"ನಾಚಿಕೆ ಆಗೋದಿಲ್ವಾ ನಿಮಗೆ" ಎಂದು ಸಿದ್ದು ಗುಡುಗಿದ್ದು ಯಾರ ಮೇಲೆ?
ಯಲ್ಲಾಪುರ/ಮುಂಡಗೋಡ: 'ಹದಿನೈದು ಕ್ಷೇತ್ರದಲ್ಲಿ ಈಗಾಗಲೇ ಗೆಲುವು ಸಾಧಿಸಿದ್ದೇವೆ ಎನ್ನುವ ಯಡಿಯೂರಪ್ಪ, ಮತ್ಯಾಕೆ ಚುನಾವಣೆಯಲ್ಲಿ ಓಡಾಡಬೇಕು? ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿಕೊಂಡು ಯಾಕೆ ಓಡಾಡುತ್ತಿದ್ದಾರೆ? ಜನರೇನು ಅವರ ಜೇಬಿನಲ್ಲಿ ಇದ್ದಾರೋ. ಗೆದ್ದಾದ ಮೇಲೆ ಮನೆಯಲ್ಲಿ ಕುಳಿತಿರಬೇಕು ಅಲ್ವಾ? ಇನ್ಯಾಕೆ ಬಂದು ಪ್ರಚಾರ ಮಾಡಬೇಕಿತ್ತು?' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಯಲ್ಲಾಪುರ ತಾಲೂಕಿನ ಕಿರುವತ್ತಿ ಗ್ರಾಮದಲ್ಲಿ ಹಾಗೂ ಮುಂಡಗೋಡ ತಾಲೂಕಿನ ಇಂದೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
'ಪ್ರವಾಹ ಬಂದಾಗ ಯಡಿಯೂರಪ್ಪನವರಿಗೆ ಇಲ್ಲಿಗೆ ಬರಲಿಕ್ಕಾಗಲಿಲ್ಲ. ಈಗ ಪ್ರಚಾರಕ್ಕೆ ಬಂದಿದ್ದಾರೆ. ಜನರಿಂದ ಮತ ಕೇಳಲು ಬಂದಿದ್ದಾರೆ. ನಾಚಿಕೆ ಆಗೋದಿಲ್ವಾ ನಿಮಗೆ. ಸಂತ್ರಸ್ತರಿಗೆ ಪರಿಹಾರ ಇನ್ನೂ ಸರಿಯಾಗಿ ಕೊಟ್ಟಿಲ್ಲ. ಈ ಉಪಚುನಾವಣೆ ನಿಮಗೆ ಬೇಕಾಗಿತ್ತಾ? ಪ್ರಜಾಪ್ರಭುತ್ವದ ಮೇಲೆ ಇವರಿಗೆ ನಂಬಿಕೆಯೇ ಇಲ್ಲ. ಡಿಸೆಂಬರ್ 5ಕ್ಕೆ ಉಪಚುನಾವಣೆ ನಡೆಯುತ್ತಿದೆ. ಚುನಾವಣೆ ಏತಕ್ಕಾಗಿ ಬಂದಿದೆ? ಯಾರು ಕಾರಣ? 2018ರ ಮೇನಲ್ಲಿ ಚುನಾವಣೆ ನಡೆದಿತ್ತು. ಒಂದೂವರೆ ವರ್ಷದೊಳಗೆ ಮತ್ತೆ ಚುನಾವಣೆ ಬಂದಿದೆ. ಅನರ್ಹ ಶಾಸಕ ಹೆಬ್ಬಾರ್ ಈಗ ಅನರ್ಹರಾಗಿದ್ದಾರೆ. ಅನರ್ಹ ಎಂದರೆ ನೀವು ಎಂಎಲ್ ಎ ಆಗೋದಕ್ಕೆ ನಾಲಾಯಕ್ ಎಂದರ್ಥ' ಎಂದರು.

'ರಾಜೀನಾಮೆ ಕೊಡುವಾಗ ಮತದಾರರ ಬಳಿ ಕೇಳಿದ್ರಾ? ಮತದಾರರಿಗೆ ಗೌರವ ಕೊಟ್ಟಿಲ್ಲ. ಅಗೌರವ ಕೊಟ್ಟ ಹೆಬ್ಬಾರ್ ಗೆ ಮತ ಹಾಕಬೇಡಿ. ಸ್ಪೀಕರ್ ಕೊಟ್ಟ ಅನರ್ಹತೆ ತೀರ್ಪಿಗೆ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಸಹ ಅನರ್ಹ ಎಂದು ಹೇಳಿದೆ. ಈ ಆಪಾದನೆ ಹೊತ್ತಿದ್ದ ಹೆಬ್ಬಾರ್ ಗೆ ಮಾನ ಮರ್ಯಾದೆ ಇದೆಯೇ? ಯಲ್ಲಾಪುರ ಕ್ಷೇತ್ರಕ್ಕೆ ಏನಾದರು ಅನುದಾನ ಕೊಟ್ಟಿದ್ರೆ ಅದು ನಾನು, ದೇಶಪಾಂಡೆ ಹೊರತು ಹೆಬ್ಬಾರ್ ಅಲ್ಲ. ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ರನ್ನ ಮತ್ತೆ ಅಸೆಂಬ್ಲಿಗೆ ಕಳುಹಿಸಬೇಡಿ' ಎಂದು ಕರೆ ನೀಡಿದರು.
ಹೆಗಡೆ ಗ್ರಾ.ಪಂ. ಸದಸ್ಯನಾಗೋಕೂ ನಾಲಾಯಕ್!: 'ಅನಂತಕುಮಾರ್ ಗ್ರಾಮಪಂಚಾಯತ್ ಸದಸ್ಯನಾಗೋದಕ್ಕೂ ನಾಲಾಯಕ್. ಸಂವಿಧಾನವೇ ಅವನಿಗೆ ಗೊತ್ತಿಲ್ಲ' ಎಂದು ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಸಿದ್ದರಾಮಯ್ಯ ಅವರು ಕಿಡಿಕಾರಿದರು.
'ಸಿದ್ದರಾಮಯ್ಯ ಸಹ ಬಿಜೆಪಿ ಸೇರಲು ಕ್ಯೂನಲ್ಲಿ ನಿಂತಿದ್ದಾರೆ ಎನ್ನುವ ಸಂಸದ ಅನಂತಕುಮಾರ್ ಹೆಗಡೆ ಹುಚ್ಚ. ಅವರ ಪ್ರಶ್ನೆಗೆ ಉತ್ತರ ಕೊಡೋಕೆ ಆಗುತ್ತಾ? ಅವನು ನಾರ್ಮಲ್ ಆಗಿ ಇರ್ತಾನೋ ಇಲ್ಲೋ ಗೊತ್ತಿಲ್ಲ. ನನ್ನ ಹೋರಾಟವೇ ಕೋಮುವಾದಿ, ಜಾತಿವಾದಿಗಳ ವಿರುದ್ಧ. ನಾನು ಸತ್ತ ಮೇಲೆ ನನ್ನ ಹೆಣ ಸಹ ಅವರ ಕಡೆ ಹೋಗೋದಿಲ್ಲ' ಎಂದರು.
ನಾಟಿಕೋಳಿ, ಮುದ್ದೆ ಸಾರು ಸವಿದ ಸಿದ್ದಣ್ಣ: ಮುಂಡಗೋಡ ತಾಲೂಕಿನ ನರ್ಸಾ ಬೋವಿ ಎನ್ನುವವರ ಮನೆಯಲ್ಲಿ ಸಿದ್ದರಾಮಯ್ಯನವರು ಮಧ್ಯಾಹ್ನದ ಭೋಜನ ಸವಿದರು. ಅವರಿಗಾಗಿಯೇ ಮನೆಯಲ್ಲಿ ನಾಟಿ ಕೋಳಿಯ ಸಾರು, ಮುದ್ದೆ ಊಟ ಸಿದ್ಧಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಗೆ ಹೋಳಿಗೆ ತಿನ್ನಿಸಿದರು.
ಮಾಜಿ ಸಚಿವರಾದ ಪ್ರಮೋದ ಮಧ್ವರಾಜ್, ಆರ್.ವಿ.ದೇಶಪಾಂಡೆ, ಅಭ್ಯರ್ಥಿ ಭೀಮಣ್ಣ ನಾಯ್ಕ, ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್, ಮಾಜಿ ಶಾಸಕ ಸತೀಶ್ ಸೈಲ್ ಸೇರಿದಂತೆ ಅನೇಕರು ಇದ್ದರು.












Click it and Unblock the Notifications