ಕೋಟಿ ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಕಾರವಾರ ಸರ್ಕಾರಿ ಕಚೇರಿಗಳು
ಕಾರವಾರ, ಡಿಸೆಂಬರ್ 24: ಜನಸಾಮಾನ್ಯರು ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸದೆ ಇದ್ದಲ್ಲಿ ನೋಟಿಸ್, ದಂಡ ಇಲ್ಲವೇ ಸರ್ಕಾರ ನೀಡುವ ಸೌಲಭ್ಯಗಳನ್ನು ತಡೆಹಿಡಿಯಲಾಗುತ್ತದೆ. ಆದರೆ ಕಾರವಾರದಲ್ಲಿನ ಕೆಲ ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳು, ಸ್ಥಳೀಯ ನಗರಸಭೆಗೆ ಪಾವತಿಸಬೇಕಿದ್ದ 11 ಕೋಟಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಸರ್ಕಾರ ಸ್ಥಳೀಯ ಸಂಸ್ಥೆಗಳ ಮೂಲಕ ಪ್ರತಿ ಮನೆ ಮನೆಗಳಿಂದ ಮನೆ, ನೀರು, ಸ್ವಚ್ಚತೆ ಹೀಗೆ ಹತ್ತಾರು ಬಗೆಯ ತೆರಿಗೆ ವಿಧಿಸಿ ಪಡೆಯುತ್ತದೆ. ಅದರಲ್ಲಿಯೂ ಇದೀಗ ತೆರಿಗೆಯನ್ನು ದುಪ್ಪಟ್ಟು ಮಾಡಿರುವ ಸರ್ಕಾರ ಸಮಯಕ್ಕೆ ಸರಿಯಾಗಿ ತುಂಬದೆ ಇದ್ದಲ್ಲಿ ನೋಟೀಸ್ ಕೂಡ ನೀಡುತ್ತದೆ. ಆಗಲೂ ಕಟ್ಟದೆ ಇದ್ದಲ್ಲಿ ದಂಡ ಇಲ್ಲವೆ ಸರ್ಕಾರ ನೀಡುವ ಮೂಲಭೂತ ಸೌಲಭ್ಯಗಳನ್ನು ತಡೆಹಿಡಿಯಲಾಗುತ್ತದೆ. ಆದರೆ ಇಂತಹ ಕಟ್ಟು ನಿಟ್ಟಿನ ನಿಯಮಗಳು ಸರ್ಕಾರಿ ಕಚೇರಿ ಅಥವಾ ಸಂಘ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲವೋ ಎಂಬ ಅನುಮಾನ ಇದೀಗ ಜನಸಾಮಾನ್ಯರಿಗೆ ಮೂಡುವಂತಾಗಿದೆ.
ಕಾರವಾರ ನಗರಸಭೆಯೊಂದರಲ್ಲಿಯೇ ವಿವಿಧ ಸರ್ಕಾರಿ ಇಲಾಖೆಗಳಿಂದ ಕೋಟಿ ಕೋಟಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿವೆ. ಪ್ರಮುಖವಾಗಿ ನಗರದ ಪ್ರಮುಖ ವಾಣಿಜ್ಯ ಮಳಿಗೆಗಳು, ಪೆಟ್ಟಿಗೆ ಅಂಗಡಿಗಳು, ವಿವಿಧ ಕಚೇರಿ, ಅಂಗಡಿ, ಮನೆಗಳಿಂದ ನೀರು ಪೂರೈಕೆ ತೆರಿಗೆ, ಯುಜಿಡಿ ತೆರಿಗೆ, ಲೀಸ್ ನೀಡಿದ್ದ ತೆರಿಗೆ ಸೇರಿ ನಿರಂತರವಾಗಿ ಸುಮಾರು 11.48 ಕೋಟಿ ಬಾಕಿ ತೆರಿಗೆ ಬರುವುದು ಬಾಕಿ ಉಳಿದಿದೆ.

ನಗರಸಭೆಗೆ 11.48 ಕೋಟಿ ತೆರಿಗೆ ಬಾಕಿ
ಇದಲ್ಲದೆ ನ್ಯಾಯಾಲಯದಲ್ಲಿರುವ ಆಸ್ತಿಗಳು, ಬಿಟ್ಟುಹೋದ ಆಸ್ತಿಗಳು, ಸರ್ಕಾರೇತರ ಕಟ್ಟಡಗಳಾದ ಮೆಡಿಕಲ್ ಕಾಲೇಜು ವೈದ್ಯರ ಕ್ವಾಟ್ರಸ್ನಿಂದ 1.51 ಕೋಟಿ, ಪಿಡಬ್ಲೂಡಿ ಕ್ವಾಟ್ರಸ್ನಿಂದ 88 ಲಕ್ಷ, ಹಾಸ್ಟೆಲ್ನಂತಹ ಕಟ್ಟಡಗಳಿಂದಲೂ ತೆರಿಗೆಗಳು ಬಾಕಿ ಉಳಿದಿದೆ. ಮೆಡಿಕಲ್ ಕಾಲೇಜಿನಲ್ಲಿ ಸರ್ಕಾರಿ ಅಧೀನದಲ್ಲಿರುವ ಹಾಸ್ಟಲ್ ಗಳಾದರೂ ಕೂಡ ಇಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ಪಾವತಿ ಮಾಡಿಕೊಳ್ಳಲಾಗುತ್ತದೆ. ಯಾವ ಕಟ್ಟಡಗಳು ವಾಣಿಜ್ಯ ಅಥವಾ ವ್ಯಾಪಾರ ವ್ಯವಹಾರಕ್ಕೆ ಬಳಕೆಯಾಗುತ್ತವೆಯೋ ಆ ಸರ್ಕಾರಿ ಕಟ್ಟಡಗಳು ಕೂಡ ತೆರಿಗೆ ಪಾವತಿ ಮಾಡಬೇಕು ಎಂದು ನಗರಸಭೆ ಪೌರಾಯುಕ್ತರಾದ ಆರ್.ಪಿ ನಾಯ್ಕ ತಿಳಿಸಿದ್ದಾರೆ.

ನಗರಸಭೆಗೆ ಹೊರೆಯಾದ ತೆರಿಗೆ ಬಾಕಿ
ಇನ್ನು ಸರ್ಕಾರಿ ಕಚೇರಿಗಳು ಮಾತ್ರವಲ್ಲದೆ ಬಿಣಗಾದಲ್ಲಿರುವ ಖಾಸಗಿ ಗ್ರಾಸಿಮ್ ಇಂಡಸ್ಟ್ರೀಸ್ ಕಂಪನಿಯಿಂದಲೂ ಸುಮಾರು 1 ಕೋಟಿ ತೆರಿಗೆ ಬಾಕಿ ಇದೆ. ಕಂಪನಿ ನ್ಯಾಯಾಲಯದ ಮೊರೆ ಹೊಗಿತ್ತಾದರೂ ನ್ಯಾಯಾಕಯದಲ್ಲಿ ತೆರಿಗೆ ಪಾವತಿಸುವಂತೆ ಆದೇಶ ನೀಡಿಲಾಗಿದೆ. ಆದರೂ ಪಾವತಿ ಮಾಡಿಲ್ಲ. ಇದಲ್ಲದೆ ಕಡಲತೀರದಲ್ಲಿರುವ ಡ್ರೈವ್ ಇನ್, ಅಜ್ವೀ ಓಶನ್, ಮಿತ್ರ ಸಮಾಜ ಹೊಟೇಲ್ ಗಳಿಂದಲೂ ತೆರಿಗೆ ಬಾಕಿಇದೆ. ಇದೆಲ್ಲವೂ ಕಳೆದ ಹಲವಾರು ವರ್ಷಗಳಿಂದ ಬಾಕಿ ಉಳಿದಿದ್ದರು ಈ ಹಿಂದಿನ ಅಧಿಕಾರಿಗಳು ಯಾಕೆ ತೆರಿಗೆ ವಸೂಲಿಗೆ ಮುಂದಾಗಿಲ್ಲವೋ ಅರ್ಥವಾಗುತ್ತಿಲ್ಲ. ಎಲ್ಲವೂ ನಗರಸಭೆಯ ಮಧ್ಯಭಾಗದಲ್ಲಿದ್ದು ವ್ಯಾಪಾರ ವ್ಯವಹಾರ ನಡೆಸುತ್ತಿವೆ. ಇವರು ಕಡ್ಡಾಯವಾಗಿ ತೆರಿಗೆ ಪಾವತಿ ಮಾಡಲೇ ಬೇಕು. ಆದರೆ ಕೇಳೋರು ಹೇಳೋರು ಯಾರು ಇಲ್ಲದ ಕಾರಣದಿಂದಾಗಿ ಕೊಟ್ಯಾಂತರ ರೂ ತೆರಿಗೆ ಪಾವತಿ ಬಾಕಿ ಉಳಿದಿದ್ದು ಇದು ನಗರಸಭೆಗೆ ಹೊರೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

6 ಕೋಟಿ ಬಿಲ್ ಬಾಕಿ ಉಳಿಸಿಕೊಂಡ ನಗರ ಸಭೆ
ಇನ್ನು ಈ ಎಲ್ಲ ಕಚೇರಿಗಳು ಸರಿಯಾಗಿ ತೆರಿಗೆ ಪಾವತಿ ಮಾಡದ ಪರಿಣಾಮ ಇದೀಗ ನಗರಸಭೆ ಆದಾಯ ಕಡಿಮೆಯಾಗಿದೆ. ನೌಕಾರರ ಸಂಬಳ ಹೊರತುಪಡಿಸಿ ಪ್ರತಿ ತಿಂಗಳು 25 ಲಕ್ಷ ನಿರ್ವಹಣೆಗೆ ಕರ್ಚು ಮಾಡುವ ನಗರಸಭೆಗೆ ಇದೀಗ ತೆರಿಗೆ ವಸೂಲಿಯೂ ದೊಡ್ಡ ಸವಾಲಾಗಿದೆ. ಪರಿಣಾಮ ನಗರಸಭೆಯೂ ಹೆಸ್ಕಾಂಗೆ ಪಾವತಿಸಬೇಕಿದ್ದ ಬೀದಿ ದೀಪದ 48 ಲಕ್ಷ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಅಲ್ಲದೆ ತೆರಿಗೆ ಪಾವತಿಯಾಗದ ಕಾರಣ ನಗರಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಸಿದವರಿಗೆ ಸುಮಾರು 6 ಕೋಟಿ ಬಿಲ್ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಬಿಲ್ ಪಾವತಿಸುವಂತೆ ಕೇಳಿದರೆ ತಮಗೆ ತೆರಿಗೆ ಬರುವುದು ಬಾಕಿ ಇದೆ ಎನ್ನುತ್ತಾರೆ. ಕೆಲ ಸರ್ಕಾರಿ ಇಲಾಖೆಗಳಿಗೆ ತಮ್ಮ ಕಟ್ಟಡಗಳಿಗೆ ತೆರಿಗೆ ಕಟ್ಟಬೇಕು ಎಂಬುದೆ ಗೊತ್ತಿಲ್ಲ. ಈ ಬಗ್ಗೆ ಅಧಿಕಾರಿಗಳೂ ಕೂಡ ಒಮ್ಮೆಯೂ ತೆರಿಗೆ ಕೇಳಿರಲಿಲ್ಲ. ಇದೀಗ ನಗರಸಭೆ ಪೌರಾಯುಕ್ತ ಆರ್.ಪಿ ನಾಯ್ಕ ತೆರಿಗೆ ವಸೂಲಾತಿಗೆ ಮುಂದಾದಾಗ ವಿಚಾರ ಬೆಳಕಿಗೆ ಬಂದಿದೆ.

ಹಣ ಪಾವತಿಸುವಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆಗ್ರಹ
ಇನ್ನು ನಗರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಿ ಬಿಲ್ ಪಾವತಿಗಾಗಿ ಒತ್ತಾಯಿಸುತ್ತಿರುವವರಿಗೆ ನಗರಸಭೆ ಅಧಿಕಾರಿಗಳು ತಮಗೆ ಆದಾಯ ತೆರಿಗೆ ಬಾರದ ಕಥೆ ಹೇಳುತ್ತಿದ್ದಾರೆ ಎನ್ನಲಾಗಿದೆ. ಈ ಹಿಂದೆ ಇದ್ದ ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ನಿರ್ಲಕ್ಷ್ಯ ಮಾಡಿದ ಕಾರಣ ಇದೀಗ ಕೋಟಿ ಕೋಟಿ ತೆರಿಗೆ ಬಾಕಿ ಉಳಿಯುವಂತಾಗಿದೆ. ಆದರೆ ಇದಕ್ಕೂ ನಮಗೂ ಸಂಬಂಧ ಇಲ್ಲ. ಕೂಡಲೇ ನಗರಸಭೆ ನಮ್ಮ ಹಣವನ್ನು ಪಾವತಿ ಮಾಡಬೇಕು ಎಂದು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ಒಟ್ಟಾರೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿವಿಧ ಇಲಾಖೆಗಳು ತೆರಿಗೆ ಪಾವತಿಸಲು ತೋರಿದ ಬೇಜವಬ್ದಾರಿಯಿಂದಾಗಿ ಸರ್ಕಾರಕ್ಕೆ ಪಾವತಿಯಾಗಬೇಕಿದ್ದ ಕೊಂಟ್ಯಾಂತರ ಹಣ ಬಾಕಿ ಉಳಿದಿದ್ದು ದೊಡ್ಡ ನಷ್ಟ ಅನುಭವಿಸುವಂತಾಗಿದೆ. ಇನ್ನಾದರು ಅಧಿಕಾರಿಗಳು ಈ ಬಗ್ಗೆ ಲಕ್ಷ್ಯವಹಿಸಿ ಸರ್ಕಾರಕ್ಕೆ ಬರಬೇಕಿರುವ ತೆರಿಗೆಯನ್ನು ಪಾವತಿಸಿಕೊಳ್ಳಬೇಕಿದೆ.












Click it and Unblock the Notifications