಬಾರ್ ಪುಡಿಯ ಮೇಲೆ ಬ್ರಾಹ್ಮಿನ್ ಅಂತಿರುವುದಕ್ಕೂ, ಅನಂತಕುಮಾರ ಹೆಗಡೆ ಅವರನ್ನು ಇಲ್ಲಿ ಎಳೆದು ತರುವುದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ನಖ್ವಿಗೆ ಪಾಠ ಮಾಡಿದ್ದಾರೆ.