17 ಲಕ್ಷ ಬಾಡಿಗೆ ಹಣ ಬಂದರೂ ನೋ ಯೂಸ್: ದುಸ್ಥಿತಿಯಲ್ಲಿ ಕಾರವಾರದ ಜಿಲ್ಲಾ ರಂಗಮಂದಿರ
ಕಾರವಾರ, ಡಿಸೆಂಬರ್ 04: ಜಿಲ್ಲಾ ಕೇಂದ್ರದಲ್ಲಿ ನಡೆಯುವ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳಿಗೆ ಮುಖ್ಯ ವೇದಿಕೆಯಾಗಿದ್ದ ಜಿಲ್ಲಾ ರಂಗಮಂದಿರ ಇದೀಗ ಸಂಪೂರ್ಣ ದುರಸ್ಥಿಗೆ ತಲುಪಿದೆ. ಕಳೆದ ಕೆಲ ತಿಂಗಳಿಂದ ಬಂದ್ ಮಾಡಲಾಗಿದ್ದ ರಂಗಮಂದಿರದಲ್ಲಿ ಪುನಃ ಕಾರ್ಯಕ್ರಮಗಳಿಗೆ ಅವಕಾಶ ನೀಡಿದ್ದರೂ, ದುರಸ್ಥಿಗೆ ತಲುಪಿದ ಚಾವಣಿ ಪದರುಗಳು ಉದುರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಜಿಲ್ಲಾ ಕೇಂದ್ರದಲ್ಲಿ ನಡೆಯುವ ಸಾಂಸ್ಕೃತಿ, ರಾಜಕೀಯ ಸರ್ಕಾರಿ, ಅರೆ ಸರ್ಕಾರಿ ಹೀಗೆ ಯಾವುದೇ ಕಾರ್ಯಕ್ರಮಗಳಾಗಿದ್ದರೂ ಮುಖ್ಯ ವೇದಿಕೆಯಾಗುತ್ತಿದ್ದ ರಂಗಮಂದಿರ ಇದೀಗ ರಂಗು ಕಳೆದುಕೊಂಡಿದೆ. ರಂಗಮಂದಿರದ ಮೇಲ್ಚಾವಣಿಗಳು ಸೋರುತ್ತಿದ್ದು, ಸ್ಲಾಬ್ಗಳು ಒಂದೊಂದಾಗಿಯೇ ಕಿತ್ತು ಬೀಳಲಾರಂಭಿಸಿವೆ. ಅಲ್ಲದೆ ಲೈಟಿಂಗ್, ಫ್ಯಾನ್, ಪೈಕಗಳು ಹಾಳಾಗಿದ್ದು, ಕಿಟಕಿ, ಬಾಗಿಲು, ಶಟರ್ಗಳು ತುಕ್ಕು ಹಿಡಿದು ಈಗಲೋ ಆಗಲೋ ಬಿಳುವಂತಿದೆ. ಅಲ್ಲದೆ ರಂಗ ಮಂದಿರ ಬಣ್ಣ ಮಾಸಿ ರಂಗು ಕಳೆದುಕೊಂಡು ಅದೆಷ್ಟೋ ತಿಂಗಳುಗಳಾಗಿದೆ.

ಮಾಲಾದೇವಿ ಮೈದಾನದಲ್ಲಿರುವ ರಂಗಮಂದಿರವನ್ನು 1986ರಲ್ಲಿ ನಿರ್ಮಾಣ ಮಾಡಲಾಗಿದ್ದು, 2011-12ರಲ್ಲಿ 1 ಕೋಟಿ ವೆಚ್ಚದಲ್ಲಿ ದುರಸ್ಥಿ ಕಾರ್ಯ ಕೂಡ ಮಾಡಲಾಗಿತ್ತು. ಈ ವೇಳೆ ಹೊಸ ಖುರ್ಚಿ, ಎಸಿ ಫಾಲ್ ಸಿಲಿಂಗ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ಬಳಿಕ ನಿರ್ವಹಣೆ ಕಾಣದ ಕಾರಣ ಇದೀಗ ರಂಗ ಮಂದಿರ ಸಂಪೂರ್ಣ ದುಸ್ಥಿಗೆ ತಲುಪಿದೆ. ಇದೇ ಕಾರಣಕ್ಕೆ ಕಳೆದ ಒಂದು ವರ್ಷದಿಂದ ರಂಗಮಂದಿರದಲ್ಲಿ ಕಾರ್ಯಕ್ರಮ ಬಂದ್ ಮಾಡಲಾಗಿತ್ತು.
ಆದರೆ ದುರಸ್ತಿಪಡಿಸದೆ ಇತ್ತೀಚಿಗೆ ಜಿಲ್ಲಾಡಳಿತದ ಕೆಲ ಕಾರ್ಯಕ್ರಮಗಳಿಗೆ ರಂಗಮಂದಿರ ಬಳಕೆಗೆ ನೀಡಲಾಗಿದ್ದು, ಕಾರ್ಯಕ್ರಮ ನಡೆಯುತ್ತಿರುವ ವೇಳೆಯೇ ಒಂದು ಭಾಗದಲ್ಲಿ ಚಾವಣಿಯ ಪದರು ಕುಸಿದು ಕಾರ್ಯಕ್ರಮದಲ್ಲಿದ್ದ ವಿದ್ಯಾರ್ಥಿಗಳು ಬೆದರಿದ್ದರು. ಹೀಗೆ ಬಿಟ್ಟರೆ ಮುಂದೊಂದಿನ ರಂಗಮಂದಿರದೊಳಗೆ ಸಾವು- ನೋವುಗಳಾಗುವ ಸಾಧ್ಯತೆಯೂ ಇದ್ದು, ಅತಿ ಶೀಘ್ರವೇ ಇದನ್ನು ದುರಸ್ತಿಪಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ನಾಲ್ಕು ವರ್ಷದಿಂದ ನಡೆಯದ ಸಭೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿರುವ ಜಿಲ್ಲಾ ರಂಗಮಂದಿರ ನೋಡಿಕೊಳ್ಳಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ಕೂಡ ಇದೆ. ಜಿಲ್ಲಾ ಪಂಚಾಯಿತಿ ಸಿಇಓ, ಎಸ್ಪಿ ಹಾಗೂ ಪಿಡಬ್ಲೂಯಡಿ ಇಂಜಿನಿಯರ್ಗಳು ಇದಕ್ಕೆ ಸದಸ್ಯರಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಇದಕ್ಕೆ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಆದರೆ 2019ರ ನಂತರ ಈ ಸಮಿತಿಯ ಒಂದು ಸಭೆ ಕೂಡ ನಡೆದಿಲ್ಲ.ರಂಗಮಂದಿರದ ಬಾಡಿಗೆ ಹಣ 17 ಲಕ್ಷ ರೂ ಇದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಖಾಯಂ ನಿರ್ದೇಶಕರಿಲ್ಲದ ಕಾರಣ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎನ್ನಲಾಗಿದೆ.
ಕಟ್ಟಡ ಸುಮಾರು 40 ವರ್ಷಗಳಷ್ಟು ಹಳೆಯದಾಗಿದೆ. ಈಗಾಗಲೇ ಮೂರು ಬಾರಿ ದುಸ್ಥಿಗೊಂಡಿದೆ. ಮಳೆಗಾಲದಲ್ಲಿ ಸೋರುವ ಕಾರಣಕ್ಕೆ ಬಂದ್ ಮಾಡಲಾಗಿತ್ತು. ಆದರೆ ಇದೀಗ ಪುನಃ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿದೆ. ಸಣ್ಣ ಪುಟ್ಟ ತೊಂದರೆಗಳಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಕೂಡ ಪರಿಶೀಲನೆ ನಡೆಸಿ ಪಿಡಬ್ಲೂಯಡಿ ಇಲಾಖೆಗೆ ಕಟ್ಟಡಸ ಸ್ಥಿತಿಗತಿ ಬಗ್ಗೆ ವರದಿ ನೀಡಲು ಸೂಚಿಸಿದ್ದಾರೆ. ವರದಿ ಬಳಿಕ ಕಟ್ಟಡದಿಂದ ಸಮಸ್ಯೆ ಇಲ್ಲ ಎಂದಾದರೆ ದುರಸ್ತಿ ಮಾಡಲಾಗುವುದು. ಇಲ್ಲವಾದಲ್ಲಿ ಸರ್ಕಾರಕ್ಕೆ ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡುವ ಬಗ್ಗೆ ಚರ್ಚಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ ರಾಮಚಂದ್ರ ತಿಳಿಸಿದ್ದಾರೆ.












Click it and Unblock the Notifications