"ನಾವು ಅತೃಪ್ತರಲ್ಲ; ಅಸಹಾಯಕರು" ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್
ಕಾರವಾರ, ಜುಲೈ 25: "ಕ್ಷೇತ್ರದ ಜನತೆಗೆ ನ್ಯಾಯ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಸಹಾಯಕರಾಗಿ ರಾಜೀನಾಮೆ ನೀಡಿದ್ದೇವೆ. ಹೀಗಾಗಿ, ನಾವು ಅತೃಪ್ತರಲ್ಲ; ಅಸಹಾಯಕರು" ಎಂದಿದ್ದಾರೆ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್.
ಗುರುವಾರ ಯಲ್ಲಾಪುರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, "ರಾಜೀನಾಮೆ ನೀಡಿರುವವರಲ್ಲಿ ಎಲ್ಲರೂ ಹಿರಿಯ ಶಾಸಕರೇ ಇದ್ದಾರೆ. ಮೊದಲ ಬಾರಿ ಶಾಸಕರಾದವರು ಯಾರೂ ಇಲ್ಲ. ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆಯೇ ಹೊರತು ಪಕ್ಷಕ್ಕಲ್ಲ. ನಾವು ಇಂತಹ ದೊಡ್ಡ ನಿರ್ಣಯವನ್ನು ಒಂದು ದಿನದಲ್ಲಿ ಕೈಗೊಂಡಿಲ್ಲ. ಬಹು ದಿನಗಳಿಂದ ಅಸಹಾಯಕತೆ ಅನುಭವಿಸಿ, ಅದು ಮಿತಿ ಮೀರಿದ ನಂತರ ಈ ನಿರ್ಣಯಕ್ಕೆ ಬಂದಿದ್ದೇವೆ. 20 ಶಾಸಕರ ರಾಜೀನಾಮೆ ಸಣ್ಣದಲ್ಲ. ಪರಿಸ್ಥಿತಿ ಕೈ ಮೀರಿ ಹೋಗುತ್ತದೆ ಎಂದಾಗ ಒಟ್ಟಾಗಿ ರಾಜೀನಾಮೆ ನಿರ್ಣಯಕ್ಕೆ ಬಂದೆವು" ಎಂದು ವಿವರಿಸಿದರು.
"ನಾವೆಲ್ಲಾ ಒಟ್ಟಾಗಿದ್ದು, ನಿರ್ಣಯಕ್ಕೆ ಅಚಲರಾಗಿದ್ದೇವೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಜನತೆ ಮೇಲೆ ವಿಶ್ವಾಸವಿದೆ. ಅವರು ಪರಿಸ್ಥಿತಿಯನ್ನು ಅರಿಯುತ್ತಾರೆ ಎಂಬ ನಂಬಿಕೆ ಇದೆ" ಎಂದರು.

"ನಾವಿನ್ನೂ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಯಾವುದೇ ಪಕ್ಷದ ನಾಯಕರನ್ನೂ ಸಂಪರ್ಕಿಸಿಲ್ಲ. ಸ್ಪೀಕರ್ ಮುಂದೆ ಎರಡು ಪ್ರಶ್ನೆಗಳಿವೆ. ಒಂದು ರಾಜೀನಾಮೆ, ಇನ್ನೊಂದು ಅನರ್ಹತೆ. ಅನರ್ಹರಾಗುವ ಸ್ಥಿತಿಯಲ್ಲಿ ನಾವಿಲ್ಲ. ರಾಜೀನಾಮೆ ಅಂಗಿಕಾರವಾಗಲೇಬೇಕು. ನಂತರ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ" ಎಂದು ಹೇಳಿದರು.












Click it and Unblock the Notifications