ಅಮಾಯಕನಿಗೆ ಥಳಿತ: ಮಾನವೀಯತೆ ಮೆರೆದ ಕುಮಟಾ ಪೊಲೀಸರು
ಕಾರವಾರ, ಜೂನ್.13: ಕುಮಟಾ ತಾಲೂಕಿನ ಅಘನಾಶಿನಿ ಗ್ರಾಮದಲ್ಲಿ ಮಕ್ಕಳ ಕಳ್ಳ ಎಂದು ಅಮಾಯಕ ಯುವಕನೊಬ್ಬನನ್ನು ಸ್ಥಳೀಯರೇ ಹಿಡಿದು ಥಳಿಸಿ, ಪೊಲೀಸರಿಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಮೂಲತಃ ಉತ್ತರ ಪ್ರದೇಶದ ಯುವಕನೊಬ್ಬ ಕುಮಟಾದ ಅಘನಾಶಿನಿಯಲ್ಲಿ ಭಿಕ್ಷೆ ಬೇಡಲು ಬಂದಿದ್ದ. ಆತನ ನಾಲಿಗೆ ಸಹ ತುಂಡಾಗಿದ್ದು, ಮಾತನಾಡಲು ಬರುವುದಿಲ್ಲ. ಹೀಗೆ ಭಿಕ್ಷೆ ಬೇಡುತ್ತಿದ್ದ ವೇಳೆ ಸ್ಥಳೀಯನೊಬ್ಬ ಬಂದು ಯುವಕನನ್ನು ವಿಚಾರಿಸಿದ್ದಾನೆ.
ಆತ ಮಾತನಾಡಲು ಬರದೆ ತೊದಲಿದ್ದಾನೆ. ಈ ವೇಳೆ ಆತನ ಮಾತನಾಡದ್ದನ್ನು ಗಮನಿಸಿ ಅವನ ಬ್ಯಾಗ್ ಅನ್ನು ಪರಿಶೀಲಿಸಲಾಗಿದ್ದು, ಅದರಲ್ಲಿ ನೇಪಾಳಿ ಕರೆನ್ಸಿಗಳು ಪತ್ತೆಯಾಗಿವೆ.
ಇದರಿಂದ ಅನುಮಾನಗೊಂಡ ಸ್ಥಳೀಯ ಕೆಲವರು ಮಕ್ಕಳ ಕಳ್ಳನೆಂದು ಸುಳ್ಳು ಸುದ್ದಿ ಹಬ್ಬಿಸಿ, ಯುವಕನಿಗೆ ಹೊಡೆದಿದ್ದಾರೆ. ಬಳಿಕ ಸ್ಥಳಕ್ಕೆ ವಿಷಯ ತಿಳಿದು ಪೊಲೀಸರು ಆಗಮಿಸಿ, ಆತನ ಬ್ಯಾಗ್ನಲ್ಲಿದ್ದ ದಾಖಲೆಗಳ ಆಧಾರದ ಮೇಲೆ ಆತನ ಸ್ವಗ್ರಾಮದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಈ ವೇಳೆ ಆತ ಅಮಾಯಕ ಅನ್ನುವ ವಿಚಾರ ಗೊತ್ತಾಗಿದೆ.
ಅಸಲಿಗೆ ಕೆಲ ದಿನದ ಹಿಂದೆ ನಡೆದ ಬೆಂಕಿ ಅವಘಡದಲ್ಲಿ ಯುವಕ ತಂದೆ ತಾಯಿಯನ್ನು ಕಳೆದುಕೊಂಡಿದ್ದಾನೆ.
ಓರ್ವ ಸಹೋದರಿ ಮಾತ್ರ ಆತನ ಜೊತೆಯಲ್ಲಿ ಇದ್ದಾಳೆ. ಅವಳಿಗಾಗಿ ಈತ ನೇಪಾಳದ ಗಡಿಯವರೆಗೂ ತಿರುಗಿ ಭಿಕ್ಷೆ ಬೇಡಿ ಬಂದಿದ್ದಾನೆ. ಸಿಕ್ಕ ಸಿಕ್ಕ ರೈಲಿಗೆ ಹತ್ತಿಳಿದು, ವಿವಿಧೆಡೆ ಭಿಕ್ಷೆ ಬೇಡುತ್ತಿದ್ದಾನೆ ಎನ್ನುವುದು ತಿಳಿದು ಬಂದಿದೆ. ಹೀಗಾಗಿ ಅಲ್ಲಿನ ಕರೆನ್ಸಿಗಳನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಈತ ತಿರುಗಾಡುತ್ತಿದ್ದ ಎನ್ನಲಾಗಿದೆ.
ಸಾರ್ವಜನಿಕರಿಂದ ಥಳಿತಕ್ಕೊಳಗಾಗಿದ್ದ ಯುವಕನನ್ನು ಕುಮಟಾ ಪೊಲೀಸರು ಮಾನವೀಯತೆಯಿಂದ ಉಪಚರಿಸಿದ್ದಾರೆ. ಆತನಿಗೆ ಚಿಕಿತ್ಸೆ ಕೊಡಿಸಿ, ಊಟ ತಿಂಡಿ ನೀಡಿದ್ದಾರೆ. ಜತೆಗೆ, ಆತನನ್ನು ರೈಲಿಗೆ ಹತ್ತಿಸಿ ಸ್ವ ಗ್ರಾಮಕ್ಕೆ ತೆರಳಲು ಸಹಾಯ ಮಾಡಿದ್ದಾರೆ.
ಮಕ್ಕಳ ಕಳ್ಳರೆಂದು ಅಮಾಯಕರ ಮೇಲೆ ಹಲ್ಲೆ ಮಾಡದೇ, ಅನುಮಾನ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ನಾವು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಇದರಿಂದ ವದಂತಿ ಹಬ್ಬಿ, ಜನರು ಆತಂಕಪಡುವುದು ಕಡಿಮೆಯಾಗುತ್ತದೆ ಎಂದು ಪೊಲೀಸರು ಕೋರಿದ್ದಾರೆ.