ರಾಜಕಾರಣ ಸೇರುವ ಯಾವ ಪ್ರಸ್ತಾವವೂ ನನ್ನ ಮುಂದಿಲ್ಲ: ಕೋಣೆಮನೆ
ಕಾರವಾರ, ನವೆಂಬರ್ 16: ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಒಡೆತನದ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿವಾಹಿನಿಯ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಂತೆ?!
-ಹೀಗಂತ ಸುದ್ದಿಯೊಂದು ಕೆಲ ದಿನಗಳಿಂದ ಉತ್ತರಕನ್ನಡ ಜಿಲ್ಲೆಯಾದ್ಯಂತ ಸದ್ದು ಮಾಡುತ್ತಿತ್ತು. ಆದರೀಗ ಅದಕ್ಕೆ ಪುಷ್ಟಿ ನೀಡುವಂತೆ ವಿಜಯವಾಣಿ ಹಾಗೂ ದಿಗ್ವಿಜಯ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಹುದ್ದೆಗೆ ಹರಿಪ್ರಕಾಶ್ ಕೋಣೆಮನೆ ರಾಜೀನಾಮೆ ನೀಡಿದ್ದಾರೆ. ಆದರೆ ನಿರ್ದೇಶಕ ಮಂಡಳಿಯಲ್ಲಿ ಮುಂದುವರಿಯಲಿದ್ದಾರೆ.
ಈ ಬಾರಿ ಸೋತರೆ ನಾನು ಬದುಕೋದಿಲ್ಲ ಎಂದು ಕಣ್ಣೀರಿಟ್ಟ ಮಾಜಿ ಸಚಿವ
ದಿಗ್ವಿಜಯ ವಾಹಿನಿಯ ಸಂಪಾದಕ ಎಂ.ಎಸ್. ಶರತ್ ಗೆ ಸಂಸ್ಥೆಯು ರಾಜೀನಾಮೆ ನೀಡಲು ಸೂಚಿಸಲಾಗಿತ್ತು. ಹೀಗಾಗಿ ಇದರಿಂದಾಗಿ ನೊಂದು ಕೋಣೆಮನೆ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಒಂದು ಮೂಲ ಹೇಳಿದರೆ, ಇನ್ನೊಂದು ಕಡೆಯಿಂದ ಅವರು ಯಲ್ಲಾಪುರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಗಾಳಿಯಲ್ಲಿ ತೇಲಿಬಿಟ್ಟ ಸುದ್ದಿ ಹರಿದಾಡುತ್ತಿದೆ.
ಸಿಎಂ ಅಭ್ಯರ್ಥಿಯೆಂದು ಹರಿದಾಡುತ್ತಿದ್ದ ಸುದ್ದಿಗೆ ಅನಂತ್ ಕುಮಾರ್ ಹೆಗಡೆ ಸ್ಪಷ್ಟನೆ
ಆದರೆ, ಶರತ್ ಹಾಗೂ ಕೋಣೆಮನೆ ಇಬ್ಬರ ರಾಜೀನಾಮೆಗಳನ್ನು ಸಂಸ್ಥೆ ಇನ್ನೂ ಅಂಗೀಕಾರ ಮಾಡಿಲ್ಲ ಎಂದು ಕೂಡ ಹೇಳಲಾಗುತ್ತಿದೆ.
ಬಿಜೆಪಿಯಿಂದ ಅನಂತಕುಮಾರ್ ಹೆಗಡೆ ಸಿಎಂ ಎಂದು ತೇಲಿ ಬಿಟ್ಟಿದ್ಯಾಕೆ?
ರಾಜೀನಾಮೆ ನೀಡಿರುವ ಕುರಿತು ಎಲ್ಲಿಯೂ ಹೇಳಿಕೊಳ್ಳದ ಕೋಣೆಮನೆ, ಫೇಸ್ ಬುಕ್ ನಲ್ಲಿ 'ವಿಜಯವಾಣಿ ಹಾಗೂ ದಿಗ್ವಿಜಯದ ಪ್ರೀತಿಯ ಸಹೋದ್ಯೋಗಿ ಬಂದುಗಳಿಗೆ ಆತ್ಮೀಯ ವಿದಾಯ...' ಅಂತ ಬರೆದುಕೊಂಡಿದ್ದಾರೆ. ಈ ಬಗ್ಗೆ ಅದೇ ಪೋಸ್ಟ್ಗೆ ಕಮೆಂಟ್ ಮಾಡಿರುವ ಅವರ ಸಹೋದ್ಯೋಗಿಗಳು, ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ದಂಡು
ಸದ್ಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂದು ಪಕ್ಷ ಈವರೆಗೂ ಸುಳಿವು ಬಿಟ್ಟುಕೊಟ್ಟಿಲ್ಲ. ಮಾಜಿ ಶಾಸಕ ವಿ.ಎಸ್.ಪಾಟೀಲ್, ಕಾಂಗ್ರೆಸ್ನಿಂದ ಬಿಜೆಪಿ ಸೇರಿದ ಹಿರಿಯ ರಾಜಕಾರಣಿ ಪ್ರಮೋದ ಹೆಗಡೆ, ಇತ್ತೀಚಿಗೆ ಕಾಂಗ್ರೆಸ್ನಿಂದ ಬಿಜೆಪಿ ಸೇರಿರುವ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ್, ಯಲ್ಲಾಪುರ ಬಿಜೆಪಿ ತಾಲ್ಲೂಕಾಧ್ಯಕ್ಷ ರಾಮು ನಾಯ್ಕ, ಹರಿಪ್ರಕಾಶ್ ಕೋಣೆಮನೆಯವರ ಸಹೋದರ ನರಸಿಂಹ ಕೋಣೆಮನೆ ಯಲ್ಲಾಪುರ ಕ್ಷೇತ್ರದ ಬಿಜೆಪಿಯ ಸದ್ಯದ ಟಿಕೆಟ್ ಆಕಾಂಕ್ಷಿಗಳು ಎಂದು ಹೆಸರು ಹರಿದಾಡುತ್ತಿದೆ.
ಸ್ವಯಂ ಪ್ರಭಾವ ಹೊಂದಿದ ಅಭ್ಯರ್ಥಿಗೆ ಹುಡುಕಾಟ
ಕಳೆದ ನಾಲ್ಕೂವರೆ ವರ್ಷದಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ಕೆಲಸಗಳ ಮೂಲಕ ಕ್ಷೇತ್ರದಲ್ಲಿ ತನ್ನ ಬೇರುಗಳನ್ನು ಗಟ್ಟಿ ಮಾಡಿಕೊಂಡಿರುವ ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಎದುರಿಸಲು ಸ್ವಯಂ ಪ್ರಭಾವ ಹೊಂದಿರುವ ಹೊಸ ಮುಖದ ಅಗತ್ಯ ಬಿಜೆಪಿ ಪಕ್ಷಕ್ಕಿದೆ. ಹೀಗಾಗಿ ಹರಿಪ್ರಕಾಶ ಕೋಣೆಮನೆ ಅವರನ್ನೇ ಬಿಜೆಪಿ ಅಭ್ಯರ್ಥಿ ಎಂದು ಪಕ್ಷದ ವರಿಷ್ಠರು ಗುರುತಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಯಡಿಯೂರಪ್ಪ ಭೇಟಿ ಮಾಡಿದ ಕೋಣೆಮನೆ
ವೈಯಕ್ತಿಕ ಕಾರ್ಯಕ್ಕಾಗಿ ಮಂಗಳವಾರ ಯಲ್ಲಾಪುರದ ನಂದೊಳ್ಳಿ ಗ್ರಾಮಕ್ಕೆ ಆಗಮಿಸಿದ್ದ ಹರಿಪ್ರಕಾಶ್ ಕೋಣೆಮನೆ, ಜಿಲ್ಲೆಗೆ ಪರಿವರ್ತನಾ ಯಾತ್ರೆ ಮೂಲಕ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ತರಾತುರಿಯಲ್ಲಿ ಭೇಟಿ ಮಾಡಿ, ನಂತರ ಬೆಂಗಳೂರಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಹೆಬ್ಬಾರ್ ಎದುರಿಸಲು ಸಮರ್ಥ ಅಭ್ಯರ್ಥಿ
ಬಿಜೆಪಿಯಿಂದ ಯಲ್ಲಾಪುರ ವಿಧಾನಸಭೆ ಕ್ಷೇತ್ರಕ್ಕೆ ಹರಿಪ್ರಕಾಶ್ ಕೋಣೆಮನೆ ಅವರಿಗೆ ಟಿಕೆಟ್ ನಿಶ್ಚಿತವಾದಲ್ಲಿ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಎದುರಿಸಲು ಸಮರ್ಥ ಅಭ್ಯರ್ಥಿ ಎಂದೇ ಸಾಮಾಜಿಕ ಜಾಲತಾಣಗಳ ಮೂಲಕ ಬಣ್ಣಿಸಲಾಗುತ್ತಿದೆ. ಡಿಸೆಂಬರ್ 17ರಂದು ಅಧಿಕೃತವಾಗಿ ಅಭ್ಯರ್ಥಿಯ ಹೆಸರು ಪ್ರಕಟವಾಗಲಿದೆ ಎಂದು ಬಿಜೆಪಿಯ ಮೂಲಗಳಿಂದ ತಿಳಿದು ಬಂದಿದೆ.
ಹರಿಪ್ರಕಾಶ್ ಕೋಣೆಮನೆ ಪರಿಚಯ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಕೃಷಿಕ ವೆಂಕಟರಮಣ ಕೋಣೆಮನೆ ಹಾಗೂ ಪಾರ್ವತಿಯವರ ಮಗ ಹರಿಪ್ರಕಾಶ್ ಕೋಣೆಮನೆ, ಹೈಸ್ಕೂಲ್ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಊರು ನಂದೊಳ್ಳಿ ಮತ್ತು ಯಲ್ಲಾಪುರದಲ್ಲಿ ಮುಗಿಸಿದರು. ಬಳಿಕ ಶಿರಸಿಯ ಎಂಎಂ ಆರ್ಟ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ಬಿ.ಎ ಪದವಿ ಮುಗಿಸಿದರು. ಬಳಿಕ ಮೈಸೂರು ವಿ.ವಿಯಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪದವಿ ಗಳಿಸಿದರು.
ಸಂಯುಕ್ತ ಕರ್ನಾಟಕದಿಂದ ಪತ್ರಿಕೋದ್ಯಮ ಆರಂಭ
2002ರಲ್ಲಿ ಸಂಯುಕ್ತ ಕರ್ನಾಟಕದ ಮೂಲಕ ಪತ್ರಿಕೋದ್ಯಮದಲ್ಲಿ ಪೂರ್ಣಕಾಲಿಕವಾಗಿ ತೊಡಗಿಸಿಕೊಂಡರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ವೃತ್ತಿಪರ ಪತ್ರಿಕೋದ್ಯಮ ಶುರು ಮಾಡಿದ ಅವರು ಕೆಲವೇ ತಿಂಗಳಲ್ಲಿ ಎಲ್ಲ ಆವೃತ್ತಿಗಳ ಸುದ್ದಿ ಸಮನ್ವಯಕಾರರಾಗಿ ಬಡ್ತಿ ಪಡೆದರು. 2005ರಲ್ಲಿ ಉಷಾ ಕಿರಣ ದಿನಪತ್ರಿಕೆ ಆರಂಭಿಸಿದಾಗ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾಗಿ ನೇಮಕಗೊಂಡರು.
ದಿಗ್ವಿಜಯ ಹಾಗೂ ವಿಜಯವಾಣಿ ಎರಡರ ಹೊಣೆ
ಆ ಬಳಿಕ ಟೈಮ್ಸ್ ಆಫ್ ಇಂಡಿಯಾ ಕನ್ನಡ ದಿನ ಪತ್ರಿಕೆಯ ಬೆಂಗಳೂರು ಬ್ಯೂರೋ ಮುಖ್ಯಸ್ಥರಾಗಿ, 2008ರಲ್ಲಿ ಪುನಃ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸೇರಿ, 2010ರಲ್ಲಿ ಉದಯವಾಣಿ ಪತ್ರಿಕೆಯ ಬೆಂಗಳೂರು ಆವೃತ್ತಿಯ ಸುದ್ದಿ ಸಂಪಾದಕರಾಗಿ, 2011ರಲ್ಲಿ ವಿಜಯವಾಣಿ ಪತ್ರಿಕೆಯ ಸಹಾಯಕ ಸಂಪಾದಕರಾಗಿ, 2014ರಲ್ಲಿ ಪ್ರಧಾನ ಸಂಪಾದಕರಾಗಿ, ವಿಆರ್ಎಲ್ ಮೀಡಿಯಾ ನಿರ್ದೇಶಕರಾಗಿ, ಬಳಿಕ ದಿಗ್ವಿಜಯ ಹಾಗೂ ವಿಜಯವಾಣಿ ಎರಡರ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಈ ಕ್ಷಣದವರೆಗೆ ನನ್ನ ಮುಂದೆ ಅಂಥ ಪ್ರಸ್ತಾವ ಇಲ್ಲ
ಹರಿಪ್ರಕಾಶ್ ಕೋಣೆಮನೆ ಅವರನ್ನು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ "ಈ ಕ್ಷಣದವರೆಗೆ ನನ್ನ ಮುಂದೆ ಅಂಥ ಯಾವ ಪ್ರಸ್ತಾವವೂ ಇಲ್ಲ. ಮೂಲಭೂತವಾಗಿ ನಾನೊಬ್ಬ ಪತ್ರಕರ್ತ. ನನ್ನ ಆದ್ಯತೆ ಪತ್ರಿಕೋದ್ಯಮಕ್ಕೇ. ರಾಷ್ಟ್ರೀಯತೆಯನ್ನು ಗೌರವಿಸುವ ವ್ಯಕ್ತಿ ನಾನು. ಹೀಗಿರುವಾಗ ಈ ರೀತಿಯ ವದಂತಿ ಹರಡುತ್ತವೆ. ಆದರೆ ರಾಜಕಾರಣ ಸೇರುವ ಹಾಗೂ ಬಿಜೆಪಿಯಿಂದ ಸ್ಪರ್ಧಿಸುವ ಯಾವ ವಿಚಾರವೂ ಇಲ್ಲ".
"ಕೌಟುಂಬಿಕ ಸಮಸ್ಯೆ ಇರುವ ಕಾರಣಕ್ಕೆ, ಕೆಲ ಕಾಲ ಬಿಡುವು ಬೇಕು ಅಂದುಕೊಂಡು ವಿಜಯವಾಣಿ ಹಾಗೂ ದಿಗ್ವಿಜಯ ಸಂಪಾದಕತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಸದ್ಯಕ್ಕೆ ಕೆಲವು ಕಾಲ ವಿಶ್ರಾಂತಿ ಬೇಕಿದೆ. ಆ ನಂತರ ನನ್ನ ವೃತ್ತಿ ಮುಂದುವರಿಸುತ್ತೇನೆ" ಎಂದು ಪ್ರತಿಕ್ರಿಯೆ ನೀಡಿದರು.