ತಂದೆಯ ಪಾರ್ಶ್ವವಾಯು ಚಿಕಿತ್ಸೆಗೆ ತೆರಳಿದ ಮಗಳಿಗೂ ಇಂಜಕ್ಸನ್: ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವು!
ಕಾರವಾರ, ಜೂನ್ 20: ಗೋವಾಗೆ ಪ್ರವಾಸಕ್ಕೆ ಬಂದವರು ಪಾರ್ಶ್ವವಾಯು ಚಿಕಿತ್ಸೆ ಪಡೆದುಕೊಂಡಿದ್ದ ತಂದೆಯನ್ನು ಪುನಃ ವೈದ್ಯರ ಬಳಿ ತೋರಿಸಲು ಕರೆದೊಯ್ದಿದ್ದ ಮಗಳು ತಾನು ಪಾರ್ಶ್ವವಾಯುವಿಗೆ ನೀಡುವ ಇಂಜಕ್ಸನ್ ಮುಂಜಾಗ್ರತೆಗಾಗಿ ಪಡೆದು ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಕಾರವಾರದಲ್ಲಿ ನಡೆದಿದೆ.
ಗ್ರಹಚಾರ ಕೆಟ್ಟಿದ್ದರೆ ಸಾವು ಹೇಗೆ ಬೇಕಾದರು ಹುಡುಕಿ ಬರಬಹುದು ಎಂಬುದಕ್ಕೆ ಕಾರವಾರ ತಾಲೂಕಿನ ಹಳಗಾದ ಸೇಂಟ್ ಮೇರಿಸ್ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಘಟನೆಯೊಂದು ಸಾಕ್ಷಿಯಾಗಿದೆ. ಘಟನೆಯಲ್ಲಿ ಕೊಪ್ಪಳ ಮೂಲದ ಸ್ವಪ್ನ ರಾಯ್ಕರ್ ( 32) ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಗಿರುವ ಆರೋಪ ಕೇಳಿಬಂದಿದೆ.

ಕುಟುಂಬದ ಜೊತೆ ಗೋವಾ ಹಾಗೂ ಉತ್ತರ ಕನ್ನಡ ಪ್ರವಾಸಕ್ಕಾಗಿ ಆಗಮಿಸಿದ್ದ ಮೃತ ಮಹಿಳೆ ಗೋವಾದ ಕಾಮಾಕ್ಷಿ ದೇವಸ್ಥಾನಕ್ಕೆ ತೆರಳಿ ಸೋಮವಾರ ಕಾರವಾರಕ್ಕೆ ಆಗಮಿಸಿದ್ದರು. ಇನ್ನು ಮಹಿಳೆಯ ತಂದೆಗೆ ಎರಡು ವರ್ಷದ ಹಿಂದೆ ಪ್ಯಾರಲಿಸೀಸ್ ಆಗಿದ್ದು, ಹಳಗ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆದಿದ್ದರು.
ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ತಂದೆಗೆ ಆರೋಗ್ಯವನ್ನು ವೈದ್ಯರ ಬಳಿ ತೋರಿಸಲು ಮಹಿಳೆ ಮುಂದಾಗಿದ್ದರು. ಇದೇ ವೇಳೆ ಮಹಿಳೆ ಬೆನ್ನು ನೋವಿನ ಹಿನ್ನೆಲೆಯಲ್ಲಿ ತಾನು ವೈದ್ಯರ ಬಳಿ ತೋರಿಸಲು ಮುಂದಾಗಿದ್ದು, ಈ ವೇಳೆ ಪ್ಯಾರಲಿಸೀಸ್ಗೆ ಮುಂಜಾಗೃತೆಗಾಗಿ ಇಂಜೆಕ್ಷನ್ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದರು ಎನ್ನಲಾಗಿದೆ.
ಅದರಂತೆ ವೈದ್ಯರ ಸೂಚನೆ ಮೇರೆಗೆ ಮಹಿಳೆ ಇಂಜೆಕ್ಷನ್ ಪಡೆದಿದ್ದು ಇಂಜೆಕ್ಷನ್ ಪಡೆದು ಒಂದೇ ನಿಮಿಷದಲ್ಲಿ ಕೂಗಿ ಕುಸಿದು ಬಿದ್ದಿದ್ದಳು. ತಕ್ಷಣ ಆಕೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಲು ಮುಂದಾಗಿದ್ದರು. ಆದರೆ ಕುಸಿದು ಬಿದ್ದ ವೇಳೆಯಲ್ಲಿಯೇ ಮಹಿಳೆಯ ಮೆದುಳು ನಿಷ್ಕ್ರಿಯವಾಗಿದ್ದು ಮಹಿಳೆ ಮೃತಪಟ್ಟಿರುವುದಾಗಿ ಆಸ್ಪತ್ರೆಯಲ್ಲಿ ತಿಳಿಸಿದ್ದರು.

ಮಹಿಳೆ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಹಿಳೆ ದೇಹವನ್ನು ಹಿಡಿದುಕೊಂಡು ತಾಯಿ, ತಂದೆ ಅಳುವ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ತರಿಸುವಂತೆ ಮಾಡಿತ್ತು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರು ಸುಮ್ಮನೇ ಇಂಜೆಕ್ಷನ್ ತೆಗದುಕೊಂಡು ಸಾವು ತಂದು ಕೊಂಡೆವು ಎಂದು ಕುಟುಂಬಸ್ಥರು ರೋದಿಸಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಮೃತ ಮಗಳ ತಂದೆ ಕೇಶವ ಪಾವಸ್ಕರ್, ನನಗೆ ಅನಾರೋಗ್ಯ ಹಿನ್ನಲೆಯಲ್ಲಿ ಆಸ್ಪತ್ರೆಗೆ ಬಂದಿದ್ದೆ. ಬೆನ್ನು ನೋವು ಎಂದು ಮಗಳು ವೈದ್ಯರ ಬಳಿ ತೋರಿಸಿದಾಗ ವೈದ್ಯರು ಇಂಜೆಕ್ಷನ್ ತೆಗೆದುಕೊಳ್ಳುವಂತೆ ತಿಳಿಸಿದ್ದರು. ಅದರಂತೆ ತೆಗೆದುಕೊಳ್ಳುತ್ತಿದ್ದಂತೆ ಪಪ್ಪಾ ಎಂದು ಕೂಗಿ ಕುಸಿದು ಬಿದ್ದಳು.
ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ವೈದ್ಯರೇ ಇಂಜೆಕ್ಷನ್ ತೆಗೆದುಕೊಳ್ಳಿ ಎಂದು ಹೇಳಿದ್ದಕ್ಕೆ ಮುಂದಾಗಿದ್ದು ನಂತರ ಅವರೇ ಅಂಬ್ಯುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ತಂದಿದ್ದಾರೆ. ಕೂಡಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮಗಳ ಸಾವಿಗೆ ಕಾರಣರಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇನ್ನು ಸೇಂಟ್ ಮೇರಿಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ 32 ವರ್ಷದ ಪ್ರತಿಭಾವಂತ ಮಹಿಳೆ ಸಾವನ್ನಪ್ಪಿದ್ದಾಳೆ. ಈ ಆಸ್ಪತ್ರೆಗೆ ಹೊರ ಜಿಲ್ಲೆ ಹೊರ ರಾಜ್ಯದಿಂದ ಹಲವರು ಬಂದು ಪ್ಯಾರಲಿಸೀಸ್ ಎಂದು ಚಿಕಿತ್ಸೆ ಪಡೆಯುತ್ತಾರೆ. ಕೆಲವರು ಗುಣಮುಖರಾಗಿ ಹೋಗುತ್ತಾರೆ. ಆದರೆ ಹಳಗ ಆಸ್ಪತ್ರೆಯಲ್ಲಿ ಸ್ಟಿರಾಯ್ಡ್ ಕೊಡುತ್ತಾರೆನ್ನುವ ಆರೋಪವಿದೆ.
ಈ ಹಿಂದೆ ಸಹ ಸಾವುಗಳಾಗಿದ್ದು ಕೆಲವರು ದೂರು ಕೊಡದೇ ಸುಮ್ಮನೇ ಹೋಗುತ್ತಾರೆ. ಸ್ವಪ್ನ ರಾಯರ್ಗೆ ವೈದ್ಯರು ಯಾವುದೇ ಸಮಸ್ಯೆ ಇಲ್ಲದಿದ್ದರು ಇಂಜೆಕ್ಷನ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದರಿಂದ ತೆಗೆದುಕೊಂಡು ಮೃತಪಟ್ಟಿದ್ದಾರೆ. ಈ ಹಿಂದೆ ಸಹ ತಾನು ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದೆ. ಪ್ಯಾರಲಿಸೀಸ್ಗೆ ಸರಿಯಾದ ಚಿಕಿತ್ಸೆ ಕೊಡುವುದಾದರೆ ಸೈಂಟ್ ಮೇಲಿಸ್ ಆಸ್ಪತ್ರೆಯಲ್ಲಿ ಕೊಡುವ ಚಿಕಿತ್ಸೆ ಎಲ್ಲಾ ಆಸ್ಪತ್ರೆಯಲ್ಲೂ ಕೊಡುವಂತೆ ಆಗ್ರಹಿಸಿದ್ದೆ.
ಆದರೆ ಯಾರು ಕ್ರಮ ಕೈಗೊಂಡಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲದಿದ್ದರೇ ಬಂದ್ ಮಾಡುವಂತೆ ಆಗ್ರಹಿಸಿದ್ದರು ಕ್ರಮ ಕೈಗೊಂಡಿಲ್ಲ. ಮಹಿಳೆ ಸಾವಿಗೆ ಜಿಲ್ಲಾಡಳಿತವೂ ಕಾರಣವಾಗಲಿದ್ದು, ಈಗಲಾದರೂ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಮಾಧವ ನಾಯಕ ಆಗ್ರಹಿಸಿದ್ದಾರೆ.
ಇನ್ನು ಹಳಗ ಆಸ್ಪತ್ರೆಗೆ ಕದ್ರಾ ಸಿಪಿಐ ಗೋವಿಂದ ದಾಸರಿ, ಚಿತ್ತಾಕುಲ ಠಾಣಾ ಪಿ.ಎಸ್.ಐ ಮಹಾಂತೇಶ್ ಬಿ.ವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.












Click it and Unblock the Notifications