ಕೋವಿಡ್, ಪ್ರವಾಹ ಎದುರಿಸಲು ಉತ್ತರ ಕನ್ನಡ ಸಜ್ಜು: ಸ್ವಾತಂತ್ರ್ಯೋತ್ಸವದಲ್ಲಿ ಸಚಿವ ಹೆಬ್ಬಾರ್ ಸಂದೇಶ
ಕಾರವಾರ, ಆಗಸ್ಟ್ 15: "ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಯಾವುದೇ ತಾಲೂಕಿನಲ್ಲೂ ಆಕ್ಸಿಜನ್ ಕೊರತೆಯಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ," ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತದಿಂದ ಕಾರವಾರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ 'ಅಮೃತ ಮಹೋತ್ಸವ' ಕಾರ್ಯಕ್ರಮದ ಸಂದೇಶ ಭಾಷಣದಲ್ಲಿ ಮಾತನಾಡಿದ ಅವರು, "ಕೋವಿಡ್ ಮೂರನೇ ಅಲೆ ಎದುರಿಸುವ ಸಿದ್ಧತೆಯಲ್ಲಿ 284 ಆಮ್ಲಜನಕ ಸಹಿತ ಪ್ರತ್ಯೇಕ ಹಾಸಿಗೆ, 1888 ಪ್ರತ್ಯೇಕ ಹಾಸಿಗೆ ಹಾಗೂ 284 ಬೆಂಬಲಿತ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. 104 ವೆಂಟಿಲೇಟರ್ಸ್ ಹಾಗೂ 155 ಐಸಿಯು ಹಾಸಿಗೆ ಮತ್ತು 52 ಮಕ್ಕಳ ವಿಶೇಷ ಐಸಿಯು ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ," ಎಂದು ತಿಳಿಸಿದರು.

ಹಾಸಿಗೆಗಳ ಸಿದ್ಧತೆ
"ದಾಂಡೇಲಿಯಲ್ಲಿ 10, ಭಟ್ಕಳ 37, ಶಿರಸಿ 24, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 70 ಆಮ್ಲಜನಕ ವ್ಯವಸ್ಥಿತ ಹಾಸಿಗೆ ಹಾಗೂ 50 ಐಸಿಯು ಹಾಸಿಗೆಗಳನ್ನು ಹೆಚ್ಚುವರಿಯಾಗಿ ಸಿದ್ಧಪಡಿಸಿಕೊಳ್ಳಲಾಗಿದೆ. ವಿಪರೀತ ಕಡಿಮೆ ತೂಕದಿಂದ ಬಳಲುತ್ತಿದ್ದ 184 ಮಕ್ಕಳಿಗೂ ಮೆಡಿಸಿನ್ ಕಿಟ್ ವಿತರಿಸಲಾಗಿದ್ದು, ಸಾಧಾರಣ ಕಡಿಮೆ ತೂಕ ಹೊಂದಿದ 3902 ಮಕ್ಕಳಲ್ಲಿ ಈವರೆಗೆ 2185 ಮಕ್ಕಳಿಗೆ ಮೆಡಿಸಿನ್ ಕಿಟ್ ವಿತರಿಸಲಾಗಿದೆ," ಎಂದು ಹೇಳಿದರು.

ಆಕ್ಸಿಜನ್ ಕೊರತೆಯಾಗದಂತೆ ಕ್ರಮ
"ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಕೊರತೆಯನ್ನು ನೀಗಿಸಲು ಮಹತ್ತರವಾದ ಹೆಜ್ಜೆಯನ್ನು ಇಡಲಾಗಿದೆ. ಈಗಾಗಲೇ 6 ಕೆಎಲ್ ಪ್ಲಾಂಟ್ ಅನ್ನು ಕ್ರಿಮ್ಸ್ನಲ್ಲಿ ಸ್ಥಾಪನೆ ಮಾಡಿದ್ದು, ಶಿರಸಿ ಹಾಗೂ ಭಟ್ಕಳಗಳಲ್ಲಿ 6 ಕೆಎಲ್ ಪ್ಲಾಂಟ್ ಅನ್ನು ಸ್ಥಾಪಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಆ ಮೂಲಕ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಆಕ್ಸಿಜನ್ ಪ್ಲಾಂಟ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಯಲ್ಲಾಪುರದಲ್ಲಿ ಆಕ್ಸಿಜನ್ ತಯಾರಿಕಾ ಘಟಕವನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ. ಶಿರಸಿ, ಕಾರವಾರ, ಭಟ್ಕಳದಲ್ಲಿ ಸ್ಥಾಪನೆಯಾಗಿದೆ. ಕೋವಿಡ್ 3ನೇ ಅಲೆ ಬಂದರೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ಎಲ್ಲಾ ಮುಂಜಾಗೃತಾ ಕ್ರಮಕೈಗೊಳ್ಳಲಾಗಿದೆ," ಎಂದು ತಿಳಿಸಿದರು.

5,52,379 ಜನರಿಗೆ ಕೋವಿಡ್ ಲಸಿಕೆ
"ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 5,52,379 ಮೊದಲನೇ ಸುತ್ತಿನ ಕೋವಿಡ್ ಲಸಿಕೆ ಹಾಗೂ 2ನೇ ಸುತ್ತಿನ ಲಸಿಕೆಯನ್ನು 1,95,150 ಜನ ಪಡೆದಿದ್ದಾರೆ. ಕೋವಿಡ್ ನಿಯಂತ್ರಿಸುವಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ, ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ," ಎಂದರು.

ಸಂಕಷ್ಟದಲ್ಲಿದ್ದವರಿಗೆ ಪರಿಹಾರ
"ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿನ 65,371 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಒಂದು ಬಾರಿ ಪರಿಹಾರ ಧನ ಸಹಾಯವಾಗಿ 5 ಸಾವಿರದಂತೆ ಒಟ್ಟು 32,68,55,000 ರೂ.ಗಳನ್ನು ಕಾರ್ಮಿಕರ ಖಾತೆಗಳಿಗೆ ನೇರವಾಗಿ ಬ್ಯಾಂಕ್ ಮೂಲಕ ಹಣ ಸಂದಾಯ ಮಾಡಲಾಗಿದೆ. ಹಾಗೆಯೇ ಎರಡನೇ ಅಲೆ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಧನ ಸಹಾಯವಾಗಿ 3 ಸಾವಿರದಂತೆ 49,054 ಕಾರ್ಮಿಕರ ಒಂದು ಬಾರಿ ಪರಿಹಾರ ಖಾತೆಗೆ ಒಟ್ಟು 14,71,62,000 ರೂ.ಗಳನ್ನು ಡಿ.ಬಿ.ಟಿ ಮೂಲಕ ನೇರವಾಗಿ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲಾಗಿದೆ," ಎಂದೂ ತಿಳಿಸಿದರು.

ಆರೋಗ್ಯ ಸಿಬ್ಬಂದಿಗೆ ಅಭಿನಂದನೆ
"ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು, ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿ, ಕಾರವಾರ ಮೆಡಿಕಲ್ ಕಾಲೇಜಿನ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಅತ್ಯಂತ ಸಮರ್ಥವಾಗಿ ಕೋವಿಡ್ ಮೊದಲ ಹಾಗೂ ಎರಡನೇ ಅಲೆಗಳನ್ನು ನಿರ್ವಹಿಸಿದ್ದು, ಅವರೆಲ್ಲರ ಕಾರ್ಯಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಂಭಾವ್ಯ ಮೂರನೆ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಲ್ಲಿಯೂ ಕೂಡ ಇವರೆಲ್ಲ ಇದೇ ರೀತಿ ಅಚ್ಚುಕಟ್ಟಾಗಿ ನಿರ್ವಹಿಸಲಿ ಎಂದು ಆಶಿಸುತ್ತೇನೆ," ಎಂದರು.

210 ಕೋಟಿ ಪರಿಹಾರ ಘೋಷಿಸಿದ ಸಿಎಂ
"ಕೋವಿಡ್ ನಿವಾರಣೆಯ ಸಂಕಷ್ಟದ ಸಮಯದಲ್ಲಿ ಪ್ರಕೃತಿ ಮುನಿಸಿಕೊಂಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂದೂ ಕಂಡರಿಯದ ಪ್ರಾಕೃತಿಕ ವಿಕೋಪ ಸಂಭವಿಸಿದೆ. ಇದನ್ನು ಯಶಸ್ವಿಯಾಗಿ ಜಿಲ್ಲಾಡಳಿತ ನಿಭಾಯಿಸಿದೆ. ನನ್ನ ವಿನಂತಿಯ ಮೇರೆಗೆ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ಮರು ದಿನವೇ ಜಿಲ್ಲೆಗೆ ಭೇಟಿ ನೀಡಿ 210 ಕೋಟಿ ರೂಪಾಯಿಗಳನ್ನು ಘೋಷಿಸಿದ್ದು, ಇದಕ್ಕೆ ಮುಖ್ಯಮಂತ್ರಿಗಳಿಗೆ ಆಭಾರಿಯಾಗಿದ್ದೇನೆ. ಮೇ ತಿಂಗಳಲ್ಲಿ ತೌಕ್ತೆ ಚಂಡಮಾರುತ ಅಪ್ಪಳಿಸಿ ಜಿಲ್ಲೆಯಲ್ಲಿನ 110 ಮನೆಗಳಿಗೆ ಸಮುದ್ರದ ನೀರು ನುಗ್ಗಿ ಹಾನಿಯಾಗಿದ್ದು, ಇದಕ್ಕೆ ರೂ 4.174 ಲಕ್ಷ ಪರಿಹಾರ ವಿತರಿಸಲಾಗಿದೆ."

ಅತಿವೃಷ್ಟಿಯಿಂದ ಅಪಾರ ಹಾನಿ
"ಅದೇ ರೀತಿ ಜುಲೈ ತಿಂಗಳುಗಳ ಅತಿವೃಷ್ಟಿಯಿಂದ ಅಪಾರ ಹಾನಿ ಉಂಟಾಗಿದ್ದು, ಈ ಪ್ರವಾಹ ಹಾನಿಯಲ್ಲಿ 7 ಜನ ಮೃತಪಟ್ಟಿದ್ದು, ಮೃತ ವಾರಸುದಾರರಿಗೆ ತಲಾ 5 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ. ಮನೆ ಹಾನಿಯಲ್ಲಿ 248 ಪೂರ್ಣ ಪ್ರಮಾಣ, 250 ತೀವ್ರತರ ಹಾಗೂ 1282 ಭಾಗಶಃದಂತೆ ಒಟ್ಟು 1780 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಪೂರ್ಣ ಪ್ರಮಾಣದಲ್ಲಿ ಹಾನಿಯಾದ 168 ಮನೆಗಳಿಗೆ 159.75 ಲಕ್ಷ, ತೀವ್ರತರದ 110 ಮನೆಗಳಿಗೆ 135.1 ಲಕ್ಷ, ಭಾಗಶಃ 516 ಮನೆಗಳಿಗೆ 24 ಲಕ್ಷ, ಒಟ್ಟು 794 ಮನೆಗಳಿಗೆ 318 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ."
"8205 ಅನಧಿಕೃತ ಮನೆಗಳಿಗೆ ನೀರು ನುಗ್ಗಿ ಬಟ್ಟೆ ಪಾತ್ರೆಗಳು ಹಾನಿಯಾಗಿದ್ದು, 8131 ಕುಟುಂಬಗಳಿಗೆ ತಲಾ 3800 ರೂ.ಗಳಂತೆ ಒಟ್ಟು 309 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಜಾನುವಾರುಗಳ ಪ್ರಾಣ ಹಾನಿಗೀಡಾಗಿದ್ದು, 45 ಜಾನುವಾರುಗಳಿಗೆ 9,55 ಲಕ್ಷ ಪರಿಹಾರ ವಿತರಿಸಲಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 1037.89 ಪೆಕ್ಟರ್ ಕೃಷಿ ಕ್ಷೇತ್ರ . 375.73 ಹೆಕ್ಟರ್ ತೋಟಗಾರಿಕಾ ಕ್ಷೇತ್ರ ಹಾನಿಯಾಗಿದ್ದು, ಪರಿಹಾರ ವಿತರಣೆಗೆ ಸಂಬಂಧ ಪರಿಹಾರ ತಂತ್ರಾಂಶದಲ್ಲಿ ವಿವರಗಳನ್ನು ಅಳವಡಿಸಲಾಗುತ್ತಿದೆ," ಎಂದು ಮಾಹಿತಿ ನೀಡಿದರು.

ಸರ್ಕಾರದಿಂದ 100 ಕೋಟಿ ರೂ. ಮಂಜೂರು
"ಭಾಗಶಃ 83 ದೋಣಿಗಳು, ಪೂರ್ಣ 1 ದೋಣಿ, 33 ಮೀನು ಬಲೆ ಸಂಪೂರ್ಣ ಹಾನಿಗೊಳಗಾಗಿದ್ದು, ಪರಿಹಾರ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಕೃತಿ ವಿಕೋಪ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಸರಕಾರಕ್ಕೆ 25 ಕೋಟಿ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ. ಮೂಲಭೂತ ಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆಯಲ್ಲಿ 106 ಕೋಟಿ ರೂ., ಲೋಕೋಪಯೋಗಿ ಇಲಾಖೆಯಲ್ಲಿ 401 ಕೋಟಿ ರೂ. ಅಂದಾಜು ಮೊತ್ತ ಹಾನಿಯಾಗಿದ್ದು, ಸರ್ಕಾರದಿಂದ 100 ಕೋಟಿ ರೂ. ಅನುದಾನ ಮಂಜೂರಾಗಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟಂತೆ 9600 ಲಕ್ಷ ಅಂದಾಜು ಮೊತ್ತ ಹಾನಿಗೊಂಡಿದ್ದು, ಅನುದಾನದ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ," ಎಂದು ತಿಳಿಸಿದರು.

ಆಕರ್ಷಕ ಕವಾಯತು
ಸ್ವಾತಂತ್ರ್ಯೋತ್ಸವ ಪರೇಡ್ನಲ್ಲಿ ಒಟ್ಟು ಆರು ಕವಾಯತು ತಂಡಗಳು ಭಾಗವಹಿಸಿದವು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್, ನಾಗರಿಕ ಪೊಲೀಸ್, ಮಹಿಳಾ ಪೊಲೀಸ್, ಅರಣ್ಯ ಇಲಾಖೆ, ಗೃಹ ರಕ್ಷಕ ದಳ ಹಾಗೂ ಕಲಾ ಮತ್ತು ವಿಜ್ಞಾನ ಕಾಲೇಜಿನ ನೇವಲ್ ಎನ್ಸಿಸಿ ತಂಡಗಳು ಆಕರ್ಷಕ ಕವಾಯತು ನಡೆಸಿತು. ಸಚಿವ ಶಿವರಾಮ ಹೆಬ್ಬಾರ್ ಧ್ವಜಾರೋಹಣಕ್ಕೂ ಪೂರ್ವ ಗೌರವ ವಂದನೆ ಸಲ್ಲಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಇನ್ಸ್ಪೆಕ್ಟರ್ ಫಕೀರಪ್ಪ ಕವಾಯತಿನ ನೇತೃತ್ವ ವಹಿಸಿದ್ದರು.
Recommended Video

ಅಧಿಕಾರಿಗಳಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ ಭೂತೆ, ಆರ್ಸಿಎಚ್ಒ ಡಾ. ರಮೇಶ್ ರಾವ್, ಕ್ರಿಮ್ಸ್ನ ಶ್ವಾಸಕೋಶ ತಜ್ಞ ಡಾ.ಶ್ರೀನಿವಾಸ್, ಕಾರವಾರ ನಗರಸಭೆಯ ಪೌರ ಕಾರ್ಮಿಕ ಶ್ರೀನಿವಾಸ ತಿರುಪತಯ್ಯ, ಭಟ್ಕಳ ಪುರಸಭೆಯ ಪೌರಕಾರ್ಮಿಕ ಅನೀಲ ಅಶೋಕ, ಸಿದ್ದಾಪುರ ಕೋಲಶಿರ್ಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ, ಕುಮಟಾ ವಾಲಗಳ್ಳಿ ಪಂಚಾಯತಿ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಕಾರವಾರ ರೋಟರಿ ಕ್ಲಬ್ ಅಧ್ಯಕ್ಷರು, ದಾಂಡೇಲಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ. ಎಸ್., ಕಾರವಾರ ಕದ್ರಾ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ಮಹೇಶ್ ಸವಸಂಗಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.












Click it and Unblock the Notifications