ಅಭಿವೃದ್ಧಿ ಯೋಜನೆಗಳು; ಪರಿಸರವಾದಿಗಳ ವಿರುದ್ಧ ಜನಾಕ್ರೋಶ

ಕಾರವಾರ, ಫೆಬ್ರವರಿ 28: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಪದೇ ಪದೇ ಅರಣ್ಯ ನಾಶ, ವನ್ಯಜೀವ ಸಂಕುಲಗಳಿಗೆ ಮಾರಕ ಎಂಬಿತ್ಯಾದಿ ಕಾರಣವೊಡ್ಡಿ ಪ್ರತಿ ಬಾರಿಯೂ ಕೋರ್ಟ್ ಕದ ತಟ್ಟುತ್ತಿರುವ ಪರಿಸರವಾದಿಗಳು ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಪರಿಸರವಾದಿಗಳ ನಡೆಯ ವಿರುದ್ಧ ಬಹಿರಂಗವಾಗಿ ಜನರು ತಮ್ಮ ಅಸಮಾಧಾನ ಹೊರಹಾಕುತ್ತಿದ್ದಾರೆ.

ಘಟ್ಟದ ಮೇಲ್ಭಾಗದ ತಾಲೂಕು ಕೇಂದ್ರಗಳಿಂದ ಘಟ್ಟದ ಕೆಳ ಭಾಗದ ತಾಲೂಕುಗಳಿಗೆ ತೆರಳಲು ಮುಖ್ಯ ಸಂಪರ್ಕ ಕೊಂಡಿಯಾಗಿರುವ ಶಿರಸಿ- ಕುಮಟಾ ರಸ್ತೆಯಲ್ಲಿ ಹೊಂಡಗಳು ಬಿದ್ದು, ಸಂಚರಿಸುವುದು ಪ್ರಯಾಸದಾಯಕವಾಗಿ ಪರಿಣಮಿಸಿದೆ.

ಕಳೆದ ಅನೇಕ ವರ್ಷಗಳಲ್ಲಿ ಅದೆಷ್ಟೋ ಅಪಘಾತಗಳಿಗೆ ಈ ರಸ್ತೆ ಕಾರಣವಾಗಿದೆ. ಹೊಂಡಗಳಲ್ಲಿ ಬಿದ್ದು ಅದೆಷ್ಟೋ ಸವಾರರು ವಾಹನಗಳನ್ನು ಜಖಂಗೊಳಿಸಿಕೊಂಡಿದ್ದಲ್ಲದೇ, ಗಾಯಗೊಂಡು ನೋವುಂಡಿದ್ದಾರೆ. ತುರ್ತು ಸಂದರ್ಭದಲ್ಲಿ ಈ ರಸ್ತೆಯಲ್ಲಿ ಅಂಬ್ಯುಲೆನ್ಸ್‌ಗಳನ್ನು ಓಡಿಸುವುದಂತೂ ಚಾಲಕರಿಗೆ ಸವಾಲಿನ ಕೆಲಸ. ಅಲ್ಲದೇ, ಕೇವಲ ಮಳೆಗಾಲದಲ್ಲಿ ಮಾತ್ರವಲ್ಲ, ವರ್ಷಪೂರ್ತಿ ಇದೇ ಪರಿಸ್ಥಿತಿ ಇರುವುದರಿಂದ ಈ ರಸ್ತೆಯ ದುರಸ್ತಿ ಕಾರ್ಯ ಬಹುಜನರ ಹಾಗೂ ಬಹು ಬೇಡಿಕೆಯದ್ದಾಗಿದೆ.

ಇತ್ತೀಚಿಗೆ ಈ ರಸ್ತೆಯ ಅಗಲೀಕರಣಕ್ಕೆ ಸರ್ಕಾರ ಮುಂದಾಗಿತ್ತು. ಟೆಂಡರ್ ಕಾರ್ಯವೆಲ್ಲ ಪೂರ್ಣಗೊಂಡು ಕಾಮಗಾರಿ ಪ್ರಾರಂಭಿಸುವ ಹಂತಕ್ಕೂ ಬರುತ್ತಿದ್ದಂತೆಯೇ ಅರಣ್ಯ ರಕ್ಷಣೆಯ ನೆಪದಲ್ಲಿ ಪರಿಸರವಾದಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಸದ್ಯ ಕಾಮಗಾರಿ ಆರಂಭವಾಗುವಂತೆ ಕಾಣುತ್ತಿಲ್ಲ. ಇದು ಜನರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪರಿಸರವಾದಿಗಳ ನಡೆಯ ವಿರುದ್ಧ ಬಹಿರಂಗವಾಗಿ ಸಾರ್ವಜನಿಕರು ಅಸಮಾಧಾನ ಹೊರಹಾಕುತ್ತಿದ್ದು, ಯೋಜನೆಗೆ ವಿರೋಧ ಮಾಡುವವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ.

ಅಭಿವೃದ್ಧಿಯಲ್ಲಿ ಹಿಂದುಳಿದಿದೆ

ಅಭಿವೃದ್ಧಿಯಲ್ಲಿ ಹಿಂದುಳಿದಿದೆ

ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಭೌಗೋಳಿಕವಾಗಿ ದೊಡ್ಡ ಜಿಲ್ಲೆ ಎನ್ನುವ ಹೆಮ್ಮ ಪಡೆದಿದೆ. 12 ತಾಲೂಕುಗಳನ್ನು ಹೊಂದಿರುವ ಜಿಲ್ಲೆ ಸಾಕಷ್ಟು ಪ್ರಕೃತಿ ಸೌಂದರ್ಯದಿಂದಲೇ ಪ್ರಸಿದ್ಧಿಯನ್ನು ಸಹ ಪಡೆದಿದೆ. ಆದರೆ ಇತರೆ ಜಿಲ್ಲೆಗೆ ಹೋಲಿಸಿದರೆ ಅಭಿವೃದ್ಧಿಯಲ್ಲಿ ಉತ್ತರ ಕನ್ನಡ ಸಾಕಷ್ಟು ಹಿಂದೆ ಉಳಿದಿದ್ದು, ಪ್ರಕೃತಿಯ ಹೆಸರೇ ಇದಕ್ಕೆ ಮುಳುವಾಗತೊಡಗಿದೆ. ಒಟ್ಟಾರೆಯಾಗಿ, ಜಿಲ್ಲೆಯ ಅಭಿವೃದ್ಧಿಗೆ ಪರಿಸರವಾದಿಗಳೇ ಅಡ್ಡಾಗಾಲು ಹಾಕುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆ

ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆ

ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗ ಜಿಲ್ಲೆಯ ಶತಮಾನದ ಕನಸಿನ ಯೋಜನೆ ಎಂದೇ ಹೇಳಲಾಗುತ್ತಿತ್ತು. ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗದ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆ ಇದಾಗಿದ್ದು, ಯೋಜನೆ ಜಾರಿಯಾದರೆ ಕರಾವಳಿ ಭಾಗದ ಜೊತೆಗೆ ಜಿಲ್ಲೆಯ ಅಭಿವೃದ್ಧಿಗೂ ಸಾಕಷ್ಟು ಸಹಕಾರಿಯಾಗಲಿದೆ ಎನ್ನುವ ಮಾತಿದೆ. ಹಲವು ವರ್ಷಗಳ ಹಿಂದೆಯೇ ಸರ್ಕಾರ ಯೋಜನೆಗೆ ಹಣ ಮೀಸಲಿಟ್ಟರೂ, ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಪರಿಸರವಾದಿಗಳ ತೀವ್ರ ವಿರೋಧದಿಂದ ಈ ಯೋಜನೆ ಇನ್ನೂ ಜಾರಿಯಾಗುತ್ತಿಲ್ಲ.

ಡೋಂಗಿ ಪರಿಸರ‘ವ್ಯಾದಿ’ಗಳು

ಡೋಂಗಿ ಪರಿಸರ‘ವ್ಯಾದಿ’ಗಳು

ಜಿಲ್ಲೆಯ ಅಭಿವೃದ್ಧಿಗೆ ವಿರೋಧ ಮಾಡುವ ಪರಿಸರವಾದಿಗಳು ಡೋಂಗಿ ಪರಿಸರವಾದಿಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಕೂಡ ಕಿಡಿಕಾರಿದ್ದರು. ಕೆಲ ದಿನದ ಹಿಂದೆ ಶಿರಸಿ- ಕುಮಟಾ ರಸ್ತೆ ಅಗಲೀಕರಣಕ್ಕೆ ಪರಿಸರವಾದಿಗಳು ವಿರೋಧ ಮಾಡುತ್ತಿರುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, "ಪರಿಸರವಾದಿಗಳಿಗೆ ಹತ್ತಾರು ಬಾರಿ ವಿನಂತಿ ಮಾಡಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ತೊಡಕು ಮಾಡಬೇಡಿ ಎಂದು. 350 ಕೋಟಿ ರೂ. ವೆಚ್ಚದಲ್ಲಿ ಮುಗಿಯಬೇಕಾಗಿದ್ದ ಅಂಕೋಲಾ- ಹುಬ್ಬಳ್ಳಿ ರೈಲ್ವೆ ಮಾರ್ಗ ಪರಿಸರವಾದಿಗಳ ವಿರೋಧದಿಂದ 1,450 ಕೋಟಿ ರೂ. ದಾಟಿದೆ. ಇದರಿಂದ ಏನು ಲಾಭವಾಗಿದೆ? ಎಂದು ಪರಿಸವಾದಿಗಳಿಗೆ ಕೇಳುತ್ತೇನೆ. ನಿಮ್ಮ ನಿಜವಾದ ಪರಿಸರ ಕಾಳಜಿ ಏನೆಂದು ಜನರಿಗೆ ತೋರಿಸಿ" ಎಂದಿದ್ದರು.

"ಜಿಲ್ಲೆಯ ಅಭಿವೃದ್ಧಿಗೆ ವಿರೋಧ ಮಾಡುವುದೇ ಪರಿಸರ ಕಾಳಜಿಯೇ? ಕುಮಟಾ- ಶಿರಸಿ ರಸ್ತೆ ಕಠಿಣವಿದ್ದು, ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ. ಎಲ್ಲಾ ಇಲಾಖೆಯಿಂದ ಒಪ್ಪಿಗೆ ಸಿಕ್ಕ ಮೇಲೂ, ನ್ಯಾಯಾಲಯಕ್ಕೆ ಹೋಗಿ ಮತ್ತೆ ಯೋಜನೆಗೆ ವಿರೋಧ ಮಾಡಿ ಹತ್ತು ವರ್ಷ ಯೋಜನೆ ಆಗದಂತೆ ನೋಡಿಕೊಳ್ಳುವುದರಿಂದ ಏನು ಲಾಭ? ಇವರು ಪರಿಸರವಾದಿಗಳಲ್ಲ, ಪರಿಸರವ್ಯಾದಿಗಳು" ಎಂದು ಹೆಬ್ಬಾರ್ ಕಿಡಿಕಾರಿದ್ದರು.

ಬೆಟ್ಟ ಕಡಿದು ಅಡಿಕೆ ತೋಟ ಮಾಡ್ಕೊಂಡಿದ್ದಾರೆ

ಬೆಟ್ಟ ಕಡಿದು ಅಡಿಕೆ ತೋಟ ಮಾಡ್ಕೊಂಡಿದ್ದಾರೆ

ಯೋಜನೆಗಳಿಗೆ ವಿರೋಧ ಮಾಡಿ ಅಭಿವೃದ್ಧಿಗೆ ವಿರೋಧ ಮಾಡುವ ಪರಿಸರವಾದಿಗಳ ಫೋಟೋವನ್ನು ಪಿಕ್ ಪಾಕೆಟ್ ಮಾಡುವವರ ಫೋಟೋ ಹಾಕಿದ ರೀತಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಾಕುತ್ತೇವೆ ಎಂದು ಪತ್ರಕರ್ತ ಪರಮಾನಂದ ಹೆಗಡೆ ಕಿಡಿಕಾರಿದ್ದಾರೆ.

ಹಾವು, ಕಪ್ಪೆ ಓಡಾಟಕ್ಕೆ, ಮಂಗಗಳ ಮಿಲನಕ್ಕೆ ಸಮಸ್ಯೆ ಆಗಲಿದೆ ಎಂದು ಶಿರಸಿ- ಕುಮಟಾ ರಸ್ತೆ ಅಗಲೀಕರಣಕ್ಕೆ ಪರಿಸರವಾದಿಗಳು ವಿರೋಧ ಮಾಡುತ್ತಿದ್ದಾರೆ. ಇದೇ ಪರಿಸರವಾದಿಗಳು ಬೆಟ್ಟವನ್ನು ಕಡಿದು ಅಡಿಕೆ ತೋಟ ಮಾಡಿಕೊಂಡಿದ್ದು, ಅಲ್ಲಿ ಪರಿಸರ ಹಾನಿಯಾಗಿಲ್ಲವಾ? ತಮ್ಮ ಮನೆಗೆ ಮರ ಕಡಿದು ಪೀಠೋಪಕರಣ ಮಾಡಿಕೊಂಡು, ಹುಲಿ- ಜಿಂಕೆ ಚರ್ಮ ಹಾಕಿಕೊಂಡು ಕೂರುವ ಪರಿಸರವಾದಿಗಳು, ಅನಾವಶ್ಯಕವಾಗಿ ರಸ್ತೆ ಅಗಲೀಕರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕಾರಣಕ್ಕೆ ಇವರೇ ನಮ್ಮ ಪರಿಸರವಾದಿಗಳು ಎಂದು ಸಾರ್ವಜನಿಕ ಸ್ಥಳದಲ್ಲಿ ಫೋಟೋ ಅಂಟಿಸಬೇಕಾಗುತ್ತದೆ. ಇದು ಜನರ ಎಚ್ಚರಿಕೆ. ನಿಮ್ಮ ಮನೆಗೆ ಓಡಾಡಲು ಒಳ್ಳೆಯ ರಸ್ತೆ ಬೇಕು, ಬೇರೆಯವರಿಗೆ ಬೇಡ ಎನ್ನುವ ಪರಿಸರವಾದಿಗಳ ತರ್ಕ ಅರ್ಥವಾಗುತ್ತಿಲ್ಲ. ಪರಿಸರವ್ಯಾದಿಗಳು ತಮ್ಮ ವ್ಯಾದಿಯನ್ನು ಗುಣಪಡಿಸಿಕೊಳ್ಳದಿದ್ದರೆ ಇದೇ ವ್ಯಾದಿ ನಿಮಗೆ ಕೊನೆಯಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+