ಉ. ಕನ್ನಡದಲ್ಲಿ ವೃದ್ಧರು, ಅಶಕ್ತರಿಗೆ ಮನೆಯಲ್ಲೇ ಆಧಾರ್ ನೋಂದಣಿ
ಕಾರವಾರ, ನವೆಂಬರ್ 01: ಈಗ ಎಲ್ಲವೂ ಆಧಾರ್ ಮಯ! ಏನಿಲ್ಲದಿದ್ದರೂ ಪರವಾಗಿಲ್ಲ. ಆದರೆ ಆಧಾರ್ ಇಲ್ಲಾಂದ್ರೆ ಭಾರತದಲ್ಲಿ ಜೀವಿಸೋದು ಬಹಳ ಕಷ್ಟ ಅನ್ನುವ ಪರಿಸ್ಥಿತಿ ಈಗಿದೆ.
ಮಕ್ಕಳು, ಕಿರಿ ವಯಸ್ಸಿನವರು ಆಧಾರ್ ಕೇಂದ್ರಕ್ಕೆ ತೆರಳಿ ಅಥವಾ ಆಧಾರ್ ಅದಾಲತ್ ನಲ್ಲಿ ಭಾಗವಹಿಸಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ. ಆದರೆ ಆಧಾರ್ ಕೇಂದ್ರ ತಲುಪಲಾಗದವರ ಗತಿಯೇನು? ಅಂಥವರಿಗೆ ಇಲ್ಲಿದೆ ಸಿಹಿ ಸುದ್ದಿ.

ಆಧಾರ್ ಕೇಂದ್ರಕ್ಕೆ ಬರಲಾಗದ ಅಶಕ್ತ ವೃದ್ಧರು, ಅಂಗವಿಕಲರು ಹಾಗೂ ಮಾನಸಿಕ ಅಸ್ವಸ್ಥರಿಗೆ ಅವರಿರುವಲ್ಲಿಯೇ ಆಧಾರ್ ಅಧಿಕಾರಿಗಳು ತೆರಳಿ ಆಧಾರ್ ನೋಂದಣಿ ಮಾಡುವ ಪ್ರಕ್ರಿಯೆ ಉತ್ತರಕನ್ನಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದೆ.
ಈಗಾಗಲೇ ಕಾರವಾರದ 19 ಹಾಗೂ ಅಂಕೋಲಾದ 9 ಮಂದಿ ಆಧಾರ್ ಕೇಂದ್ರಕ್ಕೆ ಬರಲಾಗದವರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.
ವೋಟರ್ ಐಡಿ, ಪಡಿತರ ಕಾರ್ಡ್, ಪಿಂಚಣಿ ಸೌಲಭ್ಯ, ಗ್ಯಾಸ್ ಸಂಪರ್ಕ, ಪ್ಯಾನ್ ಕಾರ್ಡ್, ಪಾಸ್ಪೋರ್ಟ್, ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಸರ್ಕಾರದ ಸವಲತ್ತು ಪಡೆಯಲು ಆಧಾರ್ ಸಂಖ್ಯೆ ಅವಶ್ಯಕವಾಗಿರುವುದರಿಂದ ಹಿರಿಯರಿಗೂ ಇದೆಲ್ಲದರ ಲಾಭ ದೊರಕಿಸಿಕೊಡಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಉತ್ತರಕನ್ನಡ ಜಿಲ್ಲೆಯು ಗುಡ್ಡಗಾಡು ಪ್ರದೇಶ ಹೊಂದಿರುವುದರಿಂದ, ಅಲ್ಲಿ ನೆಲೆಸಿರುವ ಅಶಕ್ತರು, ಅಂಗವಿಕಲರು ನೋಂದಣಿ ಕೇಂದ್ರಕ್ಕೆ ಬರುವುದು ಕಷ್ಟಸಾಧ್ಯವಾಗಿತ್ತು. ಇದೀಗ ಅವರಿಗೆ ಆಧಾರ್ ಕೊಡಿಸುವ ಸಲುವಾಗಿ ಆಧಾರ್ ಸಿಬ್ಬಂದಿಯೇ ಅಗತ್ಯ ಪರಿಕರಗಳೊಂದಿಗೆ ಅವರ ಮನೆಗೆ ತೆರಳಿ ನೋಂದಣಿ ಮಾಡುತ್ತಿದ್ದಾರೆ.
ಆಧಾರ್ ಇಲ್ಲದೇ ಪಿಂಚಣಿ ಪಡೆಯಲು ಹೆಣಗಾಡುತ್ತಿದ್ದ ವೃದ್ಧರಿಗೆ ಇದರಿಂದ ತುಂಬಾ ಅನುಕೂಲವಾಗಿದ್ದು, ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.












Click it and Unblock the Notifications